ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಅರಣ್ಯ ಜಮೀನು ತೆರವು ಕಾರ್ಯಾಚರಣೆ ನೆಪದಲ್ಲಿ ರೈತರಿಗೆ ಕಿರುಕುಳ ನೀಡಲು ಯತ್ನಿಸಿದ ಅರಣ್ಯಾಧಿಕಾರಿಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿದ ಘಟನೆ ಮಸಗೋಡು ಗ್ರಾಮದಲ್ಲಿ ನಡೆದಿದೆ.ಮಸಗೋಡು ಗ್ರಾಮದ ಸರ್ವೇ ನಂ ೨೪/೧ ರಲ್ಲಿ ೨.೫೦ ಎಕರೆ ಜಾಗವನ್ನು ಜೆಸಿಬಿಯಿಂದ ತೆರೆವುಗೊಳಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಪೊಲೀಸ್ ರಕ್ಷಣೆಯಲ್ಲಿ ತೆರಳಿದ್ದರು. ಈ ಸಂದರ್ಭ ರೈತ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಕೆ.ಬಿ.ಸುರೇಶ್, ರೈತ ಸಂಘದ ತಾಲೂಕು ಅಧ್ಯಕ್ಷ ಅಧ್ಯಕ್ಷ ಕೆ.ಎಂ. ದಿನೇಶ್, ಜಿಲ್ಲಾ ಉಪಾಧ್ಯಕ್ಷ ಜಿ.ಎಂ.ಹೂವಯ್ಯ ನೇತೃತ್ವದಲ್ಲಿ ರೈತರು ಜಾಗ ತೆರವುಗೊಳಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.ರೈತರ ಕೃಷಿ ಭೂಮಿಯನ್ನು ಕಸಿದುಕೊಳ್ಳುವ ಯತ್ನವನ್ನು ಮಾಡಬಾರದು. ಕಳೆದ ಒಂದು ವರ್ಷದ ಹಿಂದಿನಿಂದಲೂ ರೈತ ಹೇಮಂತ್ ಅವರಿಗೆ ಅರಣ್ಯ ಇಲಾಖೆಯಿಂದ ಕಿರುಕುಳವಾಗುತ್ತಿದೆ. ಸ್ಥಳಕ್ಕೆ ಎ.ಸಿ.ಎಫ್ ಮತ್ತು ಡಿ ಎಫ್.ಒ ಭೇಟಿ ನೀಡಿ ಸಮಾಜಾಯಿಷಿ ನೀಡಬೇಕು ಎಂದು ರೈತರು ಒತ್ತಾಯಿಸಿದರು. ರೈತ ಮುಖಂಡ ಸುರೇಶ್ ಮಾತನಾಡಿ, ರೈತರ ಮೇಲಿನ ಕಿರುಕುಳವನ್ನು ಅರಣ್ಯ ಇಲಾಖೆ ನಿಲ್ಲಿಸಬೇಕು. ಇಂದು ಅರಣ್ಯ ಇಲಾಖೆಯವರು ಕಾಫಿ ತೋಟಕ್ಕೆ ನುಗ್ಗಿ ಜೆಸಿಬಿಯ ಮುಖಾಂತರ ತೋಟ ನಾಶಪಡಿಸಲು ಹೊರಟಿದ್ದಾರೆ. ಆನೆ ಮಾನವ ಸಂಘರ್ಷವನ್ನು ತಡೆಯಲು ವಿಫಲವಾಗಿರುವ ಇಲಾಖೆ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಖಂಡನೀಯ ಎಂದರು. ದಬ್ಬಾಳಿಕೆ ಹೀಗೆ ಮುಂದುವರಿದರೆ ಜಿಲ್ಲಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೂವಯ್ಯ ಮಾತನಾಡಿ, ಸಿ ಆ್ಯಂಡ್ ಡಿ ಭೂಮಿ ಸಮಸ್ಯೆ ಬಗಹರಿಸಲು ಸರ್ಕಾರ ವಿಶೇಷ ಸಮಿತಿ ರಚಿಸಿದೆ. ಅನುಪಾಲನ ವರದಿ ಸರ್ಕಾರಕ್ಕೆ ಸೇರುವ ಮೊದಲೇ ಅರಣ್ಯ ಇಲಾಖೆ ಸಣ್ಣಪುಟ್ಟ ರೈತರ ಜಮೀನನ್ನು ಕಸಿದುಕೊಳ್ಳುತ್ತಿರುವುದು ಅನ್ಯಾಯವಾಗಿದೆ. ಇದನ್ನು ರೈತ ಸಂಘ ವಿರೋಧಿಸುತ್ತದೆ ಎಂದು ಹೇಳಿದರು. ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ವಾಪಸ್‌ ತೆರಳಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರುಗಳಾದ ಲಕ್ಷ್ಮಣ, ಬಿ.ಪಿ.ಮೊಗಪ್ಪ ಎಸ್.ಎಂ.ಡಿಸಿಲ್ವಾ, ಮಚ್ಚಂಡ ಅಶೋಕ್. ವಿ.ಎಂ.ವಿಜಯ, ಹೆಚ್.ಈ.ರಮೇಶ್, ಕುಶಾಲಪ್ಪ, ದೇಶ್‌ರಾಜ್ ಇದ್ದರು. ಹಾಗೂ ಇನ್ನಿತರರು ಭಾಗಿಯಾಗಿದ್ದರು. ಅರಣ್ಯ ಇಲಾಖೆ ಡಿ ಆರ್ ಎಫ್ ಗಳಾದ ಪ್ರಶಾಂತ್. ಲೋಹಿತ್. ಕಿರಣ್. ರೇಣುಕುಮಾರ್ ಹಾಗು ಸಿಬ್ಬಂದಿ ಇದ್ದರು.