ಕನ್ನಡಪ್ರಭ ವಾರ್ತೆ ಸಂಕೇಶ್ವರ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಸಾಧನೆಗೆ ಸೀಮಿತವಾಗದೆ, ಪರಿಸರ ಸಂರಕ್ಷಣೆ, ದೈಹಿಕ ಆರೋಗ್ಯ, ಸಾಮಾಜಿಕ ಜವಾಬ್ದಾರಿ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನೂ ಅಳವಡಿಸಿಕೊಳ್ಳಬೇಕು ಎಂದು ಪರಿಸರವಾದಿ ಡಾ.ಶಿವಾಜಿ ಕಾಗಣೀಕರ ತಿಳಿಸಿದರು.ಪಟ್ಟಣದ ಎಸ್ಡಿವಿಎಸ್ ಸಂಘದ ಎಸ್.ಎಸ್.ಕಲಾ ಮತ್ತು ಟಿ.ಪಿ.ವಿಜ್ಞಾನ ಮಹಾವಿದ್ಯಾಲಯದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಮನುಷ್ಯನ ಅಸ್ತಿತ್ವವೇ ಪ್ರಕೃತಿಯ ಮೇಲೆ ಅವಲಂಬಿತವಾಗಿದೆ. ಆದರೆ, ಪ್ರಕೃತಿ ಮಾನವನ ಅವಲಂಬನೆಯಲ್ಲಿಲ್ಲ ಎಂಬ ಸತ್ಯವನ್ನು ಪ್ರತಿಯೊಬ್ಬರೂ ಅರಿಯಬೇಕಿದೆ. ನಾಡು-ನುಡಿ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡ ಯುವಜನರೇ ದೇಶದ ಭವಿಷ್ಯವನ್ನು ಉಜ್ವಲಗೊಳಿಸಲಿದ್ದಾರೆ ಎಂದು ತಿಳಿಸಿದರು.ಕಾಲೇಜಿನ ಸ್ಥಾನಿಕ ನಿಯಂತ್ರಣ ಸಮಿತಿ ಅಧ್ಯಕ್ಷ ಆರ್.ಬಿ.ಪಾಟೀಲ ಮಾತನಾಡಿ, ಸಾಲುಮರದ ತಿಮ್ಮಕ್ಕ, ಮೇಧಾ ಪಾಟ್ಕರ್ ಹಾಗೂ ಡಾ. ಶಿವಾಜಿ ಕಾಗಣೀಕರ ಅವರಂತಹ ಪರಿಸರ ಹೋರಾಟಗಾರರ ಆದರ್ಶಗಳು ಯುವಜನತೆಗೆ ಸ್ಫೂರ್ತಿಯಾಗಬೇಕು ಎಂದರು. ಪರಿಸರದ ಮೇಲಿನ ಬದ್ಧತೆ, ಸರಳ ಜೀವನಶೈಲಿಯಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದರು.ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಪ್ರೊ.ದೇಮಣ್ಣ ಸೊಗಲದ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಕೆ.ಸಿ.ಶಿರಕೋಳಿ, ಕಾರ್ಯದರ್ಶಿ ಜಿ.ಸಿ.ಕೋಟಗಿ, ಆಡಳಿತಾಧಿಕಾರಿ ಡಾ.ಬಿ.ಎ.ಪೂಜಾರ, ಡಾ.ಪಿ.ಎಸ್.ಮುನ್ನೋಳಿ, ಪ್ರಾಂಶುಪಾಲ ಡಾ.ಡಿ.ಎಸ್.ಕಾಂಬಳೆ, ಡಾ.ಎಸ್.ಐ.ಮಡಿವಾಳಪ್ಪಗೋಳ ಹಾಗೂ ಐಕ್ಯೂಎಸಿ ಸಂಯೋಜಕ ಪ್ರೊ.ಎಂ.ಆರ್.ಪಾಟೀಲ ಉಪಸ್ಥಿತರಿದ್ದರು. ಬಿಎಸ್ಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಡಾ.ಗುರುದೇವ ರಜಪೂತ ಸ್ವಾಗತಿಸಿದರು. ಪ್ರೊ.ಕುಮಾರ ಮರಾಠೆ ವಂದಿಸಿದರು. ಡಾ.ಎಂ.ವೈ.ಹಿರೇಮಠ ಹಾಗೂ ಲಕ್ಷ್ಮೀ ಗಡಕರಿ ಕಾರ್ಯಕ್ರಮ ನಿರೂಪಿಸಿದರು.
--------