ಕನ್ನಡಪ್ರಭ ವಾರ್ತೆ ಸಿಂಧನೂರು

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ನಿವಾಸಿ ಅಶ್ವಿನಿ ತಿಪ್ಪಾರೆಡ್ಡಿ ಅವರನ್ನು ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಜೈ ಭೀಮ್ ಘರ್ಜನೆ ಸಂಘ ಹಾಗೂ ಕರ್ನಾಟಕ ಛಲವಾದಿ ಮಹಾಸಭಾ ಶುಕ್ರವಾರ ಮಿನಿವಿಧಾನಸೌಧ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿತು.

ಜೈ ಭೀಮ್ ಘರ್ಜನೆ ಸಂಘದ ಸಂಸ್ಥಾಪಕ ಅಧ್ಯಕ್ಷ ನಿರುಪಾದಿ ಸಾಸಲಮರಿ ಮಾತನಾಡಿ, ಬುಧವಾರ ರಾತ್ರಿ ಬಯಲು ಬಹಿರ್ದೆಸೆಗೆ ಹೋಗಿದ್ದ ಸಮಯದಲ್ಲಿ ಅಶ್ವಿನಿ ಅವರನ್ನು ನಾಲ್ಕೈದು ದುಷ್ಕರ್ಮಿಗಳು ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿ ಕೊಲೆ ಮಾಡಿ ಮೃತ ದೇಹವನ್ನು ಬಾವಿಗೆ ಎಸೆದು ಹೋಗಿರುವ ಅಮಾನವೀಯ ಕೃತ್ಯ ಖಂಡನೀಯ. ಮೃತ ಅಶ್ವಿನಿ ಕುಟುಂಬಕ್ಕೆ ರಾಜ್ಯ ಸರ್ಕಾರ 50 ಲಕ್ಷ ರೂ. ಪರಿಹಾರ ನೀಡಬೇಕು. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲು ವಿಳಂಬ ತೋರಿದ ಸಬ್‍ಇನ್‌ಸ್ಪೆಕ್ಟರ್‌ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಛಲವಾದಿ ಸಮಾಜದ ಮುಖಂಡರಾದ ಅಯ್ಯಪ್ಪ ಮಲ್ಲಾಪುರ ವಕೀಲ, ಹನುಮಂತಪ್ಪ ಬೂದಿವಾಳ ವಕೀಲ, ಚನ್ನಬಸವ ಅಮೀನಗಡ, ಹುಲುಗಪ್ಪ ಮಲ್ಕಾಪುರ, ಬಿ.ಎನ್.ಯರದಿಹಾಳ ಮಾತನಾಡಿದರು. ಶಿರಸ್ತೇದಾರ್ ಅಂಬಾದಾಸ್ ಮನವಿ ಪತ್ರ ಸ್ವೀಕರಿಸಿದರು. ಮುಖಂಡರಾದ ಶರಣಬಸವ ಪಗಡದಿನ್ನಿ, ಪಂಪಾಪತಿ ಬೂದಿವಾಳ, ನಿಂಗಪ್ಪ ಸಾಸಲಮರಿ, ಶ್ಯಾಮಣ್ಣ ಗುಂಜಳ್ಳಿ, ವೀರೇಶ ಬೂದಿವಾಳ, ವೀರೇಶ ಸುಲ್ತಾನಪುರ, ಬಾಲ್ಪಪ ಕುನ್ನಟಗಿ, ಮೌನೇಶ ಮಲ್ಲಾಪುರ, ಹುಸೇನಪ್ಪ ಗೊರೇಬಾಳ, ಶರಣಬಸವ ಸಾಸಲಮರಿ, ಮಲ್ಲಯ್ಯ, ಶಂಕ್ರಪ್ಪ ಜಾಲಿಹಾಳ, ಮಹಾಂಕಾಳೆಪ್ಪ ಮಲ್ಲಾಪುರ, ಮೌನೇಶ ತುರ್ವಿಹಾಳ, ಎಂ.ಬಿ.ದೊಡ್ಡಮನಿ, ದುರುಗಪ್ಪ ತುರ್ವಿಹಾಳ, ಚನ್ನಬಸವ ಯದ್ದಲದೊಡ್ಡಿ, ಸಿದ್ದಪ್ಪ ಸೋಮಲಾಪುರ, ಬಾಲರಾಜ ವಿರುಪಾಪುರ ಮತ್ತಿತರರು ಇದ್ದರು.