7 ಗಂಟೆ ವಿದ್ಯುತ್‌ಗಾಗಿ ರೈತರ ಹೋರಾಟ

| Published : May 22 2024, 12:51 AM IST

ಸಾರಾಂಶ

ಕಳೆದ ಒಂದು ವಾರದಿಂದ ನೀರಿಲ್ಲದೇ ಬೆಳೆದ ಬೆಳೆಗಳು ಒಣಗಿ ಹೋಗುತ್ತಿದ್ದು, ಜಿಲ್ಲಾಧಿಕಾರಿಗಳ ಆದೇಶದಂತೆ ಹೆಸ್ಕಾಂನವರು ನೀಡುತ್ತಿರುವ ಎರಡು ದಿನಕ್ಕೊಮ್ಮೆ ನಾಲ್ಕು ತಾಸು ವಿದ್ಯುತ್ ಸಾಕಾಗುತ್ತಿಲ್ಲ. ಬೆಳಗಾವಿ ಜಿಲ್ಲೆಯಂತೆ ತಮಗೂ 7 ಗಂಟೆ ವಿದ್ಯುತ್‌ ನೀಡುವಂತೆ ಆಗ್ರಹಿಸಿ ಜಮಖಂಡಿ-ಕಾಗವಾಡ ರಾಜ್ಯ ಹೆದ್ದಾರಿ ಬಂದ್ ಮಾಡಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕಳೆದ ಒಂದು ವಾರದಿಂದ ನೀರಿಲ್ಲದೇ ಬೆಳೆದ ಬೆಳೆಗಳು ಒಣಗಿ ಹೋಗುತ್ತಿದ್ದು, ಜಿಲ್ಲಾಧಿಕಾರಿಗಳ ಆದೇಶದಂತೆ ಹೆಸ್ಕಾಂನವರು ನೀಡುತ್ತಿರುವ ಎರಡು ದಿನಕ್ಕೊಮ್ಮೆ ನಾಲ್ಕು ತಾಸು ವಿದ್ಯುತ್ ಸಾಕಾಗುತ್ತಿಲ್ಲ. ಬೆಳಗಾವಿ ಜಿಲ್ಲೆಯಂತೆ ತಮಗೂ 7 ಗಂಟೆ ವಿದ್ಯುತ್‌ ನೀಡುವಂತೆ ಆಗ್ರಹಿಸಿ ಜಮಖಂಡಿ-ಕಾಗವಾಡ ರಾಜ್ಯ ಹೆದ್ದಾರಿ ಬಂದ್ ಮಾಡಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.

ರೈತರು ಏಕಾಏಕಿ ರಸ್ತೆ ಬಂದ್ ಮಾಡುತ್ತಿದ್ದಂತೆ ತೇರದಾಳ ಪೊಲೀಸ್ ಠಾಣಾಧಿಕಾರಿ ಆಕ್ಷೇಪ ವ್ಯಕ್ತಪಡಿಸಿದರು. ಜತೆಗೆ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಆದರೆ, ಇದರಿಂದ ರೈತರು ಪೊಲೀಸರ ಮೇಲೆಯೇ ಗರಂ ಆದರು. ಏನೇ ಆದರೂ ನಾವು ಪ್ರತಿಭಟನೆ ನಡೆಸಿಯೇ ಸಿದ್ಧ, ಪೊಲೀಸರು ಏನು ಬೇಕಾದರೂ ಕ್ರಮಕೈಗೊಳ್ಳಿ ಎಂದು ಪಟ್ಟು ಹಿಡಿದರು. ಇದರಿಂದ ಸ್ಥಳದಲ್ಲಿ ಗದ್ದಲ ಏರ್ಪಟ್ಟಿತ್ತು. ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಈ ಮುಂಚೆ ಸೋಮವಾರವರೆಗೆ ಕಾಲಾವಕಾಶ ಕೇಳಿದ್ದರು. ಆದರೆ ಇಂದಿನವರೆಗೂ ಸಮಸ್ಯೆ ಇತ್ಯರ್ಥವಾಗದ ಕಾರಣ ರೈತರು ಅನಿವಾರ್ಯವಾಗಿ ರಸ್ತೆ ಬಂದ್‌ ಮಾಡುತ್ತಿದ್ದೇವೆ ಎಂದು ತಿಳಿಸಿದರು.ಈ ವೇಳೆ ಪೊಲೀಸರು ಅನುಮತಿ ಇಲ್ಲದೆ ಬಂದ ಮಾಡುವುದು ಸರಿ ಅಲ್ಲ. ಈ ಬಗ್ಗೆ ಮೊದಲೇ ನಮಗೆ ಮನವಿ ನೀಡಬೇಕು ಎಂದಾಗ, ಪ್ರತಿಭಟನಾನಿರತ ರೈತರು ಪ್ರತಿಭಟನೆಯ ಬಗ್ಗೆ ಒಂದು ದಿನ ಮೊದಲೇ ನಿಮಗೆ ಮನವಿ ಸಲ್ಲಿಸಿದ್ದೇವೆ. ನಮ್ಮ ಬೆಳೆಗಳು ಕಣ್ಣೆದುರಲ್ಲೇ ಹಾಳಾಗುತ್ತಿವೆ. ನಮ್ಮ ಮನವಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ನಮ್ಮನ್ನು ನೀವು ಬಂಧಿಸಿದರೂ ನಾವು ಪಟ್ಟು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಕ್ಷೇತ್ರದ ಶಾಸಕ ಸಿದ್ದು ಸವದಿ ಹಾಗೂ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಕೂಡ ರೈತರ ಪ್ರತಿಭಟನೆಗೆ ಸಾಥ್‌ ನೀಡಿದರು. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಎಚ್ಚೆತ್ತ ತಹಸೀಲ್ದಾರ್‌ ವಿಜಯಕುಮಾರ ಕಡಕೋಳ ಸ್ಥಳಕ್ಕಾಗಮಿಸಿ ಎರಡು ದಿನ ೬ ಗಂಟೆವರೆಗೆ ಮತ್ತು ನಂತರ ನಾಲ್ಕು ತಾಸು ವಿದ್ಯುತ್ ನೀಡಲಾಗುವುದು. ಅಷ್ಟರಲ್ಲಿಯೇ ಮಳೆ ಅಥವಾ ನದಿಗೆ ನೀರು ಬಂದರೆ ಮತ್ತೆ ೬ ತಾಸು ವಿದ್ಯುತ್ ನೀಡಲಾಗುವುದು ಎಂದು ಭರವಸೆ ನೀಡಿದರು. ತಹಸೀಲ್ದಾರ್‌ ಭರವಸೆ ಹಿನ್ನೆಲೆಯಲ್ಲಿ ರೈತರು ತಮ್ಮ ಹೋರಾಟವನ್ನು ಕೈಬಿಟ್ಟಿದ್ದು, ಇದಕ್ಕೆ ತಪ್ಪಿದಲ್ಲಿ ಮತ್ತೇ ನಮ್ಮ ಹೋರಾಟ ಮುಂದುವರಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಹಾವೀರ ಭಿಲವಡಿ, ವರ್ಧಮಾನ ಕೋರಿಗೇರಿ, ಮಹಾವೀರ ಕೊಟಕನೂರ, ಜಿನ್ನಪ್ಪ ಹೊಸೂರ, ಮಹಾವೀರ ಕಾಗಿ, ಸಾಗರ ಸಾವಂತನವರ, ಶೀತಲ ಕೋರಿಗೇರಿ, ಬಾಬು ಕುಲಗೋಡ, ಸುರೇಶ ಅಕ್ಕಿವಾಟ, ಭುಜಬಲಿ ವೆಂಕಟಾಪುರ, ಧನಪಾಲ ಯಲ್ಲಟ್ಟಿ, ಪ್ರಭು ಹಿಪ್ಪರಗಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು. ಅಲ್ಲದೇ, ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಹಾಗೂ ಹೆಸ್ಕಾಂ ಇಲಾಖೆಯ ಎಲ್ಲಾ ಅಧಿಕಾರಿಗಳು ಸಹ ಉಪಸ್ಥಿತರಿದ್ದರು.ಕಳೆದ ಒಂದು ವಾರದಿಂದ ನೀರಿಲ್ಲದೇ ಬೆಳೆದ ಬೆಳೆಗಳು ಒಣಗುತ್ತಿವೆ. ಜಿಲ್ಲಾಧಿಕಾರಿಗಳ ಆದೇಶದಂತೆ ಹೆಸ್ಕಾಂನವರು ನೀಡುತ್ತಿರುವ ಎರಡು ದಿನಕ್ಕೊಮ್ಮೆ ನಾಲ್ಕು ತಾಸು ವಿದ್ಯುತ್ ಸಾಕಾಗುತ್ತಿಲ್ಲ. ಬೆಳಗಾವಿ ಜಿಲ್ಲೆಯಂತೆ ತಮಗೂ 7 ಗಂಟೆ ವಿದ್ಯುತ್‌ ನೀಡಿ. ಈಗ ತಹಸೀಲ್ದಾರ್‌ ಅವರು ಭರವಸೆ ನೀಡಿದ್ದಾರೆ. ಅದರಂತೆ ನಡೆದುಕೊಳ್ಳದಿದ್ದರೆ ಮತ್ತೆ ಹೋರಾಟ ಮುಂದುವರಿಸುತ್ತೇವೆ.

- ಮಹಾವೀರ ಭಿಲವಡಿ, ರೈತ ಮುಖಂಡ.