ದೇವಲಾಪುರ: ಸರ್ಕಾರದ ಕೃಷಿ ಸವಲತ್ತುಗಳನ್ನು ಸಕಾಲದಲ್ಲಿ ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ರಾಜ್ಯ ರೈತ ಉತ್ಪಾದಕ ಕಂಪನಿ ನಿರ್ದೇಶಕ ಎನ್.ಜೆ.ರಾಜೇಶ್ ಕರೆ ನೀಡಿದರು. ನಾಗಮಂಗಲ ತಾಲೂಕಿನ ದೇವಲಾಪುರ ರೈತ ಉತ್ಪಾದಕ ಕಂಪನಿ ಸಂಘದ ಕಚೇರಿಯಲ್ಲಿ ಕಂಪನಿಯ ಷೇರುದಾರರಿಗೆ ಉಚಿತ ಬಿತ್ತನೆ ಬೀಜಗಳನ್ನು ವಿತರಿಸಿ ಮಾತನಾಡಿ, ಸರ್ಕಾರವು ಕೃಷಿ ಇಲಾಖೆ ಹಾಗೂ ರೈತ ಉತ್ಪಾದಕ ಕಂಪನಿಗಳಿಂದ ಸಕಾಲದಲ್ಲಿ ರೈತರಿಗೆ ಬೇಕಾದ ಬಿತ್ತನೆ ಬೀಜಗಳು ಹಾಗೂ ಕೃಷಿಗೆ ಪೂರಕವಾದ ಔಷಧಿ ಹಾಗೂ ಉಪಕರಣಗಳು ನೀಡುತ್ತಿದೆ ಎಂದರು. ವಿಶೇಷ ಯೋಜನೆಗಳನ್ನು ಜಾರಿಗೆ ತಂದ ಸಂದರ್ಭದಲ್ಲಿ ರೈತರು ಸಂಬಂಧಪಟ್ಟ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ನಮ್ಮ ಕಂಪನಿ ಕಚೇರಿಯಲ್ಲಿ ಸಂಪರ್ಕಿಸುವ ಮುಖಾಂತರ ಕೃಷಿ ಸವಲತ್ತುಗಳನ್ನು ಪಡೆಯಬೇಕು ಎಂದು ತಿಳಿಸಿದರು. ಇದೇ ವೇಳೆ ಕಂಪನಿ ನಿರ್ದೇಶಕರಾದ ದೇ.ರಾ.ಜಗದೀಶ್, ರೈತ ಮುಖಂಡರಾದ ಈಶ್ವರಯ್ಯ, ನಿಂಗೇಗೌಡ, ಕುಮಾರ್ ಸೇರಿ ಅನೇಕ ರೈತ ಮುಖಂಡರು ಹಾಜರಿದ್ದರು.