ಮಂಗಳೂರು: ಪತ್ರಕರ್ತರಾಗಿ ಗುರುವಪ್ಪ ಬಾಳೆಪುಣಿ ಶಾಲಾ ದಿನಗಳಿಂದಲೇ ನಾಯಕತ್ವ ಗುಣ ಹೊಂದಿದ್ದರು. ಪತ್ರಕರ್ತರಾಗಿಯೂ ಸಾಮಾಜಿಕವಾಗಿ ಕೆಲಸ ಮಾಡಿದ್ದರು. ಇಂದು ಅವರ ಹೆಸರಿನಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದು ನರಿಂಗಾನ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಹೇಳಿದರು.ಅವರು ಶುಕ್ರವಾರ ನಗರದ ಪ್ರೆಸ್ ಕ್ಲಬ್ನಲ್ಲಿ ಎಜು ಕಾರುಣ್ಯ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಮಂಗಳೂರು ವತಿಯಿಂದ ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ. ಬಾಳೇಪುಣಿಯವರ ಸ್ಮರಣಾರ್ಥ ದತ್ತಿನಿಧಿ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅರ್ಹ ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡಿ ಸಹಾಯ ಮಾಡುವ ಕೆಲಸ ನಡೆಸಲಾಗಿದೆ. ಈ ಮೂಲಕ ಸಂಘಟನೆಯ ಉದ್ದೇಶ ಈಡೇರಿದೆ ಎಂದರು.ಉದ್ಯಮಿ ಉಮಿಯ ರಾಧಾಕೃಷ್ಣ ರೈ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಉತ್ತಮ ಕೆಲಸದ ಮೂಲಕ ಬಾಳೆಪುಣಿ ಅವರ ನೆನಪಿಸುವಂತೆ ಮಾಡಲಾಗಿದೆ. ಈ ಮೂಲಕ ಸಮಾಜಕ್ಕೆ ಮಾದರಿಯಾಗಿ ವಿದ್ಯಾರ್ಥಿಗಳ ಬೆಳೆಸುವ ಕೆಲಸ ಆಗಿದೆ ಎಂದರು.
ಜಿಲ್ಲಾ ಸ್ವಚ್ಛತಾ ರಾಯಬಾರಿ ಶೀನಾ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ನೆರವು ಪಡೆದು ವಿದ್ಯಾರ್ಥಿಗಳು ಬಾಳೆಪುಣಿ ಅವರನ್ನು ಮೀರಿ ಬೆಳೆಯಬೇಕು. ಪತ್ರಕರ್ತರು ಸತ್ಯ, ಪ್ರಾಮಾಣಿಕತೆ, ಸೇವಾ ಪರತೆಯಿಂದ ಕೆಲಸ ಮಾಡುತ್ತಾರೆ ಎಂಬುದಕ್ಕೆ ಇಂದಿನ ಕಾರ್ಯಕ್ರಮ ನಿದರ್ಶನ ಎಂದರು.ವಾರ್ತಾಧಿಕಾರಿ ಖಾದರ್ ಷಾ, ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಧ್ಯಕ್ಷ ಪುಷ್ಪರಾಜ್, ಕಾವೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಲೋಕೇಶ್, ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಕರಾವಳಿ ಕುರುಬರ ಸಂಘದ ಅಧ್ಯಕ್ಷ ನಿರಂಜನ್ ಎಲ್.ಆರ್. ಗಾಂಧಿನಗರ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರಮೇಶ್ ಶೆಟ್ಟಿಪಂಜಿಮೊಗರು, ಟ್ರಸ್ಟಿಗಳಾದ ಪ್ರಶಾಂತ್ ಅಬ್ಬೆಟ್ಟು, ದಿನೇಶ್ ನಾಯ್ಕ ಕಾಶಿಪಟ್ಣ, ಬಾಳೇಪುಣಿ ಅವರ ಪತ್ನಿ ಜಯಂತಿ ಬಾಳೇಪುಣಿ, ಪುತ್ರ ಮನೇಶ್ ಬಾಳೇಪುಣಿ ಮತ್ತಿತರರು ಇದ್ದರು.
ಟ್ರಸ್ಟ್ ಅಧ್ಯಕ್ಷ ಮೋಹನ್ ದಾಸ್ ಮರಕಡ ಪ್ರಾಸ್ತಾವಿಕ ಮಾತನಾಡಿದರು. ಅನ್ಸಾರ್ ಇನೊಳಿ ಸ್ವಾಗತಿಸಿದರು. ಮಾನಸ ವಂದಿಸಿದರು. ಬಬಿತಾ ನಿರೂಪಿಸಿದರು.ಎಂಟು ವಿದ್ಯಾರ್ಥಿಗಳಿಗೆ ನೆರವು: ಟ್ರಸ್ಟ್ ವತಿಯಿಂದ ಮಂಗಳೂರಿನ ತ್ರಿಷಾ ಕಾಲೇಜಿನ ಧೃತಿ ಕುಂಜತ್ತಬೈಲ್, ಕೆನರಾ ಕಾಲೇಜಿನ ಮೇಘಾ ಸಜಿಪ, ಸಂತ ಅಲೋಷಿಯಸ್ ಕಾಲೇಜಿನ ಬಿಸಿಎ ವಿದ್ಯಾರ್ಥಿನಿ ತ್ರಿಷಾ ಪಚ್ಚನಾಡಿ, ಕೆನರಾ ಕಾಲೇಜಿನ ಶ್ರೀಜಾ ಶೆಟ್ಟಿ, ಬಿ.ಸಿ.ರೋಡಿನ ಶೋಭಿತಾ, ದಡ್ಡಲಕಾಡು ಶಾಲೆಯ ಪ್ರಾಪ್ತಿ, ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ಕಾಲೇಜಿನ ಶ್ರೇಯಾ ಮತ್ತು ವಾಮದಪದವು ಸರ್ಕಾರಿ ಪದವಿಪೂರ್ವ ಕಾಲೇಜಿನ ರಶ್ಮಿತ್ ಅವರಿಗೆ ಈ ವರ್ಷದ ಪ್ರತಿಭಾ ಪುರಸ್ಕಾರ-ಆರ್ಥಿಕ ನೆರವು ಹಸ್ತಾಂತರಿಸಲಾಯಿತು.