- ಲಕ್ಕವಳ್ಳಿಯಲ್ಲಿ ಜಾನಪದ ಸಾಹಿತಿಗಳ ಬದುಕು ಬರಹ ವಿಚಾರ ಸಂಕಿರಣ
ಕನ್ನಡಪ್ರಭ ವಾರ್ತೆ ತರೀಕೆರೆಜನಪದ ಕಲೆ ಸಾಹಿತ್ಯ ಸಂಗೀತ ಮನುಷ್ಯನ ವ್ಯಕ್ತಿತ್ವವನ್ನು ವಿಕಾಸಗೊಳಿಸುತ್ತದೆ. ಅಲ್ಲದೆ ಉತ್ತಮ ನಾಗರಿಕತೆ ಕಲಿಸುತ್ತದೆ ಎಂದು ಕುವೆಂಪು ವಿಶ್ವವಿದ್ಯಾನಿಲಯ ನಿವೃತ್ತ ಪ್ರಾಧ್ಯಾಪಕ ಮತ್ತು ಜಾನಪದ ವಿದ್ವಾಂಸ ಡಾ.ಬಸವರಾಜ ನೆಲ್ಲಿಸರ ಹೇಳಿದ್ದಾರೆ.
ಕರ್ನಾಟಕ ಜಾನಪದ ಪರಿಷತ್ತು ಲಕ್ಕವಳ್ಳಿ, ತರೀಕೆರೆ ತಾಲೂಕು ಘಟಕ ಸಂಯುಕ್ತಶ್ರಯದಲ್ಲಿ ಸಮೀಪದ ಲಕ್ಕವಳ್ಳಿ ಗಣಪತಿ ರಂಗಮಂದಿರದಲ್ಲಿ ನಡೆದ ಜಾನಪದ ಸಾಹಿತಿಗಳ ಬದುಕು-ಬರಹ ವಿಚಾರ ಸಂಕಿರಣ ಮತ್ತು ಜಾನಪದ ಗೀತ ಗಾಯನೋತ್ಸ ಉದ್ಘಾಟಿಸಿ ಮಾತನಾಡಿದರು.ಸಮಾಜದ ಅಂಕುಡೊಂಕುಗಳನ್ನು ತಿದ್ದುವುದಲ್ಲದೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೃಷಿಕರಿಂದ ಮತ್ತು ಮಹಿಳೆಯರಿಂದ ಜಾನಪದ ಕಲೆ ಸಾಹಿತ್ಯ ಸಂಗೀತ ಸದೃಢವಾಗಿ ಬೆಳೆದು ಬಂದಿದೆ. ಇಂದಿನ ಯುವಕ ಯುವತಿಯರು ಅವುಗಳನ್ನು ಪೋಷಿಸಿ ಮುಂದಿನ ತಲೆಮಾರಿಗೆ ಕೊಂಡಯ್ಯಬೇಕಾಗಿದೆ ಎಂದು ಹೇಳಿದರು.,
ಕಜಾಪ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಜಿ ಬಿ ಸುರೇಶ್ ಮಾತನಾಡಿ ಭಾರತೀಯ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗೆ ಜಾನಪದದ ಕೊಡುಗೆ ಅಪಾರ. ಎಲ್ಲಾ ರೀತಿ ಸಂಗೀತ ಸಾಹಿತ್ಯ ಕಲೆಗಳಿಗೆ ಜಾನಪದವೇ ತಾಯಿ ಬೇರು. ಜಾನಪದಕ್ಕೆ ನೈತಿಕ ಮತ್ತು ಜಾತ್ಯತೀತ ಮನೋಭಾವನ ಬೆಳೆಸುವ ಶಕ್ತಿ ಇದೆ. ಇದು ಮನಸ್ಸಿಗೆ ಶಾಂತಿ ಮತ್ತು ಮನರಂಜನೆ ನೀಡುವುದಲ್ಲದೆ ಮನುಷ್ಯನಲ್ಲಿ ಸಾಮಾಜಿಕ ಪ್ರಜ್ಞೆ ಬೆಳೆಸುತ್ತದೆ ಎಂದು ಪ್ರತಿಪಾದಿಸಿದರು.
ಜಾನಪದ ಸಾಹಿತಿ ಇಮ್ರಾನ್ ಅಹಮದ್ ಬೇಗ್ ಮಾತನಾಡಿ ಜಾನಪದ ಪರಿಷತ್ತು ಜಿಲ್ಲೆಯ ಗ್ರಾಪಂ, ಹೋಬಳಿ ತಾಲೂಕು ಜಿಲ್ಲಾ ಮಟ್ಟದಲ್ಲಿ ಇಂದಿನ ದಿನ ಮಾನಸದಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆ ಸಾಹಿತ್ಯ ಸಂಗೀತವನ್ನು ತಳಮಟ್ಟದಲ್ಲಿ ಸಂಘಟಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ತಾಪಂ ಮಾಜಿ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್ ಮಾತನಾಡಿ ಜಾನಪದಕ್ಕೆ ಜಾತಿ ಕಟ್ಟು ಪಾಡುಗಳಿಲ್ಲ ಇದಕ್ಕೆ ಸಮಾಜವನ್ನು ಒಟ್ಟುಗೂಡಿಸುವ ಶಕ್ತಿ ಇದೆ ಎಂದು ತಿಳಿಸಿದರು.ತರೀಕೆರೆ ತಾಲೂಕು ಅಧ್ಯಕ್ಷ ಆರ್ ನಾಗೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾರ್ವಜನಿಕ, ಖಾಸಗಿ ಕಾರ್ಯಕ್ರಮಗಳಲ್ಲಿ ಜಾನಪದ ಕಲೆ, ಸಾಹಿತ್ಯ ಸಂಗೀತಕ್ಕೆ ಆದ್ಯತೆ ನೀಡಿ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಕಲಾವಿದರಾದ ಸಂಧ್ಯಾದತ್ತಾತ್ರಿ, ಸಾಹಿತಿ ಚಕ್ರವರ್ತಿ ಅವರಿಗೆ ಜಾನಪದ ಲೋಕ ಸಂಸ್ಥಾಪಕ ಡಾ. ಎಚ್ ಎಲ್ ನಾಗೇಗೌಡರ ಸ್ಮರಣಾರ್ಥ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಾನಪದ ಗೀತ ಗಾಯನೋತ್ಸವ ಜರುಗಿತು.ಜಿಲ್ಲಾ ಸಂಚಾಲಕರಾದ ಗಾಯತ್ರಮ್ಮ ಬಿಜೆಪಿ ಮುಖಂಡರಾದ ರಮೇಶ್ ಕಲಾವಿದರಾದ ಚಿಕ್ಕ ನೆಲ್ಲೂರು ಜಯಣ್ಣ, ತಿಪ್ಪೇಶ್, ಸೋಮಶೇಖರ್, ಪಾಂಡುರಂಗ, ಸೀನೋಜಿರಾವ್, ಪಾಂಡು ಜಾದವ್, ಕೃಷ್ಣಪ್ಪ ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.-
5ಕೆಟಿಆರ್.ಕೆ.6ಃ ತರೀಕೆರೆ ಸಮೀಪದ ಲಕ್ಕವಳ್ಳಿಯಲ್ಲಿ ನಡೆದ ಜಾನಪದ ಸಾಹಿತಿಗಳ ಬದುಕು ಬರಹ ವಿಚಾರಸಂಕಿರಣದ ಉದ್ಘಾಟನೆಯನ್ನು ಜಾನಪದ ವಿದ್ವಾಂಸ ಡಾ.ಬಸವರಾಜ ನೆಲ್ಲಿಸರ ನೆರವೇರಿಸಿದರು. ಕಜಾಪ ಜಿಲ್ಲಾಧ್ಯಕ್ಷ ಜಿ ಬಿ ಸುರೇಶ್, ತರೀಕೆರೆ ತಾಲೂಕು ಅಧ್ಯಕ್ಷ ಆರ್.ನಾಗೇಶ್ ಮತ್ತಿತರರು ಇದ್ದರು.