ಅಡ್ಯನಡ್ಕ: ಕೆಬಿಎಲ್‌ ಶಾಖೆಯಿಂದ ಭಾರಿ ಪ್ರಮಾಣದ ನಗ-ನಗದು ಕಳವು

| Published : Feb 09 2024, 01:46 AM IST / Updated: Feb 09 2024, 04:40 PM IST

ಸಾರಾಂಶ

ಕಳ್ಳರು ಬ್ಯಾಂಕಿನ ಹಿಂಬದಿಯ ಕಿಟಕಿ ಮುರಿದು ಒಳನುಗ್ಗಿದ್ದು, ಗ್ಯಾಸ್‌ ಕಟರ್‌ ಬಳಸಿ ಸೇಫ್‌ ಲಾಕರ್‌ನ ಬಾಗಿಲು ತುಂಡರಿಸಿ ಕೃತ್ಯವೆಸಗಿದ್ದಾರೆ. ಕೃತ್ಯ ನಡೆಸುವ ವೇಳೆ ಬ್ಯಾಂಕಿನ ಸೆಕ್ಯೂರಿಟಿ ಅಲರಾಂ ಸೈರನ್‌ ಮಾಡಿಲ್ಲ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಖಾಸಗಿ ಬ್ಯಾಂಕ್‌ ಕಟ್ಟಡದ ಕಿಟಕಿ ಮುರಿದು ಒಳ ನುಸುಳಿದ ಕಳ್ಳರು ಭಾರಿ ಪ್ರಮಾಣದ ಹಣ-ಒಡವೆ ದೋಚಿದ ಘಟನೆ ವಿಟ್ಲ ಸಮೀಪದ ಅಡ್ಯನಡ್ಕದಲ್ಲಿ ಬುಧವಾರ ರಾತ್ರಿ ನಡೆದಿದೆ. 

ಸುಮಾರು 16 ಲಕ್ಷ ರು. ನಗದು ಹಾಗೂ ನಗ ಕಳವಾದ ಬಗ್ಗೆ ದೂರು ದಾಖಲಾಗಿದೆ. ಕರ್ಣಾಟಕ ಬ್ಯಾಂಕ್ ಅಡ್ಯನಡ್ಕ ಶಾಖೆಯಲ್ಲಿ ಈ ಕಳ್ಳತನ ದುಷ್ಕೃತ್ಯ ನಡೆದಿದ್ದು, ಸಾರ್ವತ್ರಿಕ ಆತಂಕ ಉಂಟು ಮಾಡಿದೆ.

ಸುಮಾರು 20 ವರ್ಷಗಳ ಹಳೆಯ ಕಟ್ಟಡದಲ್ಲಿ ಈ ಬ್ಯಾಂಕ್ ಇದ್ದು, ಬ್ಯಾಂಕಿನ ಸುತ್ತಮುತ್ತಲೂ ಕಾಡು-ಪೊದೆಗಂಟಿಗಳು ಬೆಳೆದು ಕಾಡಿನಂತಾಗಿದೆ. ಈ ಜಾಗದ ಮೂಲಕ ಕಳ್ಳರು ಕನ್ನ ಹಾಕಿದ್ದಾರೆ. 

ಯಾವುದೇ ಮುಂಜಾಗ್ರತೆ ಇಲ್ಲದ ಕಟ್ಟಡದಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದ್ದು, ಅಜಾಗರೂಕತೆಯೇ ಕಳ್ಳತನಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಅಡ್ಯನಡ್ಕ ಶಾಖೆಯ ಹಿಂಭಾಗದಲ್ಲಿ ಕಾಡಿದ್ದು, ಈ ದಾರಿಯನ್ನು ಬಳಸಿದ ತಂಡ ಕಿಟಕಿಯ ೮ ಸರಳುಗಳನ್ನು ಕಬ್ಬಿಣ ತುಂಡರಿಸುವ ಗರಗಸ ಬಳಸಿ ತುಂಡರಿಸಲಾಗಿದೆ. 

ಬಳಿಕ ಇಬ್ಬರು ಒಳಗೆ ಹೋಗಿರುವ ಬಗ್ಗೆ ಸುಳಿವು ಪತ್ತೆಯಾಗಿದ್ದು, ಸೇಫ್ ಲಾಕರ್ ಬಾಗಿಲನ್ನು ಗ್ಯಾಸ್ ಕಟ್ಟರ್‌ ಬಳಸಿ ತುಂಡರಿಸಿ ನಗದು ದೋಚಿದ್ದಾರೆ. ಗ್ರಾಹಕರ ವೈಯಕ್ತಿಕ ಲಾಕರ್ ಪೈಕಿ ಕೆಲವನ್ನು ತೆರೆಯುವಲ್ಲಿ ತಂಡ ಯಶಸ್ವಿಯಾಗಿದೆ.

ಅಡ್ಯನಡ್ಕ ಪೇಟೆಯಲ್ಲಿ ಸುಮಾರು ರಾತ್ರಿ ೧೧ ಗಂಟೆ ವರೆಗೂ ಜನ ಸಂಚಾರ ಇದ್ದು, ಆ ಸಮಯದ ಬಳಿಕ ಕಳ್ಳರ ತಂಡ ಆಗಮಿಸಿರಬಹುದೆಂದು ಶಂಕಿಸಲಾಗಿದೆ. ಗುರುವಾರ ಬೆಳಗ್ಗೆ ೯.೩೦ ರ ಸುಮಾರಿಗೆ ಬ್ಯಾಂಕ್ ಸಿಬ್ಬಂದಿ ಬ್ಯಾಂಕ್‌ಗೆ ಬಂದ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ತಕ್ಷಣ ವಿಟ್ಲ ಠಾಣೆಗೆ ಹಾಗೂ ಬ್ಯಾಂಕ್ ಹಿರಿಯ ಅಧಿಕಾರಿಗಳಿಗೆ ತಿಳಿಸುವ ಕಾರ್ಯ ಮಾಡಿದ್ದಾರೆ. ಬೆಳಗ್ಗೆ ಸುಮಾರು ೧೦.೩೦ರ ಸಮಯಕ್ಕೆ ಆಗಮಿಸಿದ ಪೊಲೀಸರು ಬ್ಯಾಂಕ್ ಆವರಣವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಸುಮಾರು ೧೨.೩೦ ಗಂಟೆಗೆ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿದೆ.

ಬ್ಯಾಂಕ್ ಶಾಖಾ ವ್ಯವಸ್ಥಾಪಕರನ್ನು ಹೊರತು ಪಡಿಸಿ ಉಳಿದವರನ್ನು ಹೊರಗಡೆ ನಿಲ್ಲಿಸಿ ಅಗತ್ಯ ವಿಚಾರಣೆ ನಡೆಸಿದ್ದಾರೆ. ಅಂದಾಜು ಪ್ರಕಾರ ಲಾಕರ್ ಒಳಗಿದ್ದ ೧೬ ಲಕ್ಷ ರು. ನಗದು ಹಾಗೂ ಕೆಲವು ವೈಯಕ್ತಿಕ ಲಾಕರ್‌ಗಳನ್ನು ಕಳ್ಳರು ತೆರೆದು ಅದರಲ್ಲಿದ್ದ ಚಿನ್ನಾಭರಣವನ್ನು ದೋಚಿದ್ದಾರೆ. 

ಈ ಬಗ್ಗೆ ಗ್ರಾಹಕರ ವೈಯಕ್ತಿಕ ದೂರಿನ ಬಗ್ಗೆ ಲೆಕ್ಕ ಸಿಗಬೇಕಿದೆ ಎನ್ನಲಾಗಿದೆ. ಚಿನ್ನಾಭರಣ ಅಡವು ಸಾಲ ನೀಡಿದ ಚಿನ್ನ ಭದ್ರವಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋಟ್ಯಂತರ ಮೌಲ್ಯದ ಚಿನ್ನಾಭರಣಗಳು ವೈಯಕ್ತಿಕ ಲಾಕರ್‌ಗಳಲ್ಲಿ ಇತ್ತೆನ್ನಲಾಗಿದ್ದು, ಹಲವು ಮಂದಿ ಗ್ರಾಹಕರು ಬ್ಯಾಂಕ್ ದರೋಡೆ ವಿಚಾರ ಹೊರಬರುತ್ತಿದ್ದಂತೆ ಬ್ಯಾಂಕ್ ಮುಂದೆ ಬರಲಾರಂಭಿಸಿದ್ದಾರೆ. 

ಸ್ಥಳಕ್ಕೆ ವಿಟ್ಲ ಠಾಣೆಯ ಅಧಿಕಾರಿಗಳು ಆಗಮಿಸಿದ್ದು, ಜೊತೆಗೆ ಪೊಲೀಸ್ ಅಧೀಕ್ಷಕ ರಿಷ್ಯಂತ್ ಆಗಮಿಸಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಬ್ಯಾಂಕ್‌ನ ಭದ್ರತೆಯಲ್ಲಿ ಲೋಪ ಕಂಡು ಬಂದಿದೆ. ವಿಶೇಷ ತಂಡಗಳನ್ನು ರಚಿಸಿ ಕಳ್ಳರ ಪತ್ತೆಮಾಡಲಾಗುವುದು ಎಂದು ತಿಳಿಸಿದ್ದಾರೆ.

ಅಲರಾಂ ಸೈಲೆಂಟ್..!‌
ಕಳ್ಳರು ಬ್ಯಾಂಕಿನ ಹಿಂಬದಿಯ ಕಿಟಕಿ ಮುರಿದು ಒಳನುಗ್ಗಿದ್ದು, ಗ್ಯಾಸ್‌ ಕಟರ್‌ ಬಳಸಿ ಸೇಫ್‌ ಲಾಕರ್‌ನ ಬಾಗಿಲು ತುಂಡರಿಸಿ ಕೃತ್ಯವೆಸಗಿದ್ದಾರೆ. ಕೃತ್ಯ ನಡೆಸುವ ವೇಳೆ ಬ್ಯಾಂಕಿನ ಸೆಕ್ಯೂರಿಟಿ ಅಲರಾಂ ಸೈರನ್‌ ಮಾಡಿಲ್ಲ.