ಕನ್ನಡಪ್ರಭ ವಾರ್ತೆ ಬೆಂಗಳೂರು
ಮೈಸೂರು ರಸ್ತೆಯ ಕೆಂಗೇರಿ ಎಜುಕೇಷನ್ ಟ್ರಸ್ಟ್ಗೆ ಸೇರಿದ ಜಾಗದಲ್ಲಿ ಟ್ರಸ್ಟ್ನ ಪದಾಧಿಕಾರಿಗಳು ಹಾಗೂ ಖಾಸಗಿ ಕಂಪನಿಯು, ಸಂಬಂಧಪಟ್ಟ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆದು ಉಗ್ರಾಣ ಹಾಗೂ ಪಾರ್ಕಿಂಗ್ ಕಟ್ಟಡಗಳ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಬಿಎಗೆ ಹೈಕೋರ್ಟ್ ನಿರ್ದೇಶಿಸಿದೆ.ನಿರ್ಮಾಣ ಕಾಮಗಾರಿಯನ್ನು ಆಕ್ಷೇಪಿಸಿ ಎಂ.ಶ್ರೀಕಾಂತ್ ಸೇರಿ ಮೂವರು ಸ್ಥಳೀಯರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸುನೀಲ್ ದತ್ ಯಾದವ್ ಮತ್ತು ಎಸ್. ರಾಚಯ್ಯ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ. ಅಲ್ಲದೆ, ಅರ್ಜಿಯಲ್ಲಿ ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆ, ಜಿಬಿಎ ಟ್ರಸ್ಟ್ ಅಧ್ಯಕ್ಷರು ಮತ್ತು ಟ್ರಸ್ಟಿಗಳಿಗೆ ನೋಟಿಸ್ ಜಾರಿ ಮಾಡಿದೆ. ಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್ ವಾದ ಮಂಡಿಸಿದ್ದರು.
ಅರ್ಜಿದಾರ ಆಕ್ಷೇಪವೇನು?1957ರಲ್ಲಿ ಸ್ಥಾಪನೆಯಾದ ಕೆಂಗೇರಿ ಎಜುಕೇಷನ್ ಟ್ರಸ್ಟ್ಗೆ 1965ರವರೆಗೆ ಸ್ಥಳೀಯ ನಿವಾಸಿಗಳು ಸುಮಾರು 12 ಎಕರೆ ಭೂಮಿಯನ್ನು ಶೈಕ್ಷಣಿಕ ಕಾರ್ಯ ನಡೆಸಲು ಈ ದಾನವಾಗಿ ನೀಡಿದ್ದರು. ಈ ಜಾಗದಲ್ಲಿ ಸೊಸೈಟಿ ಸ್ಥಾಪಿಸಿದ ಕನ್ನಡ ಮಾಧ್ಯಮ ಶಾಲೆಯನ್ನು ಅನುದಾನಿತ ಶಿಕ್ಷಣ ಸಂಸ್ಥೆಯಾಗಿ ಸರ್ಕಾರ ಮಾನ್ಯತೆ ನೀಡಿತ್ತು. 1980ರ ವೇಳೆ 5000 ವಿದ್ಯಾರ್ಥಿಗಳಿದ್ದರು. 1980ರಲ್ಲಿ ಸೊಸೈಟಿಯನ್ನು ಟ್ರಸ್ಟ್ ಆಗಿ ಸಂಯೋಜಿಸಲಾಯಿತು. ಸಂಸ್ಥಾಪಕರು ಸಾವನ್ನಪ್ಪಿದ ನಂತರ ಅವರ ಮಕ್ಕಳು ಟ್ರಸ್ಟ್ ಆಡಳಿತದ ಚುಕ್ಕಾಣಿ ಹಿಡಿದರು. ಆದರೆ, ಅವರು ಟ್ರಸ್ಟ್ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ನಿರ್ವಹಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಸಂಖ್ಯೆ ಸದ್ಯ 1200ಕ್ಕೆ ಇಳಿಕೆಯಾಗಿದೆ. ಪ್ರಸ್ತುತ ಶಾಲೆಯ ವಾತಾವರಣವೇ ಹಾಳಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಸದ್ಯ ಟ್ರಸ್ಟಿಗಳು ವೈಯಕ್ತಿಕ ಲಾಭಕ್ಕಾಗಿ ಟ್ರಸ್ಟ್ ಜಾಗದಲ್ಲಿ ವ್ಯಾಪಾರಿಗಳಿಗಾಗಿ ಉಗ್ರಾಣ, ಆಟದ ಮೈದಾನದಲ್ಲಿ ಸಾರಿಗೆ ಕಂಪನಿಯಿಂದ ಭಾರೀ ವಾಹನಗಳ ಪಾರ್ಕಿಂಗ್ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಈ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದಾರೆ. ಸಂಸ್ಥೆಯ ದೊಡ್ಡಮೊತ್ತದ ಹಣವನ್ನು ದುರ್ಬಳಕೆ ಮಾಡಲಾಗುತ್ತಿದೆ. ಆದ್ದರಿಂದ ಟ್ರಸ್ಟ್ ಜಾಗ ಸಂರಕ್ಷಣೆ ಮಾಡಲು ಹಾಗೂ ನಿರ್ಮಾಣ ಕಾಮಗಾರಿಗನ್ನು ಸ್ಥಗಿತಗೊಳಿಸಬೇಕು ಹಾಗೂ ಈ ಜಾಗದಲ್ಲಿ ಶೈಕ್ಷಣಿಕೇತರ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಲು ಸರ್ಕಾರ ಹಾಗೂ ಜಿಬಿಎಗೆ ನಿರ್ದೇಶಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ.
