ಕನ್ನಡಪ್ರಭ ವಾರ್ತೆ ಮುಧೋಳ

ಪೊಲೀಸ್ ಪೇದೆ, ಗನ್‌ಮ್ಯಾನ್‌ ಎಂದರೆ ಸಚಿವರು, ಕೆಲ ಉನ್ನತ ಉದ್ದೆಯಲ್ಲಿದ್ದವರಿಗೆ ಒಂದು ರೀತಿಯ ಅಸಡ್ಡೆ ಭಾವನೆ ಇರೋದು ಸಾಮಾನ್ಯ. ಆದರೆ, ರಾಜ್ಯದ ರಾಜ್ಯಪಾಲರೊಬ್ಬರು ಪೊಲೀಸ್‌ ಪೇದೆಯಾಗಿರುವ ತಮ್ಮ ಗನ್‌ ಮ್ಯಾನ್‌ ಮದುವೆ ಸಮಾರಂಭಕ್ಕೆ ದೂರದ ಬೆಂಗಳೂರಿನಿಂದ ಆಗಮಿಸಿ ವಧು-ವರರನ್ನು ಹರಿಸಿದ ಘಟನೆ ಸಾರ್ವಜನಕರ ಮೆಚ್ಚುಗೆಗೆ ಪಾತ್ರವಾಗಿದೆ.ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಳಲಿ (ಮುಗಳಖೋಡ) ಗ್ರಾಮದ ಶಾಂತವ್ವ ಬಸಲಿಂಗಪ್ಪ ಮಂಟೂರ ಅವರ ದ್ವಿತೀಯ ಪುತ್ರ ಪರಮಾನಂದ ಮಂಟೂರ ಮದುವೆ ಸಮಾರಂಭ ನಗರದ ಪೊಲೀಸ್ ಭವನದಲ್ಲಿ ಇತ್ತೀಚೆಗೆ ಜರುಗಿತು. ಈ ಮದುವೆ ಸಮಾರಂಭಕ್ಕೆ ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್ ಅವರು ಆಗಮಿಸಿ ನವ ದಂಪತಿಗೆ ಶುಭ ಹಾರೈಸಿದರು. ಪ್ರಸ್ತುತ ಪರಮಾನಂದ ಮಂಟೂರ ಅವರು ರಾಜ್ಯಪಾಲರ ಗನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿದಿನ ತಮ್ಮೊಂದಿಗೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯತ್ತ ಇಂತಹ ಗೌರವ ಮತ್ತು ಸ್ನೇಹಭಾವ ತೋರಿಸುವುದು ಸಮಾಜಕ್ಕೆ ಒಂದು ಮಹತ್ತರ ಸಂದೇಶ ನೀಡುತ್ತದೆ. ಇದು ಸರಳತೆ, ಸಮಾನತೆ ಮತ್ತು ಮಾನವೀಯತೆಗಳ ಪ್ರತಿರೂಪ ಎಂದು ರಾಜ್ಯಪಾಲರ ನಡೆಗೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.