ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕರ್ನಾಟಕದಲ್ಲಿ ಕೆಪಿಟಿಸಿಎಲ್‌ನ್ನು ಖಾಸಗೀಕರಣದ ವಿರುದ್ಧ ವಿದ್ಯುತ್ ನೌಕರರು ಹಾಗೂ ರೈತರು ರಬಕವಿಯಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಬಕವಿ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದ ನೌಕರರು ಯಾವುದೇ ಕಾರಣಕ್ಕು ಕೆಪಿಟಿಸಿಎಲ್‌ನ್ನು ಖಾಸಗಿಯವರಿಗೆ ಒಪ್ಪಿಸದಂತೆ ಆಗ್ರಹಿಸಿದರು. ಈ ವೇಲೆ ನೇತೃತ್ವ ವಹಿಸಿದ್ದ ಎಇಇ ವಿ.ಜಿ.ಪತ್ತಾರ ಮಾತನಾಡಿ, ಟಾಟಾ ಪವರ್ ಕಂಪನಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡುವ ಪ್ರಸ್ತಾವನೆಗಳನ್ನು ಸರ್ಕಾರ ತಕ್ಷಣದಿಂದ ಕೈ ಬಿಡಬೇಕು. ಇಲ್ಲದಿದ್ದರ ಸಿಬ್ಬಂದಿಗಳ ಹೋರಾಟ ತೀವ್ರಸ್ವರೂಪ ಪಡೆಯಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಬೆಲೆ ಏರಿಕೆ ಭೀತಿ: ವಿದ್ಯುತ್ ವಿತರಣೆ ಖಾಸಗಿಯವರ ಪಾಲಾದರೆ ಗ್ರಾಹಕರಿಗೆ ಕರೆಂಟ್ ಬಿಲ್ ಗಣನೀಯವಾಗಿ ಹೆಚ್ಚಾಗಲಿದೆ. ಅಲ್ಲದೇ, ರೈತರಿಗೆ ಮತ್ತು ಬಡವರಿಗೆ ಹೊರೆಯಾಗುತ್ತದೆ, ಪ್ರಸ್ತುತ ಸರ್ಕಾರಿ ಸಂಸ್ಥೆಗಳು ಲಕ್ಷಾಂತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ, ರಿಯಾಯಿತಿ ವಿದ್ಯುತ್ ನೀಡುತ್ತಿವೆ. ಖಾಸಗೀಕರಣದಿಂದ ಈ ಸೌಲಭ್ಯಗಳಿಗೆ ಕತ್ತರಿ ಬೀಳುವ ಆತಂಕವಿದೆ, ಆದ್ದರಿಂದ ಇದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ಅಧಿಕಾರಿ ಬಿ.ಕೆ.ಮಾಸ್ತಿ ಮಾತನಾಡಿ, ಖಾಸಗಿ ಕಂಪನಿಗಳ ಪ್ರವೇಶದಿಂದ ನೌಕರರ ಶಾಶ್ವತ ಉದ್ಯೋಗ ಹಾಗೂ ಪಿಂಚಣಿ ಸೌಲಭ್ಯಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಸರ್ಕಾರ ಈ ನಿರ್ಧಾರವನ್ನು ತಕ್ಷಣ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮತ್ತು ಕಾನೂನಿನಡಿಯಲ್ಲಿ ಹೋರಾಟ ನಡೆಸುವುದಾಗಿ ತಿಳಿಸಿದರು.ವಿದ್ಯುಚ್ಛಕ್ತಿ ಆಧುನಿಕ ಜೀವನದ ಅತ್ಯಗತ್ಯ ಮೂಲಸೌಕರ್ಯವಾಗಿದೆ. ಕರ್ನಾಟಕದಲ್ಲಿ ವಿದ್ಯುತ್ ನಿಯಂತ್ರಣ ಮತ್ತು ವಿತರಣೆಯನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಹೆಸ್ಕಾಂ, ಬೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಇತ್ಯಾದಿ ಸಂಸ್ಥೆಗಳು ನಿರ್ವಹಿಸುತ್ತಿವೆ. ಇವುಗಳನ್ನು ಖಾಸಗಿ ರಂಗಕ್ಕೆ ಒಪ್ಪಿಸುವುದರಿಂದ ಬಡವರು ಮತ್ತು ಮಧ್ಯಮ ವರ್ಗದವರ ಜೀವನ ದುಸ್ತರವಾಗುತ್ತದೆ. ಆದ್ದರಿಂದ ಇಲಾಖೆಯ ನೌಕರರು ಹಾಗೂ ಸಾರ್ವಜನಿಕರು ಒಟ್ಟಾಗಿ ಈ ಖಾಸಗೀಕರಣ ನೀತಿಯನ್ನು ವಿರೋಧಿಸಲಾಗುತ್ತಿಎ ಎಂದರು.ಪ್ರತಿಭಟನೆಯಲ್ಲಿ ದಯಾನಂದ ಮುಳ್ಳೂರ, ಶಿವಲಿಂಗಪ್ಪ ಮುಧೋಳ, ಬಸವರಾಜ ಮರಡಿ, ಶಿವಾನಂದ ಸಣ್ಣಗುಬ್ಬಿ, ಸುರೇಶ ಸವದಿ, ಬಸವರಾಜ ಸಣ್ಣಕ್ಕಿ ಸೇರಿದಂತೆ ಅನೇಕ ರೈತ ಮುಖಂಡರು, ಸಿಬ್ಬಂದಿ ಭಾಗವಹಿಸಿದ್ದರು.