ಪರಿಸರ ಉಳಿದರೆ ಮನುಕುಲದ ಉಳಿವು ಸಾಧ್ಯ-ಸವಿತಾ ತಾಮ್ರೆ

| Published : Jun 13 2025, 04:33 AM IST

ಸಾರಾಂಶ

ಈ ಬಾರಿ ತಾಪಮಾನ ವಿಪರೀತ ಹೆಚ್ಚಾಗಿದ್ದು, ಸಸಿಗಳನ್ನು ಬೆಳೆಸಿ ಸಂರಕ್ಷಿಸುವುದು ಇಂದಿನ ಅಗತ್ಯವಾಗಿದೆ. ಮಾನವ ಭೂಮಿ ಮೇಲಿರುವ ಸಕಲ ಜೀವಸಂಕುಲದೊಂದಿಗೆ ಬದುಕಬೇಕು. ಹೀಗಾಗಿ ಹೆಚ್ಚೆಚ್ಚು ಗಿಡ ನೆಟ್ಟು ಪೋಷಿಸಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸವಿತಾ ತಾಮ್ರೆ ತಿಳಿಸಿದರು.

ಶಿರಹಟ್ಟಿ: ಈ ಬಾರಿ ತಾಪಮಾನ ವಿಪರೀತ ಹೆಚ್ಚಾಗಿದ್ದು, ಸಸಿಗಳನ್ನು ಬೆಳೆಸಿ ಸಂರಕ್ಷಿಸುವುದು ಇಂದಿನ ಅಗತ್ಯವಾಗಿದೆ. ಮಾನವ ಭೂಮಿ ಮೇಲಿರುವ ಸಕಲ ಜೀವಸಂಕುಲದೊಂದಿಗೆ ಬದುಕಬೇಕು. ಹೀಗಾಗಿ ಹೆಚ್ಚೆಚ್ಚು ಗಿಡ ನೆಟ್ಟು ಪೋಷಿಸಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸವಿತಾ ತಾಮ್ರೆ ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಶಿರಹಟ್ಟಿ ವಲಯದ ವತಿಯಿಂದ ಪಟ್ಟಣದ ಎ.ಎ. ಪಠಾಣ ಸರಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕೇವಲ ವರ್ಷಕ್ಕೆ ಒಂದು ದಿನದ ಪರಿಸರ ರಕ್ಷಣೆ ಎಂಬುದು ಸೀಮಿತವಾಗಬಾರದು. ಪ್ರತಿ ದಿನವೂ ನಮಗೆ ಪರಿಸರ ದಿನವಾಗಬೇಕು ಎಂದು ಹೇಳಿದರು. ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಶವಾಗಿದೆ. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ನಮಗೆ ಅಗತ್ಯವಿರುವ ಆಮ್ಲಜನಕ, ಆಹಾರ ಮತ್ತು ಆರೋಗ್ಯಕ್ಕಾಗಿ ಸಸಿ ನೆಡಬೇಕು. ದೇಶಾದ್ಯಂತ ಅರಣ್ಯ ಸಂಪತ್ತು ನಾಷವಾಗುತ್ತಿದ್ದು, ಉಳಿಸುವ ಕಾರ್ಯವಾಗಬೇಕು. ಪರಿಸರ ಸಂರಕ್ಷಣೆಯಾದರೆ ಮಾತ್ರ ಮನುಕುಲಕ್ಕೆ ಉಳಿವು. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗಾಗಿ ಸಾರ್ವಜನಿಕರಲ್ಲಿ ಪರಿಸರದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು. ಬದಲಾವಣೆಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ. ಪ್ರಕೃತಿಯ ಮೇಲೆ ಮಾನವನ ಅಕ್ರಮಣ ಹೆಚ್ಚಾಗುತ್ತಿದೆ. ಜೀವಪರಿಸರ ಬಿಕ್ಕಟ್ಟು ಉಂಟಾಗಲಿದೆ. ಪ್ರಕೃತಿಯಲ್ಲಿನ ನೈಸರ್ಗಿಕ ಸಂಪತ್ತು ನಾಶವಾಗುತ್ತಿದ್ದು, ಅನೇಕ ಜೀವರಾಶಿಗಳು ಕಣ್ಮರೆಯಾಗುತ್ತಿವೆ. ನೂರಾರು ದೇವರ ಪೂಜೆಗಿಂತ ಒಂದು ಮರ ಬೆಳೆಸುವುದು ಉತ್ತಮ. ಪ್ರಕೃತಿಯಿಂದ ಪಾಠ ಕಲಿತ ನಾವು ಅದಕ್ಕಾಗಿ ಏನನ್ನೂ ಮಾಡದೇ ಕಲ್ಲು ಕಟ್ಟಿಗೆಯ ದೇವರುಗಳಿಗೆ ಹಣ ಮತ್ತು ಸಮಯ ಹಾಳುಮಾಡುತ್ತಿದ್ದೇವೆ. ಇದೇ ಸಮಯವನ್ನು ಮರ ಬೆಳೆಸುವುದರಲ್ಲಿ ಕಳೆದರೆ ಮುಂದಿನ ಭವಿಷ್ಯಕ್ಕೆ ಉಪಕಾರವಾಗಲಿದೆ ಎಂದು ಅಭಿಪ್ರಾಯಪಟ್ಟರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕೀ ನಾಯಕ ಮಾತನಾಡಿ, ಪ್ರಕೃತಿ ನಮಗೆ ಎಲ್ಲವನ್ನು ನೀಡಿದೆ. ಅದನ್ನು ಸಂರಕ್ಷಿಸಿಕೊಂಡು ಹೋಗುವುದು ಮಾನವ ಧರ್ಮ. ಪರಿಸರವು ಮಾನವನ ಏಳ್ಗೆಗೆ ಸಕಾರಾತ್ಮಕವಾಗಿ ಕೊಡುಗೆ ನೀಡಿದೆ. ಸಮಾಜದಲ್ಲಿ ಬದುಕುವ ವ್ಯಕ್ತಿ ತಮ್ಮ ತಮ್ಮ ಮನೆಗಳ ಮುಂದೆ ಸಸಿಯನ್ನು ನೆಟ್ಟು ಪೋಷಣೆ ಮಾಡಬೇಕು. ತನ್ನ ಉದ್ದಾರಕ್ಕಾಗಿ ಸಮತೋಲನವಾದ ಪರಿಸರ ಹುಡುಕುವತ್ತ ಮಾನವ ದಾಪುಗಲು ಹಾಕುತ್ತಿದ್ದಾನೆ. ಈಗಲಾದರೂ ಪರಿಸರ ಕಾಳಜಿ ನಮ್ಮೆಲ್ಲರ ಹೊಣೆಯಾಗಬೇಕು ಎಂದರು. ಹೆಚ್ಚುತ್ತಿರುವ ಜನಸಂಖ್ಯೆ, ಅಭಿವೃದ್ದಿ ಮತ್ತು ಕೈಗಾರಿಕರಂಗಳಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಪರಿಸರ ಪ್ರಜ್ಞೆ ಬೆಳೆಯಬೇಕಾಗಿದೆ. ಅರಣ್ಯ ನಾಶದಿಂದಾಗಿ ಹೆಚ್ಚುತ್ತಿರುವ ಜಾಗತಿಕ ತಾಪಮಾನ ಕಡಿಮೆ ಮಾಡುವ ನಿಟ್ಟಿನಲ್ಲಿ ಜನರು ಜಾಗ್ರತರಾಗಬೇಕಾದ ಅಗತ್ಯವಿದೆ ಎಂದರು. ಹಿಂದಿನ ದಿನಗಳಲ್ಲಿದ್ದ ಪರಿಸರ ಕಾಳಜಿ ಇಂದಿನ ಯುವಕರಲ್ಲಿ ಉಳಿದಿಲ್ಲ. ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದ್ದು, ಯುವಕರು ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ. ಇಂದಿನ ದಿನಗಳಲ್ಲಿ ಗಿಡಗಳನ್ನು ನೆಟ್ಟರೆ ಮುಗಿಯುವುದಿಲ್ಲ ಪ್ರತಿದಿನ ಅವುಗಳನ್ನು ಮಕ್ಕಳಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಗಿಡಗಳ ಬಗ್ಗೆ ಜಾಗೃತಿ ವಹಿಸಿ ಪಾಲನೆ ಪೋಷಣೆ ಮಾಡಿದರೆ ಮಾತ್ರ ಪರಿಸರ ದಿನಾಚರಣೆ ಸಾರ್ಥಕ ಎಂದರು. ಶಾಲೆಯ ಮುಖ್ಯೋಪಾಧ್ಯಾಯ ಎಂ.ಎ. ಮಕಾನದಾರ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ಪುನಿತ್ ಓಲೇಕಾರ, ಕೆ.ಎ. ಬಳಿಗೇರ, ಮುನ್ನಾ ಪಟಾಣ, ಎಂ.ಕೆ. ಲಮಾಣಿ, ಮಹಾಂತೇಶ ದಶಮನಿ, ಅಜ್ಜುಗೌಡ್ರ ಪಾಟೀಲ, ಪ್ರಕಾಶ ಭೋರಶೆಟ್ಟರ, ಮರಿಯಪ್ಪ, ಅಣ್ಣಿಗೇರಿ ಸೇರಿ ಅನೇಕರು ಇದ್ದರು.