ಶ್ರೀಮಂಗಲ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪೊನ್ನಂಪೇಟೆ ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾಸಭೆ ಅಪ್ಪಚ್ಚ ಕವಿ ವಿದ್ಯಾಲಯದಲ್ಲಿ ಅಧ್ಯಕ್ಷ ಕಾಳಿ ಮಾಡ ಮೋಟಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಸ್ಥೆಯಲ್ಲಿ ಹಮ್ಮಿಕೊಳ್ಳಬೇಕಾದ ವಾರ್ಷಿಕ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು.
ಸ್ಕೌಟ್ ಗೈಡ್ ಚಟುವಟಿಕೆಗಳು ಮಕ್ಕಳಲ್ಲಿ ರಾಷ್ಟ್ರಪ್ರೇಮ ಪ್ರಕೃತಿ ಸಂರಕ್ಷಣೆ ಹಾಗೂ ಶಿಸ್ತನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಆದ್ದರಿಂದ ಎಲ್ಲರೂ ತಮ್ಮ ತಮ್ಮ ಶಾಲೆಗಳಲ್ಲಿ ಸ್ಕೌಟ್ ಗೈಡ್ ಚಟುವಟಿಕೆಗಳನ್ನು ಆಯೋಜಿಸಿ ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ಮಾಡಲು ಸಹಕರಿಸಬೇಕು ಎಂದು ಮೋಟಯ್ಯ ಅವರು ಹೇಳಿದರು.ಸಂಸ್ಥೆ ವತಿಯಿಂದ ಕೃಷಿ ನಡಿಗೆ, ಗೀತ ಗಾಯನ ಸ್ಪರ್ಧೆಗಳನ್ನು ಆಯೋಜಿಸಬೇಕಾಗಿದ್ದು ಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳನ್ನೊಳಗೊಂಡಂತೆ ಕಾರ್ಯಕ್ರಮ ಆಯೋಜಿಸಿ ಮಕ್ಕಳಲ್ಲಿ ಕೃಷಿಯ ಬಗ್ಗೆ ಅರಿವು ಮೂಡಿಸುವಂತೆ ಹೇಳಿದರು.
ಸಹ ಕಾರ್ಯದರ್ಶಿ ಮುತ್ತಮ್ಮ ಮಾತನಾಡಿ, ಎಲ್ಲ ಯೂನಿಟ್ ಲೀಡರ್ ಗಳು ತಮ್ಮ ತಮ್ಮ ಶಾಲೆಗಳಲ್ಲಿ ಚಟುವಟಿಕೆಗಳನ್ನು ಆಯೋಜಿಸಿ ಸಂಸ್ಥೆಯ ಅಭಿವೃದ್ಧಿಗೆ ಕೈಜೋಡಿಸುವಂತೆ ಕೋರಿದರು. ಕಾರ್ಯಕಾರಿ ಅಧ್ಯಕ್ಷ ಕೊಣಿಯಂಡ ಸಂಜು ಸೋಮಯ್ಯ, ಉಪಾಧ್ಯಕ್ಷರಾದ ನೆರೆಯಂಡಮ್ಮನ ಸುಬ್ರಮಣಿ, ಕೊಳ್ಳಿಮಾಡ ಕಾರ್ಯಪ್ಪ, ಖಜಾಂಚಿ ಬೋಡಂಗಡ ಜಗದೀಶ್, ಸಹ ಕಾರ್ಯದರ್ಶಿ ಭೋಜಮ್ಮ ಸದಸ್ಯರಾದ ಪ್ರಮೀಳಾ ವಿದ್ಯಾ, ಪ್ರಮೀಳ ಕೆ.ಆರ್. ಮತ್ತಿತರರು ಹಾಜರಿದ್ದರು. ಕಾರ್ಯದರ್ಶಿಗಳಾದ ವಾಮನ ಚಟುವಟಿಕೆಗಳ ಮಾಹಿತಿ ನೀಡಿದರು.