ಕನ್ನಡಪ್ರಭ ವಾರ್ತೆ ಮೈಸೂರು

ಮೂಲ ವಿಜ್ಞಾನದ ಅಧ್ಯಯನದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ವಿಜಯ ವಿಠ್ಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ತಿಳಿಸಿದರು.ನಗರದ ವಿಜಯ ವಿಠ್ಠಲ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಸಿ.ವಿ. ರಾಮನ್ ಅವರ ಭಾವಾಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ವಿಜ್ಞಾನವೆಂದರೆ ಕೇವಲ ಪುಸ್ತಕದಲ್ಲಿರುವ ವಿಷಯವಲ್ಲ. ಅದು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗ. ನಾವು ಪ್ರತಿನಿತ್ಯ ಎಲ್ಲಾ ಸಮಯದಲ್ಲೂ ವಿಜ್ಞಾನವನ್ನು ಬಳಸುತ್ತಲೇ ಇರುತ್ತೇವೆ. ವಿದ್ಯುತ್, ಮೊಬೈಲ್ ಫೋನ್, ಇಂಟರ್‌ ನೆಟ್, ವೈದ್ಯಕೀಯ ಸಾಧನಗಳು, ವಾಹನಗಳು ಇವೆಲ್ಲವೂ ವಿಜ್ಞಾನದ ಕೊಡುಗೆಗಳು ಎಂದರು.ಇಂದಿನ ಜಗತ್ತು ತಂತ್ರಜ್ಞಾನ ಯುಗವಾಗಿದೆ. ಕೃತಕ ಬುದ್ಧಿಮತ್ತೆ (ಎಐ), ಅಂತರಿಕ್ಷಾ ಸಂಶೋಧನೆ, ರೋಬೋಟಿಕ್ಸ್, ವೈದ್ಯಕೀಯ ಅಭಿವೃದ್ಧಿ ಇವೆಲ್ಲವೂ ವಿಜ್ಞಾನದ ಪ್ರಗತಿಯ ಸಂಕೇತಗಳು. ಹೀಗಾಗಿ, ಪರೀಕ್ಷೆಯಲ್ಲಿ ಕೇವಲ ಅಂಕಗಳನ್ನು ಗಳಿಸುವುದು ಗುರಿಯಾಗಿರದೆ, ಜ್ಞಾನ ಸಂಪಾದನೆಗಾಗಿ ಅಧ್ಯಯನಶೀಲರಾಗಿ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.ಬೆಳಕಿನ ಚದುರುವಿಕೆಯ ಸಂಶೋಧನೆಯಿಂದ ಸರ್ ಸಿ.ವಿ. ರಾಮನ್ ನೊಬೆಲ್ ಪಾರಿತೋಷಕ ಪುರಸ್ಕೃತರಾದದ್ದು ಭಾರತಕ್ಕೆ ಹೆಮ್ಮೆಯ ವಿಷಯ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಿದ ಶ್ರೇಷ್ಠ ಭಾರತೀಯರಲ್ಲಿ ಸಿ.ವಿ. ರಾಮನ್ ಪ್ರಮುಖರು. ರಾಮನ್ ಅವರು ನೂರಾರು ಭಾರತೀಯ ಯುವ ವಿಜ್ಞಾನಿಗಳಿಗೆ ಮಾರ್ಗದರ್ಶಕರಾಗಿದ್ದುಕೊಂಡು ವಿಜ್ಞಾನದ ಅಭಿವೃದ್ಧಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಅವರು ಸ್ಮರಿಸಿದರು.ಉಪನ್ಯಾಸಕರಾದ ಎಂ.ಡಿ. ಮೇಧಾ, ಮಯೂರಲಕ್ಷ್ಮಿ, ಅನ್ನಪೂರ್ಣ ರಾವ್, ರಾಜೇಶ್, ಡಾ.ಆರ್.ಎಂ. ನವೀನ್‌ ಕುಮಾರ್ ಮೊದಲಾದವರು ಇದ್ದರು.