ಜೂ.14ರ ಮದ್ದೂರು ತಾಲೂಕು ವಕೀಲರ ಸಂಘದ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ

| Published : Jun 13 2025, 04:51 AM IST

ಜೂ.14ರ ಮದ್ದೂರು ತಾಲೂಕು ವಕೀಲರ ಸಂಘದ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳಾ ಮೀಸಲಾತಿಗೆ ಆದ್ಯತೆ ನೀಡದಿರುವುದು ಮತ್ತು ಅರ್ಹ ಸದಸ್ಯರನ್ನು ಮತದಾರ ಪಟ್ಟಿಯಿಂದ ಕೈ ಬಿಟ್ಟಿರುವ ಹಿನ್ನೆಲೆಯಲ್ಲಿ ಜೂ.14ರಂದು ನಡೆಯಬೇಕಿದ್ದ ಮದ್ದೂರು ತಾಲೂಕು ವಕೀಲರ ಸಂಘದ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಮಹಿಳಾ ಮೀಸಲಾತಿಗೆ ಆದ್ಯತೆ ನೀಡದಿರುವುದು ಮತ್ತು ಅರ್ಹ ಸದಸ್ಯರನ್ನು ಮತದಾರ ಪಟ್ಟಿಯಿಂದ ಕೈ ಬಿಟ್ಟಿರುವ ಹಿನ್ನೆಲೆಯಲ್ಲಿ ಜೂ.14ರಂದು ನಡೆಯಬೇಕಿದ್ದ ವಕೀಲರ ಸಂಘದ ಚುನಾವಣೆಗೆ ಬುಧವಾರ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಮದ್ದೂರು ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಮಹಿಳಾ ಮೀಸಲಾತಿ ನಿಗದಿ ಮಾಡದಿರುವುದು, ಅರ್ಹ ಸದಸ್ಯರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟಿರುವುದನ್ನು ಪ್ರಶ್ನಿಸಿ ಸಂಘದ ಸದಸ್ಯರಾದ ಎಸ್.ಎಂ.ಶೋಭಾ ಮತ್ತು ಮಾಜಿ ಅಧ್ಯಕ್ಷ ಜಿ.ಎನ್.ಸತ್ಯ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆಗೆ ಅಂಗೀಕರಿಸಿದ ಹೈಕೋರ್ಟ್ ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಸುನೀಲ್ ದತ್ ಯಾದವ್ ಚುನಾವಣೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದ್ದಾರೆ. ರಿಟ್ ಅರ್ಜಿಗೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯನ್ನು ಮುಂದಿನ ಜೂನ್ 19ರಂದು ನಿಗದಿ ಪಡಿಸಿದ್ದಾರೆ.

ವಕೀಲರ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯಕಾರಿ ಮಂಡಳಿ ಚುನಾವಣೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ನಿರ್ದಿಷ್ಟ ಮೀಸಲಾತಿ ಕಲ್ಪಿಸಿಲ್ಲ. ಮತದಾನಕ್ಕೆ ಅರ್ಹ ಸದಸ್ಯರನ್ನು ಮತದಾರ ಪಟ್ಟಿಯಿಂದ ಕೈ ಬಿಟ್ಟಿರುವುದು ಹಾಗೂ ಬೇರೆ ಜಿಲ್ಲೆ ಮತ್ತು ತಾಲೂಕಿನ ವಕೀಲರ ಸಂಘದಲ್ಲಿ ಸದಸ್ಯತ್ವ ಪಡೆದಿರುವ ವಕೀಲರುಗಳಿಗೆ ಸ್ಥಳೀಯ ಸಂಘದಲ್ಲಿ ಸದಸ್ಯತ್ವ ನೀಡಿರುವ ಎಲ್ಲಾ ಅಂಶಗಳನ್ನು ಪ್ರಶ್ನಿಸಿ ವಕೀಲರಾದ ಎಸ್.ಎಂ. ಶೋಭಾ ಮತ್ತು ಜಿ.ಎನ್.ಸತ್ಯ ತಮ್ಮ ರಿಟ್ ಅರ್ಜಿಯಲ್ಲಿ ಆಕ್ಷೇಪಣೆ ಸಲ್ಲಿಸಿದ್ದರು.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ವಕೀಲರ ಸಂಘದ ಚುನಾವಣೆಗೆ ತಡೆಯಾಜ್ಞೆ ನೀಡಿದ್ದಾರೆ. ತಾಲೂಕು ವಕೀಲ ಸಂಘದ ಚುನಾವಣೆಯಲ್ಲಿ 161 ಮಂದಿ ಅರ್ಹ ಮತದಾರಿದ್ದಾರೆ. ಜೂನ್ 14ರಂದು ನಿಗದಿ ಮಾಡಿದ್ದ ಸಂಘದ ಪದಾಧಿಕಾರಿಗಳ ಚುನಾವಣೆಗೆ ಹಲವು ವಕೀಲರು ನಾಮಪತ್ರ ಸಲ್ಲಿಸಿದ್ದರು. ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡು ಚುನಾವಣಾಧಿಕಾರಿ ಎಲ್.ವಿಜಯಕುಮಾರ್ ಜೂನ್ 14ರಂದು ಚುನಾವಣೆ ನಿಗದಿ ಮಾಡಿದ್ದರು. ಹೀಗಾಗಿ ಹೈಕೋರ್ಟ್ ರಿಟ್ ಅರ್ಜಿ ವಿಚಾರಣೆ ಪೂರ್ಣಗೊಳ್ಳುವವರೆಗೆ ಮದ್ದೂರು ವಕೀಲರ ಸಂಘದ ಚುನಾವಣೆಗೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ.