ಸಾರಾಂಶ
ಹಂಪ್ ಮೇಲೆ ಬಿಳಿ ಬಣ್ಣ ಮಾಯ । ಅಪಘಾತಗಳು ಸಂಭವಿಸುವ ಮುನ್ಸೂಚನೆ । ಎಚ್ಚೆತ್ತುಕೊಳ್ಳದ ಅಧಿಕಾರಿಗಳು
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪಟ್ಟಣದ ಪರಿಮಿತಿಯ ಹೆದ್ದಾರಿಯಲ್ಲಿ ರೋಡ್ ಹಂಪ್ ಹಾಕಲಾಗಿದ್ದು, ರೋಡ್ ಹಂಪ್ಗೆ ಯಾವುದೇ ಮುನ್ನೆಚ್ಚರಿಕೆ ಹಾಗೂ ಮುನ್ಸೂಚನೆ ಕ್ರಮಗಳಿಲ್ಲದಿರುವುದು ಅಪಘಾತಗಳಿಗೆ ಕಾರಣವಾಗಿದ್ದು ತಾಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕಿದೆ.ಅಪಘಾತಗಳ ತಡೆಯುವ ಉದ್ದೇಶದಿಂದ ರೋಡ್ ಹಂಪ್ ಹಾಕಿದ್ದಾರೆ ಆದರೆ ರೋಡ್ ಹಂಪ್ನಿಂದ ಅಪಘಾತ ತಡೆಯುವುದಕ್ಕಿಂತ ಅಪಘಾತಗಳೇ ಹೆಚ್ಚುತ್ತಿವೆ. ರೋಡ್ ಹಂಪ್ ಹಾಕಿದ ಮಂದಿಗೆ ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲದ ಅಧಿಕಾರಿಗಳು ಬೇಗೂರು ಕಡೆಯಿಂದ ಬರುವಾಗ ಗುಂಡ್ಲುಪೇಟೆ ಬಳಿಯ ಕಿಶೋರ್ ಹೋಂಡಾ ಶೋರೂಂ ಮುಂದಿನ ರೋಡ್ ಹಂಪ್ ಇರುವುದೇ ವಾಹನಗಳು ಹತ್ತಿರ ಬರುವ ತನಕ ಕಾಣುತ್ತಿಲ್ಲ.ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಉದಾಸೀನತೆಯಿಂದಾಗಿ ಕಿಶೋರ್ ಹೋಂಡಾ ಶೋರೂಂ ಮುಂದಿನ ಹಂಪ್ಗೆ ರಾತ್ರಿ ಸಮಯದಲ್ಲಂತೂ ರೋಡ್ ಹಂಪ್ ಕಾಣದೆ ಮುಂದಿನ ವಾಹನಕ್ಕೆ ಡಿಕ್ಕಿ ಹೊಡೆಯಬೇಕಾಗುತ್ತದೆ ಎಂದು ಹಿಂದಿನ ವಾಹನಗಳ ಚಾಲಕರು ಅಪಘಾತ ತಪ್ಪಿಸಲು ಪ್ರಯಾಸ ಪಡುತ್ತಿದ್ದಾರೆ ಎಂದು ದೂರಿದರು. ಪ್ರತಿ ದಿನ ಸಂಚರಿಸುವ ವಾಹನಗಳ ಸವಾರರಿಗೆ ರೋಡ್ ಹಂಪ್ ಇದೆ ಎನ್ನುವುದು ಗೊತ್ತು ಆದರೆ ಪ್ರವಾಸಿಗರ ವಾಹನಗಳು ಹೊಸದಾಗಿ ಬರುವ ಚಾಲಕರಿಗೆ ರೋಡ್ ಹಂಪ್ ಇದೆ ಎನ್ನುವುದು ಅರಿವಿಲ್ಲದೆ ರೋಡ್ ಹಂಪ್ ಮೇಲೆ ಜಿಗಿದು ಹೋಗುವ ದೃಶ್ಯ ರಾತ್ರಿಯ ವೇಳೆ ದಿನನಿತ್ಯ ಕಾಣಸಿಗುತ್ತದೆ.ರೋಡ್ ಹಂಪ್ ಕಾಣದೆ ವಾಹನಗಳ ಚಾಲಕರು ದಿಡೀರ್ ಬ್ರೇಕ್ ಹಾಕಿದಾಗ ಹಿಂಬದಿ ಸವಾರರು ಮುಂದಿನ ವಾಹನಗಳಿಗೆ ಗುದ್ದಿಸುವುದನ್ನು ತಪ್ಪಿಸಲು ಎಡ ಬದಿಯ ಮಣ್ಣಿಗೆ ರಸ್ತೆಗೆ ಬಿಟ್ಟಾಗ ಧೂಳು ಆಳೆತ್ತರಕ್ಕೆ ಎದ್ದು ಬೈಕ್ ಸವಾರರು ಹಾಗೂ ಪಾದಚಾರಿಗಳಿಗೆ ತುಂಬಿಕೊಳ್ಳುತ್ತಿದೆ ಇದು ಅಪಘಾತಕ್ಕೆ ಎಡೆ ಮಾಡಿಕೊಡಲಿದೆ.ಮೈಸೂರು-ಊಟಿ ಹೆದ್ದಾರಿಯ ಗುಂಡ್ಲುಪೇಟೆ ಪರಿಮಿತಿಯಲ್ಲಿ ರೋಡ್ ಹಂಪ್ ಹಾಕಿದ್ದಾರೆ. ಹಂಪ್ ಹಾಕಿದ ಹೊಸತರಲ್ಲಿ ಬಿಳಿ ಬಣ್ಣ ಬಳಿದಿದ್ದಾರೆ ಆದರೆ ಕೆಲ ತಿಂಗಳ ಬಳಿಕ ಬಿಳಿ ಬಣ್ಣ ರೋಡ್ ಹಂಪ್ನಲ್ಲಿ ಮಾಯವಾಗಿದ್ದು ಬಿಳಿಯ ಬಣ್ಣ ಮಾಯವಾದಂತೆ ಆಗಾಗ್ಗೆ ಬಣ್ಣ ಬಳಿದರೆ ಸವಾರರ ಕಣ್ಣಿಗೆ ರೋಡ್ ಹಂಪ್ ಇದೆ ಎಂದು ವಾಹನ ನಿಧಾನ ಮಾಡಿ ತೆರಳುತ್ತಾರೆ. ಇಲ್ಲವಾದಲ್ಲಿ ರೋಡ್ ಹಂಪ್ ಕಾಣದೆ ವಾಹನಗಳು ಜಂಪ್ ಆಗುತ್ತವೆ ಎಂದು ಸವಾರ ಕುಮಾರ್ ಕನ್ನಡಪ್ರಭದೊಂದಿಗೆ ಹೇಳಿಕೊಂಡಿದ್ದಾರೆ.
ರಿಪ್ಲೇಕ್ಟರ್ ಇಲ್ಲ:ರೋಡ್ ಹಂಪ್ ಮುಂದೆ ನಾಮ ಫಲಕ ಹಾಕಿಲ್ಲ ಜೊತೆಗೆ ರೋಡ್ ಹಂಪ್ ಬಳಿ ರಿಫ್ಲೆಕ್ಟರ್ಗಳನ್ನು ಹಾಕದ ಕಾರಣ ಅಪಘಾತಗಳಿಗೆ ರೋಡ್ ಹಂಪ್ ಕಾರಣವಾಗಿದೆ ಎಂದು ಗುಂಡ್ಲುಪೇಟೆಯ ಕಿರಣ್ ಆರೋಪಿಸಿದ್ದಾರೆ. ಗುಂಡ್ಲುಪೇಟೆ ಪಟ್ಟಣದ ಮೂಲಕವೇ ತಮಿಳುನಾಡು ಹಾಗೂ ಕೇರಳ ರಾಜ್ಯಕ್ಕೆ ತೆರಳುವ ಗೂಡ್ಸ್ ವಾಹನಗಳು, ಪ್ರವಾಸಿಗಳ ವಾಹನಗಳು ರಾತ್ರಿ ೯ ಗಂಟೆಗೆ ಬಂಡೀಪುರ ಗಡಿಯಲ್ಲಿ ರಸ್ತೆ ಬಂದ್ ಆಗುವ ಕಾರಣ ವಾಹನಗಳು ವೇಗವಾಗಿ ತೆರಳುವಾಗ ರೋಡ್ ಹಂಪ್ ಕಣ್ಣಿಗೆ ಕಾಣದೆ ಹಂಪ್ ನೆಗಿಸಿದ್ದು ಜೊತೆಗೆ ಮುಂದಿನ ವಾಹನಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವುದೇ ತ್ರಾಸವಾಗುತ್ತಿದೆ ಎಂದು ಕೇರಳ ಲಾರಿ ಚಾಲಕ ಜಾರ್ಜ್ ಹೇಳಿದ್ದಾರೆ.