ಕನ್ನಡಪ್ರಭ ವಾರ್ತೆ ಅಥಣಿ

ಇಳಕಲ್ಲ ಮಠದ ಡಾ.ಮಹಾಂತ ಸ್ವಾಮೀಜಿ 1975ರಲ್ಲಿ ಪ್ರಾರಂಭಿಸಿದ ವ್ಯಸನಮುಕ್ತ ಆಂದೋಲನವು ಸಮಾಜ ಪರಿವರ್ತನೆಗೆ ಸಹಕಾರಿಯಾಗಿದ್ದು, ಜನರ ದುಶ್ಚಟಗಳನ್ನು ಬಿಡಿಸಲು ಜೋಳಿಗೆ ಹಿಡಿದು ಭಿಕ್ಷೆ ಬೇಡುವ ಮೂಲಕ ಸಮಾಜದಲ್ಲಿ ದೊಡ್ಡ ಪರಿವರ್ತನೆ ತಂದು ಅಸಾಮಾನ್ಯ ಕ್ರಾಂತಿ ಮಾಡಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹೇಳಿದರು.

ತಾಲೂಕಿನ ಮಲಾಬಾದ ವಿಮೋಚನಾ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಇಳಕಲ್ಲದ ಲಿಂ.ಮಹಾಂತ ಶಿವಯೋಗಿಗಳ ಜಯಂತಿ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಮತ್ತು ಮಹಾಂತ ಮಂದಾರ ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಇದರಿಂದ ಸಮಾಜದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗುವುದಲ್ಲದೆ, ಅನೇಕ ಕುಟುಂಬಗಳಲ್ಲಿ ನೆಮ್ಮದಿ ಹಾಳಾಗುತ್ತಿದೆ. ಜನರು ತಮ್ಮ ಆರೋಗ್ಯದ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ದುಶ್ಚಟಗಳಿಂದ ದೂರವಿರಬೇಕು ಎಂದರು. ಗಡಿಭಾಗದ ಪ್ರದೇಶದಲ್ಲಿ ವಿಮೋಚನಾ ಸಂಸ್ಥೆಯ ಮೂಲಕ ಹಿರಿಯ ವಕೀಲ ಬಿ.ಎಲ್.ಪಾಟೀಲ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನಾಂಗದ ಮಕ್ಕಳಿಗೆ, ಬಡವರ ಮತ್ತು ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಮೋಚನಾ ಶಿಕ್ಷಣ ಸಂಸ್ಥೆ ಆರಂಭಿಸುವ ಮೂಲಕ ಬಡವರ ಬದುಕಿಗೆ ಆಸರೆಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಶೇಗುಣಿಸಿ ವಿರಕ್ತ ಮಠದ ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ಅನ್ನ, ಅರಿವು, ಆಶ್ರಯ, ಅಕ್ಷರ ನೀಡುವುದರಿಂದ ಉತ್ತಮ ದೇಶ ಕಟ್ಟಬಹುದು. ಇಂತಹ ಸೇವೆಯನ್ನು ಇಳಕಲ್ಲದ ಡಾ.ಮಹಾಂತ ಶಿವಯೋಗಿಗಳು ನಾಡಿನುದ್ದಕ್ಕೂ ಬಸವತತ್ವ ಬೋಧಿಸಿದರು ಎಂದು ಸ್ಮರಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಅರವಿಂದ ದೇಶಪಾಂಡೆ, ಸಾಂಸ್ಕೃತಿಕ ನಾಯಕ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ.ಎಲ್.ಪಾಟೀಲ ಮಾತನಾಡಿ, ಇಳಕಲ್ಲದ ಡಾ.ಮಹಾಂತ ಶಿವಯೋಗಿಗಳು, ಗದುಗಿನ ಡಾ.ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿ ನನಗೆ ಪ್ರೇರಕ ಶಕ್ತಿ. ಪುರಾಣ, ಪ್ರವಚನಕ್ಕಿಂತ ಜನರ ದುಶ್ಚಟ ಬಿಡಿಸಿ ಸರಿದಾರಿಗೆ ತರುವಲ್ಲಿ ಶ್ರಮಿಸಿದ ಪೂಜ್ಯರು ಬಡಜನರ ಉದ್ದಾರಕ್ಕೆ ನನಗೆ ದಾರಿ ತೋರಿದ್ದಾರೆ. ಈ ಸಂಸ್ಥೆ ಹೆಮ್ಮೆರವಾಗಿ ಬೆಳೆಯುತ್ತಿರುವುದು ನಮ್ಮೆಲ್ಲರಿಗೆ ಸಂತಸ. ಇಳಕಲ್ಲದ ಮಹಾಂತ ಶಿವಯೋಗಿಗಳ ಜಯಂತಿಯನ್ನು ಸರ್ಕಾರ ವ್ಯಸನ ಮುಕ್ತ ದಿನಾಚರಣೆ ಎಂದು ಆಚರಿಸುತ್ತಿದೆ. ಈ ದಿನ ಆಚರಣೆಯ ಜೊತೆಗೆ ವಿಮೋಚನಾ ಸಂಸ್ಥೆಯಿಂದ ಸಮಾಜಮುಖಿ ಸೇವೆ ಸಲ್ಲಿಸುವವರಿಗೆ ಮಹಾಂತ ಮಂದಾರ ಪ್ರಶಸ್ತಿ ನೀಡಿ ಗೌರವಿಸುತ್ತಿದೆ ಎಂದರು.ಈ ವೇಳೆ ಪಟ್ಟಣದಲ್ಲಿ ಕೃಪಾ ಮತ್ತು ಆರೋಗ್ಯ ಸೇವಾ ಸಂಸ್ಥೆಯ ಮೂಲಕ ಅನಾಥ ಮತ್ತು ಎಚ್ಐವಿ ಪೀಡಿದ ಮಕ್ಕಳ ಸಂರಕ್ಷಣೆ ಮಾಡುತ್ತಿರುವ ನಿಜಪ್ಪ ಹಿರೇಮನಿ ದಂಪತಿ, ಚಮಕೇರಿಯ ಸುಕನ್ಯಾ ಆಶ್ರಮದ ಮಹದೇವ ಬಿರಾದಾರ ದಂಪತಿಗೆ, ಮೈಸೂರಿನ ಶ್ರೀಧರ ಚಕ್ರವರ್ತಿ, ಶರದ ಸವದಿ ಅವರಿಗೆ ಮಹಾಂತ ಮಂದಾರ ಪ್ರಶಸ್ತಿ-2026 ಪ್ರದಾನ ಮಾಡಲಾಯಿತು.ಹಿರಿಯ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ, ಹೆಸ್ಕಾಂನ ಸಹಾಯಕ ಅಭಿಯಂತರ ಚಿದಾನಂದ ಗುರುಸ್ವಾಮಿ ಮಾತನಾಡಿದರು. ಈ ವೇಳೆ ಶಿಕ್ಷಣ ಪ್ರೇಮಿ ಅರುಣ ಯಲಗುದ್ರಿ, ಲಕ್ಷ್ಮೀಕಾಂತ ಕುಲಕರ್ಣಿ, ಶಾಂತಾದೇವಿ ಪಾಟೀಲ, ಮಂಜುನಾಥ ಪಾಟೀಲ, ಎಸ್.ಆರ್.ಪಾಟೀಲ, ಭಾರತಿ ಬಿಜಾಪುರ, ಎಂ.ಬಿ.ತೊಟಗಿ ಸೇರಿ ಹಲವರು ಉಪಸ್ಥಿತರಿದ್ದರು.