ಜಮೀನಿನಲ್ಲಿ ಅಳವಡಿಸುವ ವಿದ್ಯುತ್ ಲೈನ್‌ಗೆ ಪರಿಹಾರ ನೀಡಿ

| Published : May 15 2025, 02:05 AM IST

ಸಾರಾಂಶ

ಕುದರಿಮೋತಿ ಗ್ರಾಮದ ಜಮೀನಿನಲ್ಲಿ ವಿದ್ಯುತ್ ಲೈನ್ ಅಳವಡಿಸುತ್ತಿರುವ ಕಂಪನಿಯವರು ರೈತರಿಗೆ ಪರಿಹಾರ ನೀಡಿ ಲೈನ್ ಅಳವಡಿಸಬೇಕು ಎಂದು ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕುಕನೂರು:

ತಾಲೂಕಿನ ಕುದರಿಮೋತಿ ಗ್ರಾಮದ ಜಮೀನಿನಲ್ಲಿ ವಿದ್ಯುತ್ ಲೈನ್ ಅಳವಡಿಕೆ ಕುರಿತು ರೈತರು ಹಾಗೂ ಪೊಲೀಸರ ನಡುವೆ ಬುಧವಾರ ಮಾತಿನ ಚಕಮಕಿ ನಡೆದಿದೆ.

ಕುದರಿಮೋತಿ ಗ್ರಾಮದ ಜಮೀನಿನಲ್ಲಿ ವಿದ್ಯುತ್ ಲೈನ್ ಅಳವಡಿಸುತ್ತಿರುವ ಕಂಪನಿಯವರು ರೈತರಿಗೆ ಪರಿಹಾರ ನೀಡಿ ಲೈನ್ ಅಳವಡಿಸಬೇಕು ಎಂದು ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಪೋಲಿಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.

ರೈತರ ಒಪ್ಪಿಗೆ ಇಲ್ಲದೆ ವಿದ್ಯುತ್ ಕಂಬ ಹಾಗೂ ವಿದ್ಯುತ್ ಲೈನ್ ಅಳವಡಿಸುವ ಕಾರ್ಯ ಆಗುತ್ತಿದೆ. ರೈತರಿಗೆ ಪರಿಹಾರ ಸಹ ನೀಡಿಲ್ಲ. ವಿದ್ಯುತ್ ಲೈನ್ ಅಳವಡಿಕೆ ಕಾರ್ಯ ಕೈ ಬಿಡಬೇಕು ಎಂದು ರೈತರು ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೆಲಸಕ್ಕೆ ಅಡ್ಡಿಪಡಿಸಿದರು. ಮಧ್ಯೆ ಪ್ರವೇಶಿಸಿದ ಪೊಲೀಸರ ಜತೆಗೆ ರೈತರು ಸಹ ಆಕ್ರೋಶ ವ್ಯಕ್ತಪಡಿಸಿದರು. ಕಂಪನಿ ರೈತರಿಗೆ ಸೂಕ್ತ ಪರಿಹಾರ ನೀಡುತ್ತಿಲ್ಲ. ಪೊಲೀಸರು ರೈತರ ಪರ ನಿಲ್ಲುವ ಬದಲು ವಿದ್ಯುತ್ ಲೈನ್ ಅಳವಡಿಕೆ ಕಂಪನಿ ಪರ ನಿಲ್ಲುತ್ತಿರುವುದು ಸರಿಯಲ್ಲ ಎಂದು ಪೊಲೀಸರ ಜತೆ ವಾಗ್ವಾದ ನಡೆಸಿದರು.ಈ ವೇಳೆ ಮಾತನಾಡಿದ ನೆಲಜೇರಿಯ ಶರಣಪ್ಪ ಗುಂಗಾಡಿ, ರೈತರ ಒಪ್ಪಿಗೆ ಪಡೆಯದೆ ರೈತರನ್ನು ಎದುರಿಸಿ ಬೆದರಿಸಿ ವಿದ್ಯುತ್ ಲೈನ್ ಅಳವಡಿಕೆ ಕಾರ್ಯ ಆಗುತ್ತಿದೆ. ರೈತರ ಒಪ್ಪಿಗೆಯನ್ನು ಸಹ ಹೆದರಿಸಿ ಪಡೆಯುತ್ತಿದ್ದಾರೆ. ಇದು ದುರ್ದೈವ. ರೈತರಿಗೆ ಸರಿಯಾದ ಪರಿಹಾರ ಕೊಡದೆ ಪೊಲೀಸರನ್ನು ಕರೆದುಕೊಂಡು ಹೋಗಿ ಜಮೀನಿನಲ್ಲಿ ವಿದ್ಯುತ್ ಲೈನ್ ಅಳವಡಿಸಲಾಗುತ್ತಿದೆ. ಪೊಲೀಸ್ ಇಲಾಖೆ ಸೇರಿದಂತೆ ಕಂಪನಿಯ ಉದ್ಯೋಗಿಗಳು ರೈತರಿಗೆ ವಂಚಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.