ಕನಕಗಿರಿ: ಅಂದಿನ ಕೆಚ್ಚೆದೆಯ ಹೋರಾಟಗಳೇ ನಮ್ಮ ಸುಖ ಜೀವನಕ್ಕೆ ನಾಂದಿಯಾಗಿದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಸ್ಮರೀಸಿದರೆ ನಮ್ಮ ಬದುಕು ಸಾರ್ಥಕವಾಗಲಿದೆ ಎಂದು ತಹಸೀಲ್ದಾರ ಚಂದ್ರಶೇಖರ ಗಾಳಿ ಹೇಳಿದರು.
ಅವರು ಪಟ್ಟಣದ ಕೆಪಿಎಸ್ ಮೈದಾನದಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ ೮೦ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು.ಅನೇಕ ಹೋರಾಟಗಾರರ ತ್ಯಾಗ, ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ನಾವು ಸ್ವಾತಂತ್ರ್ಯವಾಗಿದ್ದುಕೊಂಡು ದೇಶದ ಬೆಳವಣಿಗೆಗೆ ಮುಂದಾಗಬೇಕಿದೆ. ಯುವ ಸಮೂಹ ಜವಾಬ್ದಾರಿ ಅರಿತು ಮುನ್ನಡೆದರೆ ರಾಷ್ಟ್ರ ಪರಿವರ್ತನೆಯತ್ತ ಸಾಗಲಿದೆ ಎಂದರು.
ಇನ್ನೂ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಬರ ಆವರಿಸಿದ್ದು, ಈ ಪೈಕಿ ನಮ್ಮ ತಾಲೂಕು ಬರಪೀಡಿತ ತಾಲೂಕು ಪ್ರದೇಶವೆಂದು ಘೋಷಣೆಯಾಗಲಿದೆ. ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ಅದರಂತೆ ಸರ್ಕಾರ ಕೆಲವೇ ದಿನಗಳಲ್ಲಿ ಬರಪೀಡಿತ ಪ್ರದೇಶವಾರು ಘೋಷಣೆ ಮಾಡಲಿದ್ದು, ಅದರಲ್ಲಿ ನಮ್ಮ ಕನಕಗಿರಿ ತಾಲೂಕು ಸೇರ್ಪಡೆಯಾಗಲಿದೆ ಎಂದು ತಿಳಿಸಿದರು.ನಂತರ ಪಪಂ ಅಧ್ಯಕ್ಷೆ ತನುಶ್ರೀ ಟಿಜೆ ರಾಮಚಂದ್ರ ಮಾತನಾಡಿ, ನನ್ನ ಪತಿ ಇದೇ ಶಾಲೆಯಲ್ಲಿ ಓದಿದ್ದು, ನಾನು ಪಪಂ ಅಧ್ಯಕ್ಷೆಯಾಗಿ ಇದೇ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ಮಾತು ಆರಂಭಿಸಿದ ಅವರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರಿಗೆ ಸ್ಮರಿಸಿಕೊಳ್ಳುವ ಸುದಿನ ಇದಾಗಿದೆ. ಇವರ ತ್ಯಾಗ ಕೇವಲ ಒಂದು ದಿನ ಸೀಮಿತವಾಗಿರದೆ ನಿತ್ಯವೂ ದೇಶಕ್ಕಾಗಿ ಮಡಿದ ವೀರರನ್ನು ನೆನೆಸುವುದು ನಮ್ಮ ಧ್ಯೇಯವಾಗಬೇಕು. ಅಂದಾಗ ಮಾತ್ರ ನಾವು ಮತ್ತು ಸಮಾಜದಲ್ಲಿ ದೇಶಭಕ್ತಿಯ ಕುರಿತು ಜಾಗೃತಿ ಮೂಡಲಿದೆ ಎಂದರು.
ಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆದವು.ಪಥ ಸಂಚಲನದಲ್ಲಿ ಆದರ್ಶ ಶಾಲೆಯ ವಿದ್ಯಾರ್ಥಿಗಳು ಪ್ರಥಮ, ಶ್ರೀಗುರು ರುದ್ರಸ್ವಾಮಿ ಪ್ರೌಢ ಶಾಲೆ ದ್ವಿತೀಯ, ಕೆಪಿಎಸ್ ಪ್ರೌಢ ಶಾಲೆ ತೃತೀಯ ಸ್ಥಾನ ಪಡೆದವು. ಇನ್ನೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆದರ್ಶ ಶಾಲೆ ಪ್ರಥಮ, ಮೊರಾರ್ಜಿ ವಸತಿ ಶಾಲೆ ದ್ವಿತೀಯ ಹಾಗೂ ಕೆಪಿಎಸ್ ಶಾಲೆ ತೃತೀಯ ಸ್ಥಾನ ಪಡೆದಿದ್ದು, ತಾಲೂಕಾಡಳಿತದಿಂದ ಪಾರಿತೋಷಕ ನೀಡಿ ಗೌರವಿಸಲಾಯಿತು.
ವಿಶೇಷ ಮತಪಟ್ಟಿ ಪರಿಷ್ಕರಣಿಯಲ್ಲಿ ಶ್ರಮಿಸಿದ ಬಿಎಲ್ ಒಗಳಿಗೆ, ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಪಿಐ ವಿ. ನಾರಾಯಣ, ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ಕೆ. ರಾಜಶೇಖರ, ಪ್ರಭಾರಿ ಸಿಡಿಪಿಐ ವಿಜಯಲಕ್ಷ್ಮೀ, ಶಿಕ್ಷಣ ಸಂಯೋಜಕ ಶ್ರೀಕಾಂತ ಕೊಪ್ಪಳ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಜರತಹುಸೇನ, ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಸಂಗಪ್ಪ ಸಜ್ಜನ್, ರಾಜಸಾಬ ನಂದಾಪೂರ, ಶರಣೇಗೌಡ, ಹನುಮಂತ ಬಸರಿಗಿಡ, ನಂದಿನಿ ರಾಮಾಂಜನೇಯರೆಡ್ಡಿ ಸೇರಿದಂತೆ ಇತರರಿದ್ದರು.