ಸಾರಾಂಶ
ಆರ್ಸಿಬಿ ಐಪಿಎಲ್ ಫೈನಲ್ನಲ್ಲಿ ಜಯಗಳಿಸಿದ್ದು ವಿಜಯೋತ್ಸವದ ದಿನ ಹೆಚ್ಚಿನ ಅಭಿಮಾನಿಗಳು ಭಾಗವಹಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೂ ಪೊಲೀಸ್ ಇಲಾಖೆ ಸೂಕ್ತ ಮುನ್ನಚ್ಚರಿಕೆ ವಹಿಸಿ ಭದ್ರತೆ ಹೆಚ್ಚಿಸಬೇಕಿತ್ತು.
ಕೊಪ್ಪಳ:
ಆರ್ಸಿಬಿ ವಿಜಯೋತ್ಸವ ಆಚರಣೆ ವೇಳೆ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ ಅವರನ್ನು ಅಮಾನತು ಮಾಡಿರುವುದು ಸರಿಯಾದ ಕ್ರಮವಾಗಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಸಿಬಿ ಐಪಿಎಲ್ ಫೈನಲ್ನಲ್ಲಿ ಜಯಗಳಿಸಿದ್ದು ವಿಜಯೋತ್ಸವದ ದಿನ ಹೆಚ್ಚಿನ ಅಭಿಮಾನಿಗಳು ಭಾಗವಹಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೂ ಪೊಲೀಸ್ ಇಲಾಖೆ ಸೂಕ್ತ ಮುನ್ನಚ್ಚರಿಕೆ ವಹಿಸಿ ಭದ್ರತೆ ಹೆಚ್ಚಿಸಬೇಕಿತ್ತು. ಆದರೆ, ನಿರ್ಲಕ್ಷ್ಯ ವಹಿಸಿದ ಪರಿಣಾಮ ಸರ್ಕಾರ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ ಎಂದರು.
ಬಿಜೆಪಿಯವರು ಅಮಾನತು ಕುರಿತು ಏನಾದರೂ ಮಾತನಾಡಿಕೊಳ್ಳಲಿ. ಅವರು ಎಲ್ಲದರಲ್ಲೂ ರಾಜಕೀಯ ಮಾಡುತ್ತಾರೆ. ಆದರೆ, ಸರ್ಕಾರ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೂಗೊಂಡಿದೆ ಎಂದು ತಿಳಿಸಿದರು.ಹೆಚ್ಚಿನ ಜನ ಸೇರಿದ್ದೇ ಸಮಸ್ಯೆಗೆ ಕಾರಣಆರ್ಸಿಬಿ ವಿಜಯೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದಲೇ ದುರಂತ ನಡೆಯಿತು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವಿಪಕ್ಷಗಳು ಈ ಘಟನೆಯಲ್ಲೂ ರಾಜಕೀಯ ಮಾಡುತ್ತಿವೆ. ಅವರ ಸರ್ಕಾರ ಇದ್ದಾಗ ಏಕಾಏಕಿ ಇಷ್ಟೊಂದು ಜನ ಸೇರಿದ್ದರೆ ಅಹಿತಕರ ಘಟನೆಗಳು ನಡೆಯುತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.
ಮಿತಿ ಮೀರಿ ಜನ ಸೇರಿದ್ದರಿಂದ ಕಾಲ್ತುಳಿತವಾಗಿದೆ. ಆಗಿರುವ ಪ್ರಮಾದಕ್ಕೆ ಸರ್ಕಾರ ಕಠಿಣ ಕ್ರಮಕೈಗೊಂಡಿದೆ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.