ತ್ಯಾಗ, ಬಲಿದಾನದ ಸಂಕೇತದೊಂದಿಗೆ ಬಕ್ರೀದ್ ಹಬ್ಬ ಆಚರಣೆ

| Published : Jun 08 2025, 01:28 AM IST

ಸಾರಾಂಶ

ಯಾವುದೇ ಪ್ರತಿಫಲವನ್ನು ಕೂಡಾ ಸುಲಭದ ದಾರಿಯಲ್ಲಿ ಪಡೆಯಲಾಗುವುದಿಲ್ಲ. ಕಠಿಣ ಹಾದಿಯಲ್ಲಿ ಸಾಗಿ ಮೊಹಮ್ಮದ್ ಇಬ್ರಾಹಿಂ ಅವರ ಸಂದೇಶಗಳನ್ನು ನಾವೆಲ್ಲರೂ ಅನುಸರಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಸಾಗಿದ ಮುಸ್ಲಿಂ ಸಮುದಾಯದವರು ಹೊಸಹೊಳಲು ರಸ್ತೆಯ ದುಂಡಶೆಟ್ಟಿ ಲಕ್ಷ್ಮಮ್ಮ ಸಾರ್ವಜನಿಕ ಆಸ್ಪತ್ರೆ ಪಕ್ಕದ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಮುಸ್ಲಿಂ ಧರ್ಮಗುರು ಮೊಹಮ್ಮದ್ ಅಬು ಜಾಫರ್ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡು ಮೊಹ್ಮಮದೀಯರ ತ್ಯಾಗ ಮತ್ತು ಬಲಿದಾನವನ್ನು ಜಗತ್ತು ಮರೆಯುತ್ತಿದೆ. ಇಸ್ಲಾಂ ಎಂದಿಗೂ ಕೂಡಾ ಆಧರ್ಮದ ನಡವಳಿಕೆಯನ್ನು ಬೋಧಿಸುವುದಿಲ್ಲ. ಯಾರು ಕೂಡಾ ಅಧರ್ಮದ ಹಾದಿಯನ್ನು ತುಳಿಯಬಾರದು. ಇಡಿ ಜಗತ್ತಿಗೆ ಇಸ್ಲಾಂನ ಮಾನವೀಯ ಗುಣಗಳನ್ನು ತೋರಿಸಬೇಕಾದ ಅನಿವಾರ್ಯತೆಯಿದೆ ಎಂದರು.

ಯಾವುದೇ ಪ್ರತಿಫಲವನ್ನು ಕೂಡಾ ಸುಲಭದ ದಾರಿಯಲ್ಲಿ ಪಡೆಯಲಾಗುವುದಿಲ್ಲ. ಕಠಿಣ ಹಾದಿಯಲ್ಲಿ ಸಾಗಿ ಮೊಹಮ್ಮದ್ ಇಬ್ರಾಹಿಂ ಅವರ ಸಂದೇಶಗಳನ್ನು ನಾವೆಲ್ಲರೂ ಅನುಸರಿಸಬೇಕು ಎಂದು ಕರೆ ನೀಡಿದರು.

ಭಾರತ ಇಸ್ಲಾಂ ರಾಷ್ಟ್ರವಲ್ಲ. ಬಹು ಧರ್ಮ, ಸಂಸ್ಕೃತಿಗಳನ್ನು ಒಳಗೊಂಡಿರುವ ಜಾತ್ಯಾತೀತ ರಾಷ್ಟ್ರ. ನಮಗೆಲ್ಲರಿಗೂ ಕೂಡ ದೇಶವನ್ನು ಕಾಪಾಡುವ ಜವಾಬ್ದಾರಿಗಳಿವೆ. ಇದನ್ನು ಧರ್ಮಾಧಾರದಿಂದ ನೋಡದೆ ಮಾನವೀಯತೆಯ ಒಳಗಣ್ಣಿನಿಂದ ನೋಡಬೇಕು. ನಾವೆಲ್ಲರೂ ಭಾರತೀಯ ಮುಸ್ಲಿಮರಾಗಿ ಜಗತ್ತಿನ ಮುಂದೆ ನಿಲ್ಲಬೇಕು ಎಂದು ತಿಳಿಸಿದರು.

ಪೊಲೀಸ್ ಇನ್ಸ್‌ಪೆಕ್ಟರ್ ಸುಮಾರಾಣಿ ಬಿಗಿ ಬಂದೋಬಸ್ತ್‌ ಮಾಡಿದ್ದರು. ಪ್ರಾರ್ಥನೆಯಲ್ಲಿ ಮುಖಂಡರಾದ ಕೆ.ಗೌಸ್‌ಖಾನ್, ಸೌದಿ ಫಯಾಜ್, ಸೈಯ್ಯದ್ ಖಲೀಲ್, ಸೈಯದ್ ಜಮೀಲ್, ಚಾಂದ್ ಬೈಯ್ಯಾ, ಉಮರ್‌ಬೇಗ್, ರಿಯಾಜ್ ಅಹಮದ್, ಖಲೀಲ್, ಆಬಿದ್, ಸೆಲ್ಲು, ನವೀದ್ ಅಹಮದ್, ರಿಜ್ವಾನ್, ವಾಚ್ ಇಲ್ಯಾಜ್, ಫಯಾಜ್, ನಾಸಿರ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.