ಪುರಸಭೆಯಲ್ಲಿ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು: ಶೀಘ್ರ ಸ್ಥಿರೀಕರಣಕ್ಕೆ ಬಿಡ್‌ದಾರರ ಒತ್ತಾಯ

ಕನ್ನಡಪ್ರಭ ವಾರ್ತೆ. ಬೀರೂರು

ಲಕ್ಷಾಂತರ ರು. ಬಿಡ್ ಮಾಡಿ ವ್ಯಾಪಾರಿಗಳು ಪಡೆಯುವ ವಾಣಿಜ್ಯ ಮಳಿಗೆಗಳ ಸುಸ್ಥಿಯ ಬಗ್ಗೆ ಪುರಸಭೆ ಅಧಿಕಾರಿಗಳು ಯಾಕೆ ತಲೆಕೆಡಿಸಿಕೊಳ್ಳುತ್ತಿಲ್ಲ. ಮಳಿಗೆಗಳ ಯಥಾ ಸ್ಥಿತಿಯಂತೆ ಹರಾಜು ಮಾಡಿದರೇ ಅವರ ಪಾಡೇನು ಎಂದು ಪುರಸಭೆ ಆಶ್ರಯ ಕಮಿಟಿ ಸದಸ್ಯ ಎನ್.ಮುಬಾರಕ್ ಅಧಿಕಾರಿಗಳನ್ನು ಪ್ರಶ್ನಿಸಿದರು.

ಪುರಸಭೆಯಲ್ಲಿ ಗುರುವಾರ ನಡೆದ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜಿನಲ್ಲಿ ಮಾತನಾಡಿ ಪಟ್ಟಣದ ಹೃದಯ ಭಾಗ ಸೇರಿದಂತೆ ಪುರಸಭೆಗೆ ಸೇರಿದ ಹಲವಾರು ವಾಣಿಜ್ಯ ಮಳಿಗೆ ಹರಾಜಾಗದೇ ಹಾಗೇಯೇ ಪಾಳು ಬಿದ್ದಿವೆ. ಇದರಿಂದ ಪುರ ಸಭೆಗೆ ಬರುವ ಆದಾಯಕ್ಕೆ ನಷ್ಟ. ಈ ಬಗ್ಗೆ ಅಧಿಕಾರಿಗಳು ಯಾಕೆ ತಾತ್ಸಾರ ಮಾಡುತ್ತಿದ್ದಾರೆ. ಹೀಗೇ ಮುಂದುವರಿದರೆ ಪುರಸಭೆ ಮುಂಭಾಗದಲ್ಲಿ ಸಾರ್ವಜನಿಕರೊಂದಿಗೆ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಪ್ರಭಾರ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ ಈ ಹಿಂದೆ ಹರಾಜಿನಲ್ಲಿ ಮಳಿಗೆ ಪಡೆದವರು ಮಳಿಗೆ ಖಾಲಿ ಮಾಡಿದ್ದರೂ ಅದನ್ನು ಪುರಸಭೆಗೆ ಹಸ್ತಾಂತರಿಸಿಲ್ಲ. ಅವರ ಮುಂಗಡ ಹಣ ಮುಟ್ಟುಗೋಲು ಹಾಕಿಕೊಂಡು ಹರಾಜು ಮಾಡಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಕಳಿಸಲಾಗುವುದು. ಬಾಕಿ ಹಣ ಕಟ್ಟದೇ ಹೋದರೆ ಸಂಬಂಧಿಸಿದ ಆಸ್ತಿ ಮುಟ್ಟು ಗೋಲು ಹಾಕಿಕೊಳ್ಳಲಾಗುವುದು ಎಂದರು.


ಬಿಡ್‌ದಾರ ಪುನೀತ್ ಮಾತನಾಡಿ ಬಿಡ್ ನಲ್ಲಿ ಮಳಿಗೆ ಪಡೆದು ವರ್ಷಗಳಾದರೂ ಅಧಿಕಾರಿಗಳು ಸ್ಥಿರೀಕರಣ ಮಾಡಿ ಕೊಡಲ್ಲ. ಲಕ್ಷಾಂತರ ರೂ ಬಡ್ಡಿಗೆ ತಂದು ಬಿಡ್ ಮಾಡಿರುತ್ತೇವೆ. ಶೀಘ್ರ ಸ್ಥಿರೀಕರಣ ಮಾಡದಿದ್ದರೆ ನಷ್ಟ ಆಗುತ್ತದೆ ಎಂದರು.

ಇದಕ್ಕೆ ಮುಖ್ಯಾಧಿಕಾರಿ ಈ ಹಿಂದೆ ಅಧಿಕಾರಿಗಳು ಹೇಗೆ ಮಾಡಿದ್ದಾರೋ ಗೊತ್ತಿಲ್ಲ. ಆದರೆ ನಮ್ಮಿಂದ ಜಿಲ್ಲಾಧಿಕಾರಿಗೆ ಸ್ಥಿರೀಕರಣಕ್ಕೆ ಪ್ರಸ್ತಾವನೆ ಕಳುಹಿಸಿ ಆದಷ್ಟು ಬೇಗ ಮಾಡಿಕೊಡಲಾಗುವುದು ಎಂದರು.

ಈ ಹಿಂದೆ ಮಳಿಗೆಯಲ್ಲಿ ಬಾಡಿಗೆ ಪಡೆದ ವ್ಯಾಪಾರಸ್ಥರು ಬಿಡ್ ಮಾಡಿದ ಮೊತ್ತಕ್ಕೆ ಶೇ. 5ರಷ್ಟು ಹೆಚ್ಚುವರಿ ಮಾಡಿ ಮೊದಲ ಹಕ್ಕಿನ ನಿರಾಕರಣೆಯಡಿ ಬಿಡ್ ಗೆ ಬಂದಿದ್ದ ವ್ಯಾಪಾರಸ್ಥರ ವಿರುದ್ಧ ಕೆಲವರು ಆಕ್ಷೇಪಣೆ ವ್ಯಕ್ತಪಡಿಸಿ ಇವರನ್ನು ಕಪ್ಪು ಪಟ್ಟಿಗೆ ಹಾಕುವಂತೆ ಒತ್ತಾಹಿಸಿದಾಗ, ಅಧಿಕಾರಿಗಳು ಮುಂದೆ ಅವರು ಠೇವಣಿ ಪಾವತಿಸಲು ವಿಫಲರಾದಲ್ಲಿ ಅವರನ್ನು ಮುಂದಿನ ಬಾರಿ ಬಿಡ್ ಮಾಡಲು ಅವಕಾಶವಿರುವುದಿಲ್ಲ ಎಂದು ಉತ್ತರಿಸಿದರು.

ಮಳಿಗೆ ಸಂಖ್ಯೆ 7ಕ್ಕೆ ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿದ್ದ ಕಾರಣ ಈ ಹಿಂದೆ ಇದ್ದ ಬಾಡಿಗೆದಾರರು ಒಂದು ವಾರದ ಮುಂಚಿತವಾಗಿ ಕಚೇರಿಗೆ ಆರ್.ಎಫ್.ಆರ್ ಪಡೆಯುವುದಾಗಿ ಒಪ್ಪಿ ಶ್ರೀನಿವಾಸ್ ಮನವಿ ನೀಡಿದ್ದರು. ಇದನ್ನು ವಿರೋಧಿಸಿದ್ದ ಹಿಂದಿನ ಬಿಡ್ ದಾರ ಆಕ್ಷೇಪ ವ್ಯಕ್ತಪಡಿಸಿ ಇಂದು ಹರಾಜು ಮಾಡುವಂತೆ ಒತ್ತಾಯಿಸಿದರು. ಸರ್ಕಾರದ ಸುತ್ತೋಲೆಯಂತೆ ಮುಖ್ಯಾಧಿಕಾರಿಗಳು ಬಿಡ್ ಮಾಡಲು ಮುಂದಾದಾಗ ಎಸ್ಟಿ ಪಂಗಡದ 5ಜನ ಹರಾಜು ಕೂಗುವಾಗ, ಗಂಟೆಕುಮಾರ್, ಮೊದಲು ಶ್ರೀನಿವಾಸ್ ಅವರಿಗೆ ನ್ಯಾಯ ಒದಗಿಸಿ ಬಿಡ್ ಮಾಡಬೇಕು ಇಲ್ಲ ಹರಾಜು ಸ್ಥಗಿತಗೊಳಿಸಿ ಮುಂದು ಹಾಕಿ ಎಂದು ಒತ್ತಾಯಿಸಿದ್ದರಿಂದ ಗದ್ದಲ ಉಂಟಾಯಿತು.

ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ ಈ ಹಿಂದೆ ಪುರಸಭೆ ಅಧ್ಯಕ್ಷರಾಗಿದ್ದ ಭಾಗ್ಯಲಕ್ಷ್ಮಿಮೋಹನ್ ಅವರು ಪುರಸಭೆ ಸದಸ್ಯರೊಂದಿಗೆ ಚರ್ಚಿಸಿ, ಎಲ್ಲಾ ಮಳಿಗೆಗಳು ಹೆಚ್ಚು ಮೊತ್ತಕ್ಕೆ ಬಿಡ್ ಆಗಿದೆ. ಆದರೆ ಈ 7ರ ಮಳಿಗೆ ಮಾತ್ರ ಕಡಿಮೆ ಬೆಲೆಗೆ ಹರಾಜಾಗಿದೆ. ಇದರ ಸ್ಥಿರೀಕರಣಕ್ಕೆ ಕಳಿಸದಂತೆ ತೀರ್ಮಾನಿಸಿದ ನಡಾವಳಿವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಕಳುಹಿಸಿದ ಹಿನ್ನಲೆಯಲ್ಲಿ ಇಂದು ಆ ಮಳಿಗೆ ಹರಾಜು ಮಾಡಲಾಗುತ್ತಿದೆ ಎಂದು ಉತ್ತರಿಸಿದರು.

ಮಳಿಗೆ ನಂ.5ನ್ನು ವಿಕ್ರಂಬಾಬು ಕೂಗಿ ₹21,063ಕ್ಕೆ ಪಡೆದರು. ಮಳಿಗೆ ನಂ.6ರನ್ನು ಅಬ್ದುಲ್ ಲತೀಪ್ ಶೇ. 5ರಷ್ಟು ಹೆಚ್ಚಿಗೆ ಕೂಗಿ ₹24,780ಗೆ ಪಡೆದರು. ಉಳಿದಂತೆ ಬಿಡ್ ದಾರರು ಹಣ ಕಟ್ಟದೆ ಇರುವುದರಿಂದ ಹರಾಜು ಮುಂದೂಡಲಾಯಿತು.

ಕನ್ನಡಪ್ರಭ ವರದಿ ಪ್ರಸ್ತಾಪ:

ಈ ಹಿಂದೆ ಕನ್ನಡಪ್ರಭ ಮೇ14ರಂದು “ಪುರಸಭೆ ನಿರ್ಲಕ್ಷ್ಯ: ಸಂತೆ ಮೈದಾನ ಅಭಿವೃದ್ದಿ ಕುಂಠಿತ” ಎಂಬ ಶೀರ್ಷಿಕೆಯಡಿ ಸುದ್ದಿ ಮಾಡಿತ್ತು. ಇದನ್ನು ಹರಾಜಿನಲ್ಲಿ ಪ್ರಸ್ತಾಪಿಸಿದ ಆಶ್ರಯಸಮಿತಿ ಸದಸ್ಯ ಮುಬಾರಕ್ ಈ ವರದಿ ಬಗ್ಗೆ ಅಧಿಕಾರಿಗಳು ಏನು ಕ್ರಮ ಕೈಗೊಂಡಿದ್ದೀರಾ ಮೊದಲು ಉತ್ತರಿಸಿ ಹಲವು ದಿನಗಳಿಂದ ಬಾಡಿಗೆ ಪಡೆಯುತ್ತಿರುವ ನೀವು ಇದನ್ನು ಇನ್ನು ಅಭಿವೃದ್ಧಿ ಪಡಿಸಿಲ್ಲ ಏಕೆ ಎಂದು ತರಾಟೆಗೆ ತೆಗೆದುಕೊಂಡರು.

ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್, ಕಂದಾಯ ಅಧಿಕಾರಿ ಪ್ರದೀಪ್, ಗಿರಿರಾಜ್, ಶಿಲ್ಪ ಸೇರಿದಂತೆ ಮತ್ತಿತರ ಬಿಡ್ ದಾರರು ಇದ್ದರು.

9 ಬೀರೂರು 1

ಬೀರೂರಿನ ಪುರಸಭೆ ಸಭಾಂಗಣದಲ್ಲಿ ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಮಂಜುನಾಥ್ ಅಧ್ಯಕ್ಷತೆಯಲ್ಲಿ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ನಡೆಯಿತು.