ನೂರು ಕುರಿ, ಮೂವರ ಕುರಿಗಾರರ ರಕ್ಷಣೆ

| Published : Jun 13 2025, 04:50 AM IST

ಸಾರಾಂಶ

ಬ್ಯಾಹಟ್ಟಿ- ಕುಸುಗಲ್ ರಸ್ತೆಯಲ್ಲಿನ ದೊಡ್ಡಹಳ್ಳ ಮತ್ತು ಲಂಡ್ಯಾನ ಹಳ್ಳದಲ್ಲಿ ಬ್ಯಾಹಟ್ಟಿ ಗ್ರಾಮದ ಕಲ್ಲಪ್ಪ ಬೇವೂರ, ಹಜರೇಸಾಬ ನೂಲ್ವಿ ಮತ್ತು ರಾಯಪ್ಪ ಕಬ್ಬೇರ ಬುಧವಾರ ಎಂದಿನಂತೆ ಹಳ್ಳದ ಪಕ್ಕದಲ್ಲಿ ಶೇಡ್‌ನಲ್ಲಿ ತಮ್ಮ ಕುರಿಗಳೊಂದಿಗೆ ತಂಗಿದ್ದರು. ನಿರಂತರವಾಗಿ ಸುರಿದ ಮಳೆಯಿಂದಾಗಿ ಏಕಾಏಕಿ ಅಪಾರ ಪ್ರಮಾಣದ ನೀರು ಹಳ್ಳಕ್ಕೆ ಬಂದಿದೆ. ಪರಿಣಾಮ ಕುರಿಗಾಹಿಗಳಿದ್ದ ಸ್ಥಳ ನಡುಗಡ್ಡೆಯಂತಾಗಿತ್ತು.

ಹುಬ್ಬಳ್ಳಿ: ಗುಡುಗು ಸಹಿತ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಹೊರವಲಯದ ಹಳ್ಳದಲ್ಲಿ ಮೂವರು ಕುರಿಗಾಹಿಗಳು ಮತ್ತು 100 ಕುರಿಗಳು ಸಿಲುಕಿದ್ದವು. ತಕ್ಷಣ ಕಾರ್ಯಾಚರಣೆಗಿಳಿದ ತಾಲೂಕು ಆಡಳಿತ ಕುರಿಗಳು ಹಾಗೂ ಕುರಿಗಾಹಿಗಳನ್ನು ರಕ್ಷಣೆ ಮಾಡಿದ್ದು, ಈ ವೇಳೆ ಎರಡು ಕುರಿಗಳು ಹಳ್ಳದಲ್ಲಿ ಮೃತಪಟ್ಟಿರ ಬಗ್ಗೆ ಪ್ರಾಥಮಿಕ ವರದಿಯಾಗಿದೆ.

ಬ್ಯಾಹಟ್ಟಿ- ಕುಸುಗಲ್ ರಸ್ತೆಯಲ್ಲಿನ ದೊಡ್ಡಹಳ್ಳ ಮತ್ತು ಲಂಡ್ಯಾನ ಹಳ್ಳದಲ್ಲಿ ಬ್ಯಾಹಟ್ಟಿ ಗ್ರಾಮದ ಕಲ್ಲಪ್ಪ ಬೇವೂರ, ಹಜರೇಸಾಬ ನೂಲ್ವಿ ಮತ್ತು ರಾಯಪ್ಪ ಕಬ್ಬೇರ ಬುಧವಾರ ಎಂದಿನಂತೆ ಹಳ್ಳದ ಪಕ್ಕದಲ್ಲಿ ಶೇಡ್‌ನಲ್ಲಿ ತಮ್ಮ ಕುರಿಗಳೊಂದಿಗೆ ತಂಗಿದ್ದರು. ನಿರಂತರವಾಗಿ ಸುರಿದ ಮಳೆಯಿಂದಾಗಿ ಏಕಾಏಕಿ ಅಪಾರ ಪ್ರಮಾಣದ ನೀರು ಹಳ್ಳಕ್ಕೆ ಬಂದಿದೆ. ಪರಿಣಾಮ ಕುರಿಗಾಹಿಗಳಿದ್ದ ಸ್ಥಳ ನಡುಗಡ್ಡೆಯಂತಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾರವಾಡ ಡಿವೈಎಸ್ಪಿ ವಿನೋದ್ ಮುಕ್ತೇದಾರ, ತಹಸೀಲ್ದಾರ್ ಜೆ.ಬಿ. ಮಜ್ಜಗಿ ಸೇರಿದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. 3-4 ಗಂಟೆಗಳ ಕಾರ್ಯಾಚರಣೆ ಬಳಿಕ ಕುರಿಗಳ ಸಮೇತವಾಗಿ ಮೂವರನ್ನು ಹೊರಗಡೆ ಕರೆತರಲಾಗಿದೆ.

ಮಳೆ ನೀರಲ್ಲಿ ಕೊಚ್ಚಿಹೋದ ಬೈಕ್‌ ಸವಾರ

ಹುಬ್ಬಳ್ಳಿ: ಇಲ್ಲಿನ ನೇಕಾರ ನಗರದಲ್ಲಿ ಮಳೆಯಲ್ಲೇ ತೆರಳುತ್ತಿದ್ದ ಬೈಕ್‌ ಸವಾರ ಚರಂಡಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಹುಸೇನ್ ಕಳಸ (55) ಚರಂಡಿ‌ಯಲ್ಲಿ ಕೊಚ್ಚಿಕೊಂಡು ಹೋದವ.ಹುಸೇನ ಮತ್ತು ಇನ್ನೊಬ್ಬ ಬೈಕ್‌ನಲ್ಲಿ ನೇಕಾರನಗರದ ಸೇತುವೆ ಬಳಿ ತೆರಳುತ್ತಿದ್ದರು. ಈ ವೇಳೆ ಮಳೆ ನೀರು ಹರಿಯುತ್ತಿತ್ತು. ಇದರಲ್ಲೆ ಕೆಲವರು ದಾಟಿ ಮುಂದೆ ಸಾಗಿದ್ದಾರೆ. ಇದನ್ನು ನೋಡಿದ ಹುಸೇನ್‌ ಸಹ ಬೈಕ್‌ ದಾಟಿಸಲು ಪ್ರಯತ್ನಿಸಿದ್ದು, ಈ ವೇಳೆ ಆಯತಪ್ಪಿ ಬಿದ್ದು, ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಹಿಂಬದಿ ಸವಾರ ಹೊರಗಡೆ ಬಿದ್ದಿದ್ದರಿಂದ ಬಚಾವ್‌ ಆಗಿದ್ದಾನೆ.

ಕೊಚ್ಚಿಕೊಂಡು ಹೋದ ಹುಸೇನ್‌ಗಾಗಿ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಈವರೆಗೂ ಪತ್ತೆಯಾಗಿಲ್ಲ. ತಹಸೀಲ್ದಾರ್‌ ಸ್ಥಳಕ್ಕೆ ಭೇಟಿ ಕಾರ್ಯಾಚರಣೆ ಪರಿಶೀಲಿಸಿದರು.