ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ನಮ್ಮ ಶಾಲೆ ಮತ್ತು ನಮ್ಮೂರ ಶಾಲೆ ಎಂಬ ಪರಿಕಲ್ಪನೆಗಳ ಮೂಲಕ ಪ್ರತೀ ವರ್ಷವೂ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ವ್ಯಾಸಂಗಕ್ಕೆ ಅಳಿಲು ಸೇವೆಯನ್ನು ಸಲ್ಲಿಸುತ್ತಿರುವ ವಿಶ್ವಮಾನವ ಪ್ರಶಸ್ತಿ ಪುರಸ್ಕೃತರಾದ ಅಕ್ಷರಸಂತ ಜೆ.ಬಿ. ತಮ್ಮಣ್ಣ ಗೌಡರಿಗೆ ಶಿಕ್ಷಣ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಅನ್ನು ನೀಡಿ ಗೌರವಿಸಲಾಗಿದೆ.

ತಮಿಳುನಾಡಿನ ಏಷ್ಯಾ ಇಂಟರ್‌ನ್ಯಾಷನಲ್ ಕಲ್ಚರ್ ರೀಸರ್ಚ್‌ ಅಕಾಡೆಮಿ ಹೊಸೂರು ಇವರು ಟಿ.ಜಿ.ಐ. ಗ್ರ್ಯಾಂಡ್ ಫಾರ್ಚೂನಾ ಹಾಲ್‌ನಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೆ. ಬಿ. ತಮ್ಮಣಗೌಡರಿಗೆ ಗೌರವ ಡಾಕ್ಟರೇಟ್ ಅನ್ನು ನೀಡಿ ಗೌರವಿಸಿದೆ. ಅಕಾಡೆಮಿಯು ಜೆ. ಬಿ. ಟಿ. ಅವರ ಅನನ್ಯ ಕಾರ್ಯವನ್ನು ಗುರುತಿಸಿ, ಶ್ಲಾಘಿಸಿದೆ. ಸಂಸ್ಥೆಯ ಗೌರವಾಧ್ಯಕ್ಷರಾದ ಪ್ರಣವ ಸ್ವರೂಪ ಮುನಿ ನಿರಂಜನ ಡಾ. ಕೃಷ್ಣಮೂರ್ತಿ ಮಹಾಸ್ವಾಮೀಜಿಗಳು, ಗಿನ್ನಿಸ್ ಬುಕ್‌ನಲ್ಲಿ ನಾಲ್ಕು ಬಾರಿ ವಿಶ್ವ ದಾಖಲೆ ನಿರ್ಮಿಸಿದ ಡಾ. ಕರಾಟೆ ಎ.ಪಿ. ಶ್ರೀನಾಥ್, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಎಸ್.ಟಿ. ಸೊಂಬೇಗೌಡ, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಡಾ. ಸಂಗನಬಸಪ್ಪ ಬಿರಾದಾರ್‌, ಕರ್ನಾಟಕದ ಉಚ್ಚ ನ್ಯಾಯಾಲಯದ ಡಿಎಂಸಿಎಸ್ ನಿರ್ದೇಶಕರಾದ ಮನೋಹರ, ಸಿಲ್ವರ್‌ ಸ್ಕ್ರೀನ್ ವರ್ಲ್ಡ್ ರೆಕಾರ್ಡ್‌ ತರಬೇತಿಯ ಸಹ ನಿರ್ದೇಶಕರಾದ ಡಾ. ಅರುಣ್ ಚಿನ್ನದುರೈ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸುಶೀಲಮ್ಮ ಅವರು ಉಪಸ್ಥಿತರಿದ್ದು, ಗೌರವ ಡಾಕ್ಟರೇಟ್ ಪ್ರದಾನ ಸಮಾರಂಭವನ್ನು ನಡೆಸಿಕೊಟ್ಟರು. ಹಿರಿಯ ವಿದ್ಯಾರ್ಥಿ ವೃಂದ, ಮಿತ್ರ ವೃಂದ, ಅಭಿಮಾನಿ ವೃಂದದವರು ಹೃದಯ ತುಂಬಿ ಅಭಿನಂದಿಸಿರುತ್ತಾರೆ.