ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ದಿನಗಳಲ್ಲಿ ಭೂಮಿ ಮೇಲೆ ಅತಿ ಹೆಚ್ಚು ಎ.ಸಿ. (ಹವಾನಿಯಂತ್ರಣ) ಬಳಕೆಯಿಂದ ತಾಪಮಾನ ಹೆಚ್ಚಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು.ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಎಸ್.ಕೆ.ಗುಂಡೂರಾವ್ ಉದ್ಯಾವನದಲ್ಲಿ ಕೃಷಿಕ ಅಲಯನ್ಸ್ ಸಂಸ್ಥೆ, ಮಾಂಡವ್ಯ ನಗರ ಅಲಯನ್ಸ್ ಸಂಸ್ಥೆ, ಸಕ್ಕರೆ ನಾಡು ಅಲಯನ್ಸ್ ಸಂಸ್ಥೆ ಇವರ ಸಹಯೋಗದಲ್ಲಿ ವಿಶ್ವ ಭೂ ದಿನ ಪ್ರಯುಕ್ತ ನಮ್ಮ ಶಕ್ತಿ ನಮ್ಮ ಭೂಮಿ ಘೋಷವಾಕ್ಯದೊಂದಿಗೆ ಜಾಗೃತಿ ಅಭಿಯಾನ ಮತ್ತು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಮನುಷ್ಯನನ್ನು ಬಿಟ್ಟರೆ ಉಳಿದ ಯಾವ ಜೀವಿಗಳಿಂದಲೂ ಪರಿಸರಕ್ಕೆ ಹಾನಿಯಿಲ್ಲ. ಜಾಗತಿಕ ತಾಪಮಾನ ಹೆಚ್ಚಾಗಲು ಮನುಷ್ಯನ ದುರ್ಬುದ್ಧಿ-ದುರಾಲೋಚನೆಯೇ ಕಾರಣ. ವಿನಾಶದ ಅಂಚಿನ ಜೀವಿಗಳಲ್ಲಿ ಮನುಷ್ಯನೂ ಕೂಡ ಇದ್ದಾನೆ ಎಂದು ಎಚ್ಚರಿಸಿದರು.2030ರ ವೇಳೆಗೆ, ಭೂಶಾಖ, ಜಲ, ಉಬ್ಬರವಿಳಿತ, ಗಾಳಿ ಮತ್ತು ಸೌರಶಕ್ತಿಯಂತಹ ಶುದ್ಧ ಇಂಧನ ಮೂಲಗಳ ಮೇಲೆ ನಿರ್ದಿಷ್ಟ ಒತ್ತು ನೀಡುವುದರೊಂದಿಗೆ ವಿಶ್ವಾದ್ಯಂತ ಉತ್ಪಾದಿಸುವ ನವೀಕರಿಸಬಹುದಾದ ಶಕ್ತಿಯ ಪ್ರಮಾಣವನ್ನು ಮೂರು ಪಟ್ಟು ಹೆಚ್ಚಿಸುವ ಗುರಿಯಾಗಿದೆ ಎಂದು ತಿಳಿಸಿದರು.ಮಾಂಡವ್ಯ ನಗರ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಶಿವಕುಮಾರ್, ನವೀಕರಿಸಬಹುದಾದ ಇಂಧನ ಬಳಕೆಯನ್ನು ಹೆಚ್ಚಿಸಲು ಮತ್ತು ಹವಾಮಾನ ಕ್ರಿಯೆಯನ್ನು ಚುರುಕುಗೊಳಿಸಲು ಒತ್ತು ನೀಡುವುದು ಅತ್ಯವಶ್ಯಕ. ನೈಸರ್ಗಿಕ ವಿಕೋಪಗಳಿಂದ ಭೂಮಿಯನ್ನು ರಕ್ಷಿಸುವುದು ಮತ್ತು ವಾಸಿಸಲು ಮತ್ತು ಸುಸ್ಥಿರವಾಗಿಡಲು ಉತ್ತಮ ಸ್ಥಳವನ್ನು ಒದಗಿಸುವುದು ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ ಎಂದರು.ಈ ವೇಳೆ ಎಸ್.ಕೆ.ಗುಂಡೂರಾವ್ ಉದ್ಯಾವನದಲ್ಲಿ ವಿವಿಧ ಸಸ್ಯಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಅಲಯನ್ಸ್ ಸಂಸ್ಥೆ 1ನೇ ಜಿಲ್ಲಾ ಉಪರಾಜ್ಯಪಾಲ ಕೆ.ಎಸ್.ಚಂದ್ರಶೇಖರ್‌, ಅಲಯನ್ಸ್ ಸಂಸ್ಥೆ ಜಿಲ್ಲಾ ಸಂಪುಟ ಕಾರ್ಯದರ್ಶಿ ಜಿ.ಧನಂಜಯ, ವಲಯಾಧ್ಯಕ್ಷ ಎಸ್.ಎಂ.ಲೋಕೇಶ್, ಸಕ್ಕರೆ ನಾಡು ಅಲಯನ್ಸ್ ಸಂಸ್ಥೆ ಅಧ್ಯಕ್ಷ ನಿತಿನ್‌ಗೌಡ, ಸ್ನೇಹ ಬಳಗದ ಪುರುಷೋತ್ತಮ್, ಕೃಷಿಕ ಅಲಯನ್ಸ್ ಸಂಸ್ಥೆ ಕಾರ್ಯದರ್ಶಿ ಡೇವಿಡ್, ಮಾಂಡವ್ಯ ನಗರ ಸಂಸ್ಥೆ ಶಂಕರೇಗೌಡ, ಪುಟ್ಟಬಸವೇಗೌಡ ಹಾಜರಿದ್ದರು.