ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲಾದ್ಯಂತ ಯಾವ ಗ್ರಾಮಗಳಲ್ಲೂ ಬಿತ್ತನೆ ಮಾಡುವಷ್ಟು ಮಳೆ ಆಗಿಲ್ಲವಾದ್ದರಿಂದ ಕೂಡಲೇ ವಿಜಯಪುರ ಜಿಲ್ಲೆಯ 13 ತಾಲೂಕುಗಳನ್ನು ಸಂಪೂರ್ಣ ಬರ ಎಂದು ಘೋಷಣೆ ಮಾಡಬೇಕು. ಪ್ರತಿ ಎಕರೆಗೆ ₹25,000 ಪರಿಹಾರ ನೀಡಬೇಕು. ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡುವುದರ ಜೊತೆಗೆ ಎಲ್ಲಾ ಹಳ್ಳ, ಕೊಳ್ಳ, ಕೆರೆಗಳನ್ನು ತುಂಬಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ವರ್ಷ 158 ಮಿ.ಮೀ ಮಳೆಯಾಗಿತ್ತು. ಈ ವರ್ಷ ಜಿಲ್ಲೆಯ ಯಾವ ಮೂಲೆಯಲ್ಲಿಯೂ ಅಷ್ಟೊಂದು ಹೇಳಿಕೊಳ್ಳುವಷ್ಟು ಮಳೆ ಆಗಿಲ್ಲ. ಆದರೆ, ಇಲಾಖೆ ವರದಿ ಪ್ರಕಾರ 138 ಮಿಮೀ ಮಳೆ ಆಗಿ ಕೇವಲ ಶೇ.10 ಮಳೆ ಪ್ರಮಾಣ ಕಡಿಮೆ ಆಗಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಇದರಲ್ಲಿ ಸಂಪೂರ್ಣ ಗೋಲ್ಮಾಲ್‌ ಆಗಿರುವುದು ಕಂಡು ಬರುತ್ತಿದೆ. ಕೂಡಲೇ ಜಿಲ್ಲಾಧಿಕಾರಿಗಳು ಎಲ್ಲಾ ಮಳೆ ಮಾಪನ ಕೇಂದ್ರಗಳ ಅಧಿಕೃತ ವರದಿ ತರಿಸಿ ಮತ್ತೊಮ್ಮೆ ಪರಿಶೀಲನೆ ಮಾಡಿ, ಜಿಲ್ಲೆಯನ್ನು ಬರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ತಾಲೂಕು ಅಧ್ಯಕ್ಷ ಅನಮೇಶ ಜಮಖಂಡಿ ಮಾತನಾಡಿ, ಹಣ ಕೊಟ್ಟು ಬೀಜಗೊಬ್ಬರ ಖರೀದಿಸಿದ ಹಲವಾರು ರೈತರು ಬಿತ್ತನೆ ಮಾಡಿಲ್ಲ, ಇನ್ನೂ ಹಲವಾರು ರೈತರು ಬೆಲೆ ಬಾಳುವ ಬೀಜ, ಗೊಬ್ಬರ ನೆಲಕ್ಕೆ ಹಾಕಿ ಮಳೆ ಬಾರದೇ ಮುಗಿಲಿನತ್ತ ನೋಡುತ್ತ ಕುಳಿತ್ತಿದ್ದಾರೆ. ಒಂದೆಡೆ ಸಾಲದ ಕಾಟ ಇನ್ನೊಂದೆಡೆ ಮಳೆಯ ಕೊರತೆ, ಇವುಗಳ ಮಧ್ಯೆ ರೈತ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದರೆ ಕೂಡಲೇ ಜಿಲ್ಲೆ ಜಿಲ್ಲೆಯನ್ನು ಬರ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಸಂಗಪ್ಪ ಟಕ್ಕೆ, ಜಿಲ್ಲಾ ಸಂಚಾಲಕ ಮಹಾದೇವ ಬನಸೋಡೆ, ತಾಲೂಕು ಕಾರ್ಯಾಧ್ಯಕ್ಷ ರಾಮಸಿಂಗ ರಜಪೂತ, ತಾಲೂಕು ಉಪಾಧ್ಯಕ್ಷ ಬಸಗೊಂಡ ತೇಲಿ, ಜಂಬಗಿ ಅಧ್ಯಕ್ಷ ಗೋರಕನಾಥ ಗೇರಡೆ, ಸುಭಾಸ ಹಿಟ್ನಳ್ಳಿ, ಶಟ್ಟು ಜಾಧವ, ಪ್ರಕಾಶ ವಂಬಾಸೆ, ಮುದಕಣ್ಣ ಯಂಕಂಚಿ, ರಾಘವೇಂದ್ರ ಗೇರಡೆ, ಮೃತ್ಯುಂಜಯ ನುಚ್ಚಿ, ಬಸವರಾಜ ಉಕ್ಕಲಿ ಇದ್ದರು.