ಗಾಂಧಿ ಗ್ರಾಮ ಪುರಸ್ಕಾರ: ಈ ಬಾರಿ 3 ಹಂತದಲ್ಲಿ ಪ್ರಶಸ್ತಿ ನೀಡಲು ಸರ್ಕಾರ ನಿರ್ಧಾರ

| Published : Nov 01 2025, 02:45 AM IST

ಗಾಂಧಿ ಗ್ರಾಮ ಪುರಸ್ಕಾರ: ಈ ಬಾರಿ 3 ಹಂತದಲ್ಲಿ ಪ್ರಶಸ್ತಿ ನೀಡಲು ಸರ್ಕಾರ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

2024-25ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರವನ್ನು ನೀಡಲು ಸರ್ಕಾರ ಕೊನೆಗೂ ಮುಂದಾಗಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: 2024-25ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರವನ್ನು ನೀಡಲು ಸರ್ಕಾರ ಕೊನೆಗೂ ಮುಂದಾಗಿದೆ. ಈ ಬಾರಿ ಸರ್ಕಾರ ಮೂರು ಹಂತದಲ್ಲಿ ಉತ್ತಮ ಕೆಲಸ ಹಾಗೂ ವಿಶೇಷ ಸಾಧನೆಗೈದ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿ ಪುರಸ್ಕಾರ ನೀಡಲು ನಿರ್ಧರಿಸಿದೆ.

ಪ್ರತಿ ಬಾರಿ ಸರ್ಕಾರ ಅಕ್ಟೋಬರ್‌ 2ರ ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ರಾಜ್ಯದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿ, ಪುರಸ್ಕಾರ ಮತ್ತು ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಈ ಬಾರಿ ಸರ್ಕಾರ ವಿಳಂಬವಾದರೂ ಕೊನೆಗೂ ನಿರ್ಧಾರ ಕೈಗೊಂಡಿದೆ. ಈ ಕುರಿತು ಕನ್ನಡಪ್ರಭ ಅ.1ರಂದು ಈ ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಎಳ್ಳು ನೀರು? ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.

ಗಾಂಧಿ ಗ್ರಾಮ ಪುರಸ್ಕಾರ ನೀಡಲು ಸರ್ಕಾರ ಈಗಾಗಲೇ ಸುತ್ತೋಲೆ ಹೊರಡಿಸಿ, ಆಯ್ಕೆ ಪ್ರಕ್ರಿಯೆ ಆರಂಭಿಸಿದೆ. ಈ ಬಾರಿ ಪ್ರತಿ ವಿಭಾಗದಲ್ಲಿ (4 ವಿಭಾಗಗಳು) ಅತ್ಯುತ್ತಮ ಸಾಧನೆ ಮಾಡಿ ಪ್ರಥಮ ಸ್ಥಾನ ಪಡೆದ 12 ಗ್ರಾಮ ಪಂಚಾಯಿತಿಗಳಿಗೆ ಗ್ರಾಪಂಗೆ ₹15 ಲಕ್ಷ, ದ್ವಿತೀಯ ಸ್ಥಾನ ಪಡೆದ ಗ್ರಾಪಂಗೆ ₹12 ಲಕ್ಷ, ತೃತೀಯ ಸ್ಥಾನ ಪಡೆದ ಗ್ರಾಪಂಗೆ ₹10 ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತಿದೆ.

ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸಾಧನೆಗೈದ ಒಂದು ಗ್ರಾಮ ಪಂಚಾಯಿತಿ ಆಯ್ಕೆ ಮಾಡಿ, ಪ್ರಶಸ್ತಿಯ ಜತೆಗೆ 8 ಲಕ್ಷ ರುಗಳ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ವಿಭಾಗ ಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ, ಅತ್ಯುತ್ತಮ ಗ್ರಾಮ ಪಂಚಾಯಿತಿಗಳನ್ನು ಹೊರತು ಪಡಿಸಿ, ಉಳಿದ 196 ಗ್ರಾಮ ಪಂಚಾಯಿತಿಗಳಿಗೆ ಪ್ರತಿ ತಾಲೂಕಿಗೆ ಒಂದರಂತೆ ಉತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯಿತಿಗೆ, ಗಾಂಧಿ ಗ್ರಾಮ ಪುರಸ್ಕಾರ ಹಾಗೂ ₹4 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತಿದೆ.

ವಿಭಾಗ ಮಟ್ಟದಲ್ಲಿ 12, ಜಿಲ್ಲಾ ಮಟ್ಟದಲ್ಲಿ 31 ಸೇರಿದಂತೆ ಒಟ್ಟು 43 ಗ್ರಾಪಂಗಳನ್ನು ಹೊರತು ಪಡಿಸಿ, ಉಳಿದ 196 ತಾಲೂಕುಗಳಿಗೆ ತಲಾ ಒಂದು ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿ, ಗಾಂಧಿ ಗ್ರಾಮ ಪುರಸ್ಕಾರ ನೀಡಲು ಸರ್ಕಾರ ನಿರ್ಧರಿಸಿದೆ.

ಕಳೆದ 2 ವರ್ಷಗಳ ಹಿಂದೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಗ್ರಾಪಂಗೆ 2024-25ನೇ ಸಾಲಿನಲ್ಲಿ ಪರಿಶೀಲನೆಯಲ್ಲಿ ಪುನಃ ಮೊದಲ ಸ್ಥಾನ ಪಡೆದರೆ ಅಂತಹ ಗ್ರಾಪಂಗಳನ್ನು ವಿಶೇಷ ಪುರಸ್ಕಾರ ದಡಿ ಆಯ್ಕೆ ಮಾಡಲಾಗುವುದು. ಗ್ರಾಪಂಗಳಿಗೆ ಪ್ರಶಸ್ತಿ ಪತ್ರ ಮತ್ತು ಫಲಕವನ್ನು ಮಾತ್ರ ನೀಡಲಾಗುತ್ತಿದೆ.

ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗಾಗಿ ರಾಜ್ಯ ಪಂಚಾಯತ್‌ ರಾಜ್‌ ಇಲಾಖೆ ನೀಡಿರುವ ಪ್ರಶ್ನಾವಳಿಗೆ ಆನ್‌ಲೈನ್‌ನಲ್ಲಿ ಮಾಹಿತಿ ಭರ್ತಿ ಮಾಡುವ ಕೆಲಸ ಗ್ರಾಮ ಪಂಚಾಯಿತಿಗಳಲ್ಲಿ ನಡೆಯುತ್ತಿದೆ ಎನ್ನುತ್ತಾರೆ ಹೂವಿನಹಡಗಲಿ ತಾಪಂ ಇಒ ಪರಮೇಶ್ವರ.