ಹುಬ್ಬಳ್ಳಿ:
ಬ್ಯಾಹಟ್ಟಿ ಬೆಂಬಲ ಬೆಲೆ ಕೇಂದ್ರದಲ್ಲಿ ಖರೀದಿಸಿದ ಹೆಸರು ಬೆಳೆಯ ಹಣವನ್ನು 4 ದಿನದಲ್ಲಿ ನೀಡದಿದ್ದರೆ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತಸೇನಾ ಕರ್ನಾಟಕ ಎಚ್ಚರಿಕೆ ನೀಡಿದೆ.ಧಾರವಾಡದಲ್ಲಿ ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಚಿವ ಸಂತೋಷ ಲಾಡ್ ಅವರಿಗೆ ಮನವಿ ಸಲ್ಲಿಸುವ ಮೂಲಕ ಈ ಎಚ್ಚರಿಕೆ ನೀಡಿದೆ.
ಡಿಸೆಂಬರ್ನಲ್ಲಿ ಬ್ಯಾಹಟ್ಟಿ ಕೇಂದ್ರದಲ್ಲಿ 75 ರೈತರಿಂದ ಹೆಸರು ಖರೀದಿಸಿದೆ. ಬಾರ್ಕೋಡ್ ಅಳವಡಿಸಿ ವೇರ್ ಹೌಸ್ಗೆ ಕಳುಹಿಸಿದ ಮೇಲೆ ಮುಗಿತು. ಆದರೆ ಮೂರು ವಾರಗಳ ಬಳಿಕ ನಿಮ್ಮ ಬೆಳೆ ಸರಿಯಿಲ್ಲ. ಕಳಪೆಯಾಗಿದೆ ತೆಗೆದುಕೊಂಡು ಹೋಗಿ ಎಂದು ನೋಟಿಸ್ ಕೊಟ್ಟಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ, ಒತ್ತಡ ಹಾಕಿ ಮಾರಾಟ ಮಾಡಿದ್ದಾರೆ ಎಂದು ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ. ಆದರೆ ಹಾಗೆ ಒತ್ತಡ ಹಾಕಿ ಮಾರಾಟ ಮಾಡಿದ್ದೇ ಆದರೆ ಪೊಲೀಸರಿಗೆ ದೂರು ಏಕೆ ಕೊಡಲಿಲ್ಲ. ಆಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ಏಕೆ ತರಲಿಲ್ಲ ಎಂದು ಪ್ರಶ್ನಿಸಿದರು. ಅಧಿಕಾರಿಗಳು ದಾರಿ ತಪ್ಪಿಸುವ, ತಮ್ಮ ತಪ್ಪಿಂದ ನುಣುಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಹೆಸರು ಖರೀದಿಸಿದ ರೈತರ ಹಣವನ್ನು ನಾಲ್ಕು ದಿನಗಳಲ್ಲಿ ನೀಡಬೇಕು. ಇಲ್ಲದಿದ್ದಲ್ಲಿ ಬೆಂಬಲ ಬೆಲೆ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಮನವಿ ಸ್ವೀಕರಿಸಿದ ಸಚಿವ ಸಂತೋಷ ಲಾಡ್, ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ರೈತಸೇನಾ ಕರ್ನಾಟಕ ಅಧ್ಯಕ್ಷ ವೀರೇಶ ಸೊಬರದಮಠ, ಗುರುರಾಯನಗೌಡರ, ಮಲ್ಲಣ್ಣ ಅಲೇಕರ್ ಸೇರಿದಂತೆ ಹೆಸರು ಮಾರಿದ ರೈತರೆಲ್ಲರೂ ಇದ್ದರು.