ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆಸಾರ್ವಜನಿಕರನ್ನು ಮೋಸ, ವಂಚನೆ, ಒತ್ತಾಯಪೂರಕವಾಗಿ ದುಡಿಸಿಕೊಳ್ಳುವುದು ಕಾನೂನು ದೃಷ್ಟಿಯಿಂದ ದೊಡ್ಡ ಅಪರಾಧ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರಶಾಂತ ನಾಗಲಾಪುರ್ ಹೇಳಿದರು. ನಗರದ ಚಿತ್ತವಾಡ್ಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಉದ್ಘಾಟಿಸಿ ಗುರುವಾರ ಅವರು ಮಾತನಾಡಿದರು. ಈಚೇಗೆ ಮಾನವ ಕಳ್ಳ ಸಾಗಾಣಿಕೆ ಸಮಾಜದಲ್ಲಿ ಬಹುದೊಡ್ಡ ಸಮಸ್ಯೆಯಾಗಿ ಬೆಳೆದಿದೆ. ಮಹಿಳೆಯರು ಮತ್ತು ಮಕ್ಕಳು ಎಚ್ಚೆತ್ತುಕೊಳ್ಳಬೇಕು. ಬಡತನ, ನಿರುದ್ಯೋಗ, ತಂದೆ-ತಾಯಿಗಳಿಗೆ ವಿದ್ಯಾಭ್ಯಾಸದ ಕೊರತೆ ಇವೆಲ್ಲವೂ ಮಾನವ ಕಳ್ಳ ಸಾಗಾಣಿಕೆಗೆ ದಾರಿಯಾಗಿದೆ. ಮಹಿಳೆಯರು ಆಮಿಷಗಳಿಗೆ ಬಲಿಯಾಗಿ ಮೋಸ ಹೋಗುವುದನ್ನು ತಡೆಯಬೇಕು. ಮಕ್ಕಳನ್ನು ತುಂಬಾ ಜಾಗೃತೆಯಿಂದ ಬೆಳೆಸಲು ಹೆಚ್ಚು ಅರಿವು ಮೂಡಿಸಬೇಕಿದೆ. ಮಕ್ಕಳಿಗೆ ಕಾನೂನಾತ್ಮಕ ಸೌಲಭ್ಯಗಳನ್ನು ದೊರಕಿಸಿದಾಗ ಮಾತ್ರ ಮಗುವು ಬಲಿಷ್ಠವಾಗಿ ಬೆಳೆಯುತ್ತದೆ. ಸಾರ್ವಜನಿಕರಲ್ಲಿ ಕಾನೂನು ಮತ್ತು ಶಿಕ್ಷೆಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯ ಅಧಿಕಾರಿಗಳಿಂದಾಗಬೇಕು. ಮಾನವ ಕಳ್ಳ ಸಾಗಣಿಕೆಯನ್ನು ಸಂಪೂರ್ಣ ನಿರ್ಮೂಲನೆಗೆ ಸರ್ಕಾರ ಮತ್ತು ಸಂಘ-ಸಂಸ್ಥೆಗಳ ಸಹಕಾರ ಅತ್ಯಗತ್ಯವಾಗಿದೆ. ಅಪರಾಧ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಬೇಕಿದೆ ಎಂದರು.ಅಪರ ಸಿವಿಲ್ ನ್ಯಾಯಾಧೀಶೆ ಜೆ.ಚೈತ್ರ ಮಾತನಾಡಿ, ಸಮಾಜದಲ್ಲಿನ ಅಪ್ರಾಪ್ತ ಮಕ್ಕಳು, ಮಹಿಳೆಯರು ಸೇರಿ ವ್ಯಕ್ತಿಗಳನ್ನು ಕಳ್ಳ ಸಾಗಾಣಿಕೆ ಮಾಡಿ ಲೈಂಗಿಕ ಶೋಷಣೆ, ಭಿಕ್ಷಾಟನೆ, ಜೀತ ಪದ್ದತಿ, ಬಾಲ ಕಾರ್ಮಿಕತನ, ಅಂಗಾಂಗ ಕಸಿ, ಬಾಲ್ಯ ವಿವಾಹ ಮತ್ತು ವೇಶ್ಯೆವಾಟಿಕೆ ಚಟುವಟಿಕೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿನ ಆಮಿಷಗಳ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕಿದೆ. ನಿಮ್ಮ ಆಸಕ್ತಿಗಳನ್ನು ಗಮನಿಸಿ ಅವುಗಳನುಸಾರವಾಗಿ ವಂಚನೆ ಮಾಡುವ ಜಾಲ ನಿರಂತರ ಹೊಂಚು ಹಾಕುತ್ತಿರುತ್ತದೆ. ಇಂತಹವುಗಳಿಂದ ಜಾಗರೂಕರಾಗಬೇಕಿದೆ ಎಂದು ತಿಳಿಸಿದರು.ಎರಡನೇ ಅಪರ ಸಿವಿಲ್ ನ್ಯಾಯಾಧೀಶೆ ಶೃತಿ ತೇಲಿ ಮಾತನಾಡಿ, ಮಾನವ ಕಳ್ಳಸಾಗಣಿಕೆಗೆ ಮುಖ್ಯವಾಗಿ ಚಿಕ್ಕಮಕ್ಕಳು, ಯುವತಿಯರು, ಹೆಣ್ಣುಮಕ್ಕಳನ್ನು ಗುರಿಯಾಗಿಸಲಾಗಿದೆ. ಮಾದಕ ದ್ರವ್ಯ, ಕಳ್ಳ ಸಾಗಾಣಿಕೆ, ಶಸ್ತ್ರಾಸ್ತ್ರ ಕಳ್ಳ ಸಾಗಾಣಿಕೆ, ಮಾನವ ಮಾನವರನ್ನು ಕಳ್ಳತನ ಮಾಡುವುದು ಇಂತಹ ಪ್ರಕರಣಗಳು ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು. ಈ ವೇಳೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ನಾಗರಾಜ್ ಹವಲ್ದಾರ್, ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸ ಮೂರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಯೋಜನಾಧಿಕಾರಿ ಸಿಂಧು ಅಂಗಡಿ, ಪಿಎಸ್ಐ ಸೋಮ್ಲನಾಯಕ್, ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕ ಜೆ.ಬಿ. ದೂಪದ್ ಸೇರಿದಂತೆ ಅಂಗನವಾಡಿ ಕಾರ್ಯಕರ್ತರು ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.