ಕನ್ನಡಪ್ರಭ ವಾರ್ತೆ ಮುಧೋಳ
ತಾಲೂಕಿನ ಮುದ್ದಾಪುರದ ಜೆ.ಕೆ. ಸಿಮೆಂಟ್ಸ್ ಆಡಳಿತ ಮಂಡಳಿ ಹಮ್ಮಿಕೊಂಡಿರುವ ಹೆಚ್ಚುವರಿ ಸಿಮೆಂಟ್ಸ್ ತಯಾರಿಕಾ ಘಟಕದ ಅಳವಡಿಕೆ ಪ್ರಕ್ರಿಯೆಯನ್ನು ವಿರೋಧಿಸಿ ಸ್ಥಳೀಯ ರೈತರು ಮತ್ತು ಸಾರ್ವಜನಿಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಬುಧವಾರ 3ನೇ ದಿನಕ್ಕೆ ಕಾಲಿಟ್ಟಿದೆ.ಕಾರ್ಖಾನೆಯಿಂದಾಗುತ್ತಿರುವ ನಿರಂತರ ಪರಿಸರ ಮಾಲಿನ್ಯ ಮತ್ತು ಆಡಳಿತ ಮಂಡಳಿಯ ನಡೆಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಂದಾಯ ನಿರೀಕ್ಷಕರ ವರದಿಯಲ್ಲಿ ಗಂಭೀರ ಆರೋಪಗಳು ಹಲವು ತಿಂಗಳಿಂದ ರಂಗಪ್ಪ ತುಳಸಿಗೇರಿ ಹಾಗೂ ಇತರರು ನೀಡಿದ್ದ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಲೋಕಾಪುರ ಕಂದಾಯ ನಿರೀಕ್ಷಕರು ಸ್ಥಳ ಪರಿಶೀಲನೆ ನಡೆಸಿ ತಹಸೀಲ್ದಾರರಿಗೆ ವರದಿ ಸಲ್ಲಿಸಿದ್ದರು. ವರದಿಯಲ್ಲಿ ಕಾರ್ಖಾನೆಯಿಂದ ಸ್ಥಳೀಯ ಗ್ರಾಮಸ್ಥರಿಗೆ ಎದುರಾಗಿರುವ ಗಂಭೀರ ಸಮಸ್ಯೆಗಳನ್ನು ಉಲ್ಲೇಖಿಸಿ ಡಿಸೆಂಬರ್ನಲ್ಲಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ವರದಿ ನೀಡಲಾಗಿದೆ.
ಕಾರ್ಖಾನೆಯ ಸುತ್ತಮುತ್ತಲಿನ ಜಮೀನುಗಳ ಬೋರ್ವೆಲ್ ನೀರು ಕಲುಷಿತಗೊಂಡಿದ್ದು, ಮನುಷ್ಯರು ಮತ್ತು ದನಕರುಗಳಿಗೆ ಕುಡಿಯಲು ಯೋಗ್ಯವಿಲ್ಲದಂತಾಗಿದೆ. ಕಾರ್ಖಾನೆಯ ಧೂಳಿನಿಂದ ನೂರಾರು ಎಕರೆ ಜಮೀನಿನ ಬೆಳೆಗಳು ನಾಶವಾಗುತ್ತಿವೆ. ಗಣಿಗಾರಿಕೆ ಮತ್ತು ಕಾರ್ಖಾನೆಯ ಧೂಳಿನಿಂದ ಸ್ಥಳೀಯರಲ್ಲಿ ಕೆಮ್ಮು, ಅಸ್ತಮಾದಂತಹ ಶ್ವಾಸಕೋಶದ ಕಾಯಿಲೆಗಳು ಹೆಚ್ಚಾಗುತ್ತಿವೆ.ಬೊಮ್ಮನಬುದ್ಧಿ ಗ್ರಾಮದ ವಾಸದ ಮನೆಗಳು ಮತ್ತು ತೋಟದ ಮನೆಗಳ ಮೇಲೆ ನಿರಂತರವಾಗಿ ಧೂಳು ಕುಳಿತುಕೊಳ್ಳುತ್ತಿದ್ದು, ಮನೆಗಳ ಸ್ವರೂಪ ಬದಲಾಗುತ್ತಿದೆ. ಬಾಯ್ಲರ್ಗೆ ಘನತ್ಯಾಜ್ಯ ಬಳಸುತ್ತಿರುವುದರಿಂದ ಹೊರಹೊಮ್ಮುವ ದುರ್ವಾಸನೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
2025ರ ಜುಲೈ 2ರಂದು ನಡೆದ ಸಾರ್ವಜನಿಕ ಪರಿಸರ ಆಲಿಕೆ ಸಭೆಯಲ್ಲಿ ಸ್ಥಳೀಯ ರೈತರಿಗೆ ಸರಿಯಾದ ಮಾಹಿತಿ ನೀಡಿರಲಿಲ್ಲ. ಕಾರ್ಖಾನೆಯ ಸಿಬ್ಬಂದಿಯನ್ನೇ ರೈತರೆಂದು ಬಿಂಬಿಸಿ ಸುಳ್ಳು ಹೇಳಿಕೆಗಳನ್ನು ಕೊಡಿಸುವ ಮೂಲಕ ಸಭೆಯ ದಿಕ್ಕು ತಪ್ಪಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಜಿ.ಕೆ.ಸಿಮೆಂಟ್ ಮತ್ತು ಮೈನ್ಸ್ ನಡೆಸುವ ಭಾರಿ ಪ್ರಮಾಣದ ಸ್ಫೋಟಗಳಿಂದಾಗಿ ಪೆಟ್ಲುರ್, ಹಲಕಿ, ನಿಂಗಾಪುರ ಮತ್ತು ಮುದ್ದಾಪುರ ಗ್ರಾಮಗಳ ಮನೆಗಳು ಬಿರುಕು ಬಿಟ್ಟು ಬೀಳುವ ಸ್ಥಿತಿಯಲ್ಲಿವೆ. ಸ್ಫೋಟದ ಧಕ್ಕೆಗೆ ಬೋರ್ವೆಲ್ಗಳು ಕುಸಿತ ಕಂಡು ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.
ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಕಾರ್ಖಾನೆಯ ಆಡಳಿತ ಮಂಡಳಿ ಬಳಿ ಹೋದರೆ, ನಮ್ಮ ಘಟಕ ಇರುವುದು ಮುದ್ದಾಪುರ ವ್ಯಾಪ್ತಿಯಲ್ಲಿ, ನಿಮಗೇನು ತೊಂದರೆ ಎಂದು ರೈತರನ್ನು ಹೆದರಿಸಿ ದಬ್ಬಾಳಿಕೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಕಂದಾಯ ಅಧಿಕಾರಿಗಳ ಮುಂದೆ ತಿಳಿಸಿದ್ದಾರೆ.ಲೋಕಾಯುಕ್ತ ಮೆಟ್ಟಿಲೇರಿದರೂ ನ್ಯಾಯ ಸಿಗಲಿಲ್ಲ:
ಕಂದಾಯ ನಿರೀಕ್ಷಕರ ವರದಿಯ ಹಿನ್ನೆಲೆಯಲ್ಲಿ ತಹಸೀಲ್ದಾರ್, ಜಿಲ್ಲಾಧಿಕಾರಿಗೆ ಸಮಗ್ರ ವರದಿ ಸಲ್ಲಿಸಿದ್ದರು. ಆದರೆ, ಸರ್ಕಾರದಿಂದ ಸೂಕ್ತ ಕ್ರಮ ಕೈಗೊಳ್ಳದ ಕಾರಣ, ಬೊಮ್ಮನಬುದ್ಧಿ ಗ್ರಾಮದ ರಂಗಪ್ಪ ತುಳಸಿಗೇರಿ 2026ರ ಫೆಬ್ರವರಿಯಲ್ಲಿ ಲೋಕಾಯುಕ್ತಕ್ಕೆ ಅಧಿಕೃತ ದೂರು ಸಲ್ಲಿಸಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದ್ದು, ರೈತರಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ ಎಂದು ಅನ್ನದಾತರು ಆರೋಪಿಸಿದ್ದಾರೆ.ಅಧಿಕಾರಿಗಳ ನಡೆಗೆ ರೈತರ ಆಕ್ಷೇಪ: ಧರಣಿ ನಿರತರನ್ನು ಭೇಟಿ ಮಾಡಿದ ಅಧಿಕಾರಿಗಳ ನಡೆ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ರೈತ ಸಂಘದ ರಾಜ್ಯಾಧ್ಯಕ್ಷ ಶಂಕರಗೌಡ ಹಿರೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಖಾನೆಯ ವಿಸ್ತರಣಾ ಯೋಜನೆಗೆ ತಕ್ಷಣವೇ ಬ್ರೇಕ್ ಹಾಕಬೇಕು ಮತ್ತು ಅಲ್ಲಿಯವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಧರಣಿನಿರತ ರೈತರು ಎಚ್ಚರಿಸಿದ್ದಾರೆ. ಜಿಲ್ಲಾಡಳಿತ ಮತ್ತು ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ರೈತ ಸಂಘದ ಶಂಕರಗೌಡ ಹಿರೇಗೌಡ, ಮಲ್ಲನಗೌಡ ರಡ್ಡಿ, ಶೈಲೇಶ ಹಂಪಿಹೊಳಿ, ವಿಷ್ಣು ತುಳಸಿಗೇರಿ, ಮಲಪ್ಪ ಬೆಳ್ಳಿ, ಯಲ್ಲಪ್ಪ ಸಿರಗುಂಪಿ, ಸುರೇಶ ಕಿವಡಿ, ಮುತ್ತಪ್ಪ ಬಿಲ್ಲಾರ, ಹನಮಂತ ಕಿವಡಿ, ತಹಶೀಲ್ದಾರ್ ಡಾ. ಚಿಕ್ಕಪ್ಪ ನಾಯಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಜಮಖಂಡಿ ಉಪವಿಭಾಗದ ಅಧಿಕಾರಿ ಶ್ವೇತಾ ಬಿಡಕರ್ ಅವರು ರೈತರ ಧರಣಿ ವೇದಿಕೆಗೆ ಭೇಟಿ ನೀಡಿದ್ದರು. ಆದರೆ, ಅವರು ಸಂತ್ರಸ್ತ ರೈತರಿಗೆ ನ್ಯಾಯ ಕೊಡಿಸುವ ಭರವಸೆ ನೀಡುವ ಬದಲು, ಜೆ.ಕೆ. ಸಿಮೆಂಟ್ ಕಾರ್ಖಾನೆಯ ಪರವಾಗಿ ವಕಾಲತ್ತು ವಹಿಸಿ ಗುಣಗಾನ ಮಾಡಿದ್ದಾರೆ. ಪ್ರತಿಭಟನಾ ನಿರತ ಅನ್ನದಾತರ ಮೇಲೆ ವಿವಿಧ ರೀತಿಯಲ್ಲಿ ಒತ್ತಡ ಹೇರಿ, ಹೇಗಾದರೂ ಮಾಡಿ ಧರಣಿ ಮೊಟಕುಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
- ಸುರೇಶ ಕಿವಡಿ, ರೈತ ಮುಖಂಡ