ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಆ.31ರಿಂದ ಸೆ.4 ರವರೆಗೆ ಐದು ದಿನಗಳ ನಡೆಯುವ ಪಟ್ಟಣದ ಆರಾಧ್ಯ ದೈವ ಮೂಲನಂದೀಶ್ವರ ಜಾತ್ರಾಮಹೋತ್ಸವ ಹಾಗೂ ಪವಿತ್ರ ಮಾಸ ಶ್ರಾವಣ ಮಾಸದಂಗವಾಗಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ, ಬಸವೇಶ್ವರ ಜಾತ್ರಾ ಉತ್ಸವ ಸಮಿತಿ, ಬಸವೇಶ್ವರ ಸೇವಾ ಸಮಿತಿ ಸಹಯೋಗದಲ್ಲಿ ನಂದೀಶ್ವರ ರಂಗಮಂದಿರದಲ್ಲಿ ನಿತ್ಯ ಸಂಜೆ 6.30 ರಿಂದ 8 ಗಂಟೆಯವರೆಗೆ ಬಸವ ಬೆಳವಿಯ ಶರಣಬಸವ ಸ್ವಾಮೀಜಿಯವರ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗವನ್ನು ಪಟ್ಟಣದ ಜನರು ಸೇರಿ ತಾಲೂಕಿನ ಜನತೆ ಪಡೆದುಕೊಳ್ಳಬೇಕೆಂದು ಬಸವೇಶ್ವರ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಶ್ರೀಕಾಂತ ಕೊಟ್ರಶೆಟ್ಟಿ ಹೇಳಿದರು.

ಪಟ್ಟಣದ ನಂದೀಶ್ವರ ರಂಗಮಂದಿರದ ಮುಂಭಾಗದ ಸಿದ್ಧತೆಯನ್ನು ಬುಧವಾರ ವೀಕ್ಷಿಸಿದ ನಂತರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿನ ಖ್ಯಾತ ಪ್ರವಚನಕಾರ ಶರಣಬಸವ ಸ್ವಾಮೀಜಿ 12 ನೇ ಶತಮಾನದ ಬಸವಾದಿ ಶರಣರ ದಿವ್ಯ ಸಂದೇಶಗಳನ್ನು ವಿಶೇಷ ಪ್ರವಚನ ನೀಡಲಿದ್ದಾರೆ. ಆ.13 ರಂದು ಸಂಜೆ 6ಕ್ಕೆ ಪ್ರವಚನ ಉದ್ಘಾಟನೆ ಜರುಗಲಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಸಿದ್ದಲಿಂಗ ಸ್ವಾಮೀಜಿ, ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ನೇತೃತ್ವವನ್ನು ಶಿವಾನಂದ ಈರಕಾರಮುತ್ಯಾ ವಹಿಸುವರು. ಮಾಜಿ ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ವಹಿಸುವರು. ಆ.31 ರಿಂದ ಐದು ದಿನಗಳ ನಡೆಯಲಿರುವ ಜಾತ್ರೆಯನ್ನು ವೈಭವದಿಂದ ಆಚರಿಸಲು ಎಲ್ಲರ ಸಹಕಾರ ಮುಖ್ಯವಾಗಿದೆ. ಜಾತ್ರೆಯ ಸಂಪ್ರದಾಯ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾತ್ರೆಯನ್ನು ಐತಿಹಾಸಿಕವನ್ನಾಗಿಸಲು ಶ್ರಮಿಸಲಾಗುವುದು. ಜಾತ್ರೆಗೆ ಯಾವುದೇ ಕಳಂಕ ಬಾರದಂತೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.

ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಬಸವರಾಜ ಗೊಳಸಂಗಿ ಮಾತನಾಡಿ, ಶಾಲಾ ಆವರಣದಲ್ಲಿರುವ ಶಾಲಾ ಆಟದ ಸಾಮಗ್ರಿಗಳನ್ನು ತೆಗೆದರೆ ಮದ್ದಿನ ಕಾರ್ಯಕ್ರಮಕ್ಕೆ, ಕಸರತ್ತಿನ ಕಾರ್ಯಕ್ರಮಕ್ಕೆ ಅನುಕೂಲವಾಗುತ್ತದೆ. ಈ ದಿಶೆಯತ್ತ ಎಲ್ಲರೂ ಗಮನ ಹರಿಸಬೇಕೆಂದರು.

ವಿವೇಕ ಬ್ರಿಗೇಡ್ ಮುಖ್ಯಸ್ಥ ವಿನುತ ಕಲ್ಲೂರ ಮಾತನಾಡಿ, ಪ್ರವಚನ, ಪ್ರವಚನದ ದಾಸೋಹ, ಜಾತ್ರೆಯ ಕಾರ್ಯನಿರ್ವಹಣೆ ಮಾಡುವದು ತುಂಬಾ ಮುಖ್ಯವಾಗಿದೆ ಎಂದರು.


ಬಸವೇಶ್ವರ ಸೇವಾ ಸಮಿತಿ ಪ್ರ.ಕಾರ್ಯದರ್ಶಿ ಎಂ.ಜಿ.ಆದಿಗೊಂಡ ಅಭಿಪ್ರಾಯ ಹಂಚಿಕೊಂಡರು. ಪ್ರವಚನ ಮುಖ್ಯ ವೇದಿಕೆ ಮುಂಭಾಗ 160 ಅಡಿ ಉದ್ದ, 70 ಅಡಿ ಅಗಲವಾದ ಶಾಮಿಯಾನ ವ್ಯವಸ್ಥೆ ಮಾಡಲಾಗಿದೆ. 1 ಸಾವಿರಕ್ಕೂ ಹೆಚ್ಚು ಜನರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಪ್ರವಚನ ಕೇಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಮಿಯಾನ ವ್ಯವಸ್ಥೆ ಮಾಡಲಾಗುವದು ಎಂದರು.

ಬಸವೇಶ್ವರ ಸೇವಾ ಸಮಿತಿ ಉಪಾಧ್ಯಕ್ಷ ಬಸವರಾಜ ಹಾರಿವಾಳ ಮಾತನಾಡಿದರು. ಈ ವೇಳೆ ಶಂಕರಗೌಡ ಬಿರಾದಾರ, ರವಿ ರಾಠೋಡ, ಸುರೇಶಗೌಡ ಪಾಟೀಲ, ರಮೇಶ ಯಳಮೇಲಿ, ಸಂಕನಗೌಡ ಪಾಟೀಲ, ಚಂದ್ರಶೇಖರಗೌಡ ಪಾಟೀಲ, ಉಮೇಶ ಹಾರಿವಾಳ, ಶೇಖರ ಗೊಳಸಂಗಿ, ರವಿ ಚಿಕ್ಕೊಂಡ, ಗೋಪಾಲ ಅಗರವಾಲ, ಜಾತ್ರಾ ಉತ್ಸವ ಸಮಿತಿ ಪದಾಧಿಕಾರಿಗಳು ಸೇರಿದಂತೆ ಇತರರು ಇದ್ದರು. ಇದೇ ವೇಳೆ ಪ್ರವಚನದ ನಿತ್ಯ ದಾಸೋಹಕ್ಕೆ ನಿಗದಿ ಪಡಿಸಿದ ₹ 21 ಸಾವಿರ ದೇಣಿಗೆ ಹಣವನ್ನು ರವಿಗೌಡ ಚಿಕ್ಕೊಂಡ ಸಮಿತಿಗೆ ನೀಡಿದರು.