ಸಾರಾಂಶ
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿಜಿಲ್ಲೆಯಲ್ಲಿ ಕಳೆದ 6 ದಿನದಿಂದ ಇದ್ದ ಉಷ್ಣ ಅಲೆ ಎಚ್ಚರಿಕೆ ಮತ್ತೆ ಪುನರಾವರ್ತನೆಯಾಗಿದೆ. ಹವಾಮಾನ ಇಲಾಖೆಯವರು ಮತ್ತೆ ಏ.9 ಹಾಗೂ 10 ಎರಡು ದಿನಗಳ ಕಾಲ ಉಷ್ಣ ಮಾರುತಗಳು ಕಲಬುರಗಿ ಜಿಲ್ಲೆಯನ್ನು ಕಂಗೆಡಿಸುವ ಮುನ್ಸೂಚನೆ ನೀಡಿದ್ದಾರೆ.
ಹೀಗಾಗಿ ಕಳೆದೊಂದು ವಾರದಿಂದ ನಿರಂತರ ಕಲಬುರಗಿಯಲ್ಲಿ ಕಳೆದೊಂದು ದಶಕದಲ್ಲಿಯೇ ಅತ್ಯದಿಕ ಉಷ್ಣಾಂಶ ದಾಖಲಾಗುತ್ತ ಹೊರಟಿದೆ.ಇದರಿಂದಾಗಿ ಜನ- ಜಾನುವಾರುಗಳು ಕಂಗಾಲಾಗಿವೆ.ರಣಬಿಸಿಲಿನ ಹೊಡೆತಕ್ಕೆ ತತ್ತರಿಸುತ್ತಿರುವ ಬಿಸಿಲೂರು ಕಲಬುರಗಿಯಲ್ಲಿ ಎಲ್ಲಿ ನೋಡಿದರಲ್ಲಿ ರಣರಣ ಬಿಸಿಲಿನ ಸಾಮ್ರಾಜ್ಯವೇ ನಿರ್ಮಾಣವಾಗಿದೆ. ಕಳೆದೊಂದು ವಾರದಿಂದ ಬಿಸಿಲಿನ ಬೇಗೆ ಏರುಗತಿಯಲ್ಲಿದೆ. ನಿತ್ಯ ಸರಾಸರಿ 43° ಯಿಂದ 44.7° ಸೆಲ್ಸಿಯಸ್ವರೆಗೆ ತಪ ದಾಖಲಾಗುತ್ತಿದೆ.
ಕಳೆದ ಹತ್ತು ವರ್ಷಗಳಲ್ಲಿ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಉಷ್ಣಾಂಶ, ಅದರಲ್ಲೂ ಏಪ್ರಿಲ್ನಲ್ಲೇ ಈ ಪರಿ ತಾಪ ದಾಖಲಗಿರೋದು ಜಿಲ್ಲೆಯಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ.ಬೆಳಗ್ಗೆ ಏಳು ಗಂಟೆಯಿಂದಲೇ ಸೂರ್ಯನ ಆರ್ಭಟ ಶುರುವಾಗಿ ಅದು ಮಧ್ಯಾಹ್ನ 12 ರಿಂದ ಸಂಜೆ 5 ಗಂಟೆವರೆಗೆ ಉರಿಬಿಸಿಲ ರೂಪದಲ್ಲಿ ಕಾಡುತ್ತದೆ. ರಣಬಿಸಿಲಿಗೆ ಹೆದರಿ ಹೊರಗೆ ಬರಲು ಜನತೆ ಹಿಂದೆ ಮುಂದೆ ನೋಡುವಂತಾಗಿದೆ.
ಸದ್ಯಕ್ಕಂತೂ ಏನಾದರೂ ತುರ್ತು ಸಂದರ್ಭಗಳಲ್ಲೆ ಹೊರಗೆ ಬರುತ್ತಿರುವ ಸಾರ್ವಜನಿಕರು ಮುಂದಿನ ಏಪ್ರಿಲ್/ಮೇ/ಜೂನ್.. ಮೂರು ತಿಂಗಳು ಹೇಗಪ್ಪ ಕಳೆಯೋದು ಎಂದು ಕಳವಳಗೊಂಡಿದ್ದಾರೆ.ಬಿಸಿಲಿಂದ ರಕ್ಷಣೆ ಪಡೆಯಲು ಹತ್ತು ಹಲವು ಕ್ರಮಗಳಿಗೆ ಮುಂದಾಗಿರುವ ಜನ ತಾವು ಹೋದ ಕಡೆಗಳಲ್ಲೆಲ್ಲಾ ನೀರು, ಶರಬತ್ ಮೊರೆ ಹೋಗುತ್ತಿದ್ದಾರೆ. ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳಲು ಲಿಂಬೂ ಶರಬತ್, ಎಳೆ ನೀರು, ಮಜ್ಜಿಗೆ ಸೇವನೆ ಶುರುಹಚ್ಚಿಕೊಂಡಿದ್ದಾರೆ.
ಟ್ರಾಫಿಕ್ ಸಿಗ್ನಲ್ ಸ್ಥಳದಲ್ಲಿ ಹಸಿರು ಹೊದಿಕೆಗೆ ಹೆಚ್ಚಿದ ಆಗ್ರಹ:ಕಲಬುರಗಿ ನಗರದಲ್ಲಿ ಬಿಸಿಲಿನಿಂದ ಜನ ಕಂಗೆಟ್ಟಿದ್ದಾರೆ. ಈ ಮಧ್ಯೆ ಸಂಚಾರ ಸಂಕೇತ ದೀಪಗಳ ಕಿರಿಕಿರಿಯೂ ಶುರುವಾಗಿದೆ. ರಣ ಬಿಸಿಲಲ್ಲಿ 1 ನಿಮಿಷ, ಅದಕ್ಕೂ ಅಧಿಕ ಅವಧಿಗೆ ಅದೆಲ್ಲಿ ಸಂಚಾರ ದೀಪದಲ್ಲಿ ಕಾಯೋದು ಎಂದು ಕಂಗಲಾಗಿದ್ದಾರೆ.
ಏತನ್ಮಧ್ಯೆ ಪಕ್ಕದ ವಿಜಯಪುರ, ದೂರದ ಗದಗ ಜಿಲ್ಲೆಗಳಲ್ಲಿ ಅಲ್ಲಿನ ಆಡಳಿತದವು ಸಂಚಾರ ದೀಪಗಳಿರುವ ಸ್ಥಳಧಲ್ಲಿ ಹಿಸಿರು ಹೊದಿಕೆ ಕಟ್ಟಿ ಜನರಿಗೆ ನೆರಳಿನ ರಕ್ಷಣೆ ನೀಡಿರುವ ಫೋಟೋಗಳನ್ನು ವೈರಲ್ ಮಾಡುತ್ತ ಕಲಬುಗಿಯಲ್ಲೂ ಈ ಕ್ರಮ ಯಾಕಿಲ್ಲ ಎಂದು ಜನ ಕೇಳುತ್ತಿದ್ದಾರೆ.ಏತನ್ಮಧ್ಯೆ ಬಿಸಿಲೂರ ಮಂದಿಯ ನೆರವಿಗೆ ತುಸು ಸಂಚಾರಿ ಪೊಲೀಸರು ಧಾವಿಸಿದ್ದಾರೆ ಎನ್ನಬಹುದು. ಸಂಚಾರ ದಟ್ಟಣೆ ಕಡಿಮೆ ಇರುವ ಕಡೆ ಮಧ್ಯಾಹ್ನ ಸಿಗ್ನಲ್ ಸ್ವಿಚ್ ಆಫ್ ಮಾಡಲು ತೀರ್ಮಾನಿಸಿದ್ದಾರೆ. ನಗರದಲ್ಲಿರುವ 15 ಸಿಗ್ನಲ್ ಗಳ ಪೈಕಿ ಮೂರು ನಾಲ್ಕು ಹೊರತು ಪಡಿಸಿ ಉಳಿದೆಡೆಯ ಸಿಗ್ನಲ್ ಮಧ್ಯಾಹ್ನ ಆಫ್ ಮಾಡಲಾಗುತ್ತಿದೆ.
ಎಲ್ಲೆಲ್ಲಿ ವಾಹನ ಸಂಚಾರ ಕಮ್ಮಿ ಇರುವುದೋ ಅಂತಹ ಸಿಗ್ನಲ್ ಗಳಲ್ಲಿ ಮಧ್ಯಾಹ್ನ 12 ರಿಂದ ಸಂಜೆ 5 ಗಂಟೆಯವರೆಗೆ ಸಿಗ್ನಲ್ ಆಫ್ ಮಾಡಲಾಗುತ್ತಿದೆ. ಆದಾಗ್ಯೂ ಜನ ಹಸಿರು ಹೊದಿಕೆಯ ರಕ್ಷಣೆ ಬೇಕೇಬೇಕು ಎಂದು ಆಗ್ರಹಿಸುತ್ತಿದ್ದಾರೆ.ಪ್ರಸನ್ನ ದೇಶಪಾಂಡೆ, ಸಾಮಾಜಿಕ ಕಾರ್ಯಕರ್ತರು, ಕಲಬುರಗಿಕಲಬುರಗಿಯಲ್ಲಿ ರಣರಣ ಬಿಸಿಲು, ಇದು ತುಂಬ ತೊಂದರೆ ಉಂಟು ಮಾಡುತ್ತಿದೆ. ಜನಾರೋಗ್ಯಕ್ಕೂ ಸಂಚಕಾರ ತಂದೊಡ್ಡಿದೆ. ವಿಜಯಪುರ, ಗದಗದಲ್ಲಿ ಆಡಳಿತ ಕೈಗೊಂಡ ಕ್ರಮದಂತೆ ಇಲ್ಲಿಯೂ ಸಿಗ್ನಲ್ ಇರುವೆಡೆ ಹಸಿರು ಹೊದಿಕೆಯನ್ನು ನೆರಳಿನ ವ್ಯವಸ್ಥೆ ಕಲ್ಪಿಸಬೇಕು. ಅಂದಾಗ ಬಿಸಿಲ ಬೇಗೆಯಿಂದ ಸವಾರರುರ ತಪ್ಪಿಸಿಕೊಳ್ಳಬಹುದು.- ಪ್ರಸನ್ನ ದೇಶಪಾಂಡೆ, ಸಾಮಾಜಿಕ ಕಾರ್ಯಕರ್ತರು, ಕಲಬುರಗಿ