ಕುಷ್ಟಗಿ: ಸ್ವಾತಂತ್ರ್ಯಕ್ಕಾಗಿ ಹೋರಾಡಿ ತ್ಯಾಗ–ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸುವುದರೊಂದಿಗೆ ಸ್ವಾತಂತ್ರ್ಯದ ಮೌಲ್ಯ ಅರಿತುಕೊಂಡು ಆರೋಗ್ಯ,ಶಿಕ್ಷಣ ಹಾಗೂ ಗ್ರಾಮಾಭಿವೃದ್ಧಿಗಾಗಿ ನಾವೆಲ್ಲರೂ ಶ್ರಮಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ್ ಹೇಳಿದರು.

ಪಟ್ಟಣದ ತಾಪಂ ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ನಮಗೆ ಸುಮ್ಮನೆ ದೊರೆತದ್ದಲ್ಲ. ಇದರ ಹಿಂದೆ ಕೋಟ್ಯಂತರ ಭಾರತೀಯರ ಹೋರಾಟ, ಕಣ್ಣೀರು ಹಾಗೂ ರಕ್ತದರ್ಪಣವಿದೆ. ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಅನೇಕ ಮಹಾನ್ ನಾಯಕರ ಕೊಡುಗೆಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ನಿಂಗನಗೌಡ ವಿ.ಎಚ್, ಗೀತಾ ಅಯ್ಯಪ್ಪನವರ್, ಯೋಜನಾಧಿಕಾರಿ ಸುವರ್ಣ, ವ್ಯವಸ್ಥಾಪಕ ಶಾಂತವೀರಯ್ಯ, ರವಿಗೌಡರ್ ಸೇರಿದಂತೆ ನಾಮನಿರ್ದೇಶಿತ ಸದಸ್ಯರು ಹಾಗೂ ತಾಪಂ ಸಿಬ್ಬಂದಿ ಉಪಸ್ಥಿತರಿದ್ದರು.

ವಿವಿಧೆಡೆ ಸ್ವಾತಂತ್ರ್ಯೋತ್ಸವ ಆಚರಣೆ:

ಕುಷ್ಟಗಿ ಪಟ್ಟಣದ ಪುರಸಭೆ,ಸಂತೆ ಮೈದಾನ ಸೇರಿದಂತೆ ವಿವಿಧ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಸಂಭ್ರಮದಿಂದ ಆಚರಿಸಲಾಯಿತು.


ತಾಲೂಕಿನ ದೋಟಿಹಾಳ ಗ್ರಾಪಂ, ಕೇಸೂರು ಗ್ರಾಪಂ, ಬಿಜಕಲ್ ಗ್ರಾಪಂ, ಕ್ಯಾದಿಗುಪ್ಪ ಗ್ರಾಪಂ, ಮುದೇನೂರು ಗ್ರಾಪಂ, ಶಿರಗುಂಪಿ ಗ್ರಾಪಂ ಸೇರಿದಂತೆ ವಿವಿಧ ಗ್ರಾಪಂ ಕಚೇರಿಗಳಲ್ಲೂ ಧ್ವಜಾರೋಹಣ ನೆರವೇರಿಸಲಾಯಿತು. ಶಾಲಾ–ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸ್ವಾತಂತ್ರ್ಯೋತ್ಸವವನ್ನು ಸಡಗರ–ಸಂಭ್ರಮದಿಂದ ಆಚರಿಸಿದರು. ವಿವಿಧೆಡೆ ದೇಶಭಕ್ತಿ ಗೀತೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಂದ ವಿವಿಧ ಪ್ರದರ್ಶನಗಳು ನಡೆದವು.