ಮರ್ಯಾದೆಗೆ ಅಂಜಿ ಗರ್ಭವತಿ ಮಗಳ ಹತ್ಯೆಗೆ ಯತ್ನಿಸಿದ ತಂದೆ

| Published : Jun 30 2025, 12:34 AM IST

ಸಾರಾಂಶ

ಮದುವೆಗೆ ಮೊದಲೇ ಗರ್ಭವತಿಯಾದ ಮಗಳನ್ನು ತಂದೆ ಮರ್ಯಾದೆಗೆ ಅಂಜಿ ಹತ್ಯೆ ಮಾಡಲು ಯತ್ನಿಸಿದ ಘಟನೆ ತಾಲೂಕಿನ ಕಣ್ಣೂರು ಗ್ರಾಮದಲ್ಲಿ ನಡೆದಿದ್ದು, ಈ ಮೂಲಕ ಮರ್ಯಾದ ಹತ್ಯೆಗೆ ಯತ್ನಿಸಿದ ಪ್ರಕರಣ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಸೊರಬ

ಮದುವೆಗೆ ಮೊದಲೇ ಗರ್ಭವತಿಯಾದ ಮಗಳನ್ನು ತಂದೆ ಮರ್ಯಾದೆಗೆ ಅಂಜಿ ಹತ್ಯೆ ಮಾಡಲು ಯತ್ನಿಸಿದ ಘಟನೆ ತಾಲೂಕಿನ ಕಣ್ಣೂರು ಗ್ರಾಮದಲ್ಲಿ ನಡೆದಿದ್ದು, ಈ ಮೂಲಕ ಮರ್ಯಾದ ಹತ್ಯೆಗೆ ಯತ್ನಿಸಿದ ಪ್ರಕರಣ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ತಂದೆ ಧರ್ಮಪ್ಪ ನಾಯಕ್ ಮರ್ಯಾದೆಗೆ ಅಂಜಿ ಮಗಳನ್ನು ಹತ್ಯೆ ಮಾಡಲು ಯತ್ನಿಸಿದ ಆರೋಪಿಯಾಗಿದ್ದು, ಧರ್ಮಪ್ಪ ನಾಯಕ್ ಮೂಲತಃ ಜಿಲ್ಲೆಯ ಶಿರಾಳಕೊಪ್ಪ ಬಳಿಯ ಮಳವಳ್ಳಿ ತಾಂಡಾದವರು. ಪುತ್ರಿ ಮದುವೆಗೂ ಮುನ್ನ ಗರ್ಭವತಿಯಾಗಿರುವುದನ್ನು ತಿಳಿದು ಸಿಟ್ಟಿಗೆದ್ದಿದ್ದಾರೆ. ನಂತರ ಆಸ್ಪತ್ರೆಗೆ ತೋರಿಸುವುದಾಗಿ ಪುಸಲಾಯಿಸಿ ಗರ್ಭಿಣಿ ಪುತ್ರಿಯನ್ನು ಧರ್ಮಪ್ಪ ನಾಯಕ್ ತಮ್ಮ ಪತ್ನಿಯೊಂದಿಗೆ ಸೊರಬದ ಉಳವಿ ಸಮೀಪದ ಕಾನಹಳ್ಳಿ ಬಳಿಯ ಕಣ್ಣೂರು ಗ್ರಾಮಕ್ಕೆ ಕರೆದುಕೊಂಡು ಬಂದಿದ್ದಾರೆ.

ಕಣ್ಣೂರು ಕಾಡಿನಲ್ಲಿ ಧರ್ಮಪ್ಪ ನಾಯಕ್ ತನ್ನ ಪುತ್ರಿಯ ಕುತ್ತಿಗೆಗೆ ಹಗ್ಗದಿಂದ ಬಿಗಿದು ನನ್ನ ಮರ್ಯಾದೆ ಹಾಳು ಮಾಡಿದೆ ಎಂಬುದಾಗಿ ಉಸಿರುಗಟ್ಟಿಸಿ ಸಾಯಿಸೋದಕ್ಕೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದ್ದು, ಮಗಳನ್ನು ಸಾಯಿಸಬೇಡಿ ಅಂತ ಆಕೆಯ ಹೆಂಡತಿ ಕಾಲಿಗೆ ಬಿದ್ದು ಕೇಳಿಕೊಂಡರು ಧರ್ಮಪ್ಪ ನಾಯಕ್ ಬಿಟ್ಟಿಲ್ಲ. ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಸಾಯಿಸೋದಕ್ಕೆ ಯತ್ನಿಸಿದ ಸಂದರ್ಭದಲ್ಲಿ ಯುವತಿ ಪ್ರಜ್ಞೆ ತಪ್ಪಿದ್ದಾಳೆ. ಆಕೆ ಮೃತಪಟ್ಟಿದ್ದಾಳೆ ಎಂಬುದಾಗಿ ಭಾವಿಸಿ ಘಟನಾ ಸ್ಥಳದಿಂದ ತೆರಳಿದ್ದಾರೆ. ಆದರೆ ಸ್ವಲ್ಪ ಸಮಯದ ನಂತರ ಪ್ರಜ್ಞೆ ಬಂದ ಯುವತಿ ದಾರಿ ಹೋಕರಿಂದ ಸಹಾಯ ಪಡೆದು ತಾಲೂಕಿನ ಉಳವಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಸೊರಬ ಸಾರ್ವಜನಿಕ ಆಸ್ಪತ್ರೆ ದಾಖಲಿಸಿದ್ದು,

ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಯುವತಿಯನ್ನು ದಾಖಲಿಸಲಾಗಿದೆ.

ತಂದೆ ಧರ್ಮಪ್ಪ ನಾಯಕ್ ನೀಡಿರುವ ಹಿಂಸೆ, ಕೃತ್ಯದ ಬಗ್ಗೆ ಯುವತಿ ನೀಡಿದ ಹೇಳಿಕೆಯನ್ನು ಆಧರಿಸಿ, ಧರ್ಮಪ್ಪ ನಾಯಕ್ ವಿರುದ್ಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ. ಮರ್ಯಾದ ಹತ್ಯೆಗೆ ಯತ್ನಿಸಿದ ಆರೋಪಿ ಧರ್ಮಪ್ಪ ನಾಯಕ್ ಅವರನ್ನು ಬಂದಿಸಿರುವ ಪೊಲೀಸರು ಸ್ಥಳ ಮಹಜರು ನಡೆಸಿ, ತನಿಖೆಯನ್ನು ಮುಂದುವರೆಸಿದ್ದಾರೆ.

---------------

ಆರೋಪ ಸುಳ್ಳು: ಮತ್ತೊಬ್ಬ ಮಗಳ ಹೇಳಿಕೆ

ಮರ್ಯಾದೆಗೆ ಅಂಜಿ ತಂದೆಯಿಂದ ಮಗಳ ಹತ್ಯೆಗೆ ಯತ್ನ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾನುವಾರ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ.

ನಮ್ಮ ತಂದೆ ಕೊಲೆಗೆ ಯತ್ನಿಸಿಲ್ಲ, ಈ ಆರೋಪ ಸುಳ್ಳು ಎಂದು ಮತ್ತೊಬ್ಬ ಮಗಳು ಸೃಷ್ಟಿ ಹೇಳಿಕೆ ನೀಡಿದ್ದಾಳೆ. ನನ್ನ ಸಹೋದರಿ ಸ್ವಲ್ಪ ಬುದ್ಧಿಮಾಂದ್ಯತೆ ಹೊಂದಿದ್ದಾಳೆ ಈ ಹಿನ್ನೆಲೆಯಲ್ಲಿ ಆಕೆಗೆ ತಾನೇನು ಮಾಡುತ್ತೇನೆ ಹೇಳುತ್ತೇನೆ ಎಂಬುದು ಗೊತ್ತಿಲ್ಲ. ನನ್ನ ತಂದೆ ಯಾವ ತಪ್ಪು ಮಾಡಿಲ್ಲ ಎಂದು ತಂದೆಯ ಪರ ಹೇಳಿಕೆ ನೀಡಿರುವ ಸೃಷ್ಟಿ ಆಕೆ ಈಗ ಆರೋಗ್ಯವಾಗಿದ್ದಾಳೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.

ಇದೂ ಅಲ್ಲದೇ ಧರ್ಮಪ್ಪ ನಾಯಕ್ ಪತ್ನಿ ಲತಾ ಕೂಡಾ ಹೇಳಿಕೆ ನೀಡಿದ್ದು, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಮಗಳು ದಾಖಲಾಗಿದ್ದಾಳೆ ಎಂದು ತಿಳಿದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಹೋಗಿದ್ದೆವು. ನಾನಾಗಲಿ ನನ್ನ ಪತಿಯಾಗಲಿ ಮಗಳನ್ನು ಕರೆದುಕೊಂಡು ಎಲ್ಲೂ ಹೋಗಿಲ್ಲ, ಆಕೆ ಎಲ್ಲಿಗೆ ಹೋಗಿ ಏನು ಮಾಡಿಕೊಂಡು ಬಂದಿದ್ದಾಳೆ , ಅವಳಿಗೆ ಬುದ್ಧಿ ಸರಿ ಇಲ್ಲ ಬುದ್ಧಿಮಾಂದ್ಯತೆ ಇದೆ. ಅವಳು ಏನು ಹೇಳುತ್ತಾಳೆ ಅವಳಿಗೆ ಗೊತ್ತಾಗಲ್ಲ ಎಂದು ಹೇಳಿಕೆ ನೀಡಿದ್ದಾರೆ.