ಸಾರಾಂಶ
ಜಾನಪದ ಎಂಬುದು ವಿಶಾಲವಾದ ಆಲದ ಮರ. ಅದರ ಸಮೃದ್ಧ ನೆರಳ ಆಶ್ರಯದಲ್ಲಿ ಬದುಕುವ ನೆಮ್ಮದಿ ನಮ್ಮದಾಗಬೇಕು. ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಕನ್ನಡಪ್ರಭ ವಾರ್ತೆ, ಪೀಣ್ಯ ದಾಸರಹಳ್ಳಿ
ಜಾನಪದವು ನಮ್ಮ ಸಂಸ್ಕೃತಿಯ ಪ್ರತೀಕಗಳನ್ನು ತಿಳಿಸುತ್ತದೆ. ಹಾಗೆಯೇ ನಮ್ಮ ಬದುಕಿಗೆ ನೀತಿ ಪಾಠಗಳನ್ನು ಕಲಿಸುತ್ತದೆ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.ಹೆಸರಘಟ್ಟ ಮುಖ್ಯ ರಸ್ತೆಯ ಖಾಸಗಿ ಕಾಲೇಜಿನಲ್ಲಿ ದಾಸರಹಳ್ಳಿ ಕ್ಷೇತ್ರ ಘಟಕ ಕನ್ನಡ ಜಾನಪದ ಪರಿಷತ್ ವತಿಯಿಂದ ಆಯೋಜಿಸಲಾದ ದಶಮಾನೋತ್ಸವ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ಶಾಸಕ ಎಸ್. ಮುನಿರಾಜು ಮಾತನಾಡಿ, ನಮ್ಮ ಬಾಲ್ಯದ ಗ್ರಾಮೀಣ ಬದುಕಿನಲ್ಲಿ ಜಾನಪದ ಹಾಡು, ನೃತ್ಯ, ಕ್ರೀಡೆ ಮುಂತಾದ ಆಚರಣೆಗಳನ್ನು ಮಾಡಿ ಸಂತೋಷ ಪಡುತ್ತಿದ್ದೆವು. ಅಂತಹ ಸಮೃದ್ಧ ಜಾನಪದ ಸಂಸ್ಕೃತಿಯನ್ನು ನಾವಿಂದು ಉಳಿಸಬೇಕಿದೆ ಎಂದರು.ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್ ಬಾಲಾಜಿ ಮಾತನಾಡಿ, ಜಾನಪದ ಎಂಬುದು ವಿಶಾಲವಾದ ಆಲದ ಮರ. ಅದರ ಸಮೃದ್ಧ ನೆರಳ ಆಶ್ರಯದಲ್ಲಿ ಬದುಕುವ ನೆಮ್ಮದಿ ನಮ್ಮದಾಗಬೇಕು. ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ 10 ಸಾಧಕರಿಗೆ ದಶಮಾನೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳಿಂದ ನೃತ್ಯ, ಹಾಡು ಮನರಂಜನೆ ನಡೆಯಿತು.ಈ ಸಂದರ್ಭದಲ್ಲಿ ಸಾಹಿತಿ ಚಿಕ್ಕಹೆಜ್ಜಾಜಿ ಮಹದೇವ್ ಪರಿಷತ್ತಿನ ನಗರ ಜಿಲ್ಲಾ ಅಧ್ಯಕ್ಷ ರಿಯಾಜ್ ಪಾಷ, ದಾಸರಹಳ್ಳಿ ಘಟಕದ ಅಧ್ಯಕ್ಷ ವೈ.ಬಿ.ಎಚ್ ಜಯದೇವ್, ಸಮಾಜ ಸೇವಕರಾದ ಭರತ್ ಗುಂಡಪ್ಪ ಡಾ. ಸಂಗನ ಬಸಪ್ಪ ಬಿರಾದಾರ್, ಎಂ.ಬಿ. ದಯಾನಂದ್, ಎಬಿಬಿ ಮಂಜುನಾಥ್, ಲತಾ ಕುಂದರಗಿ ಮತ್ತಿತರರು ಇದ್ದರು.