ಕನ್ನಡಪ್ರಭವಾರ್ತೆ ಪುತ್ತೂರು

ಪುತ್ತೂರಿನಲ್ಲಿ 15 ಮಂದಿ ಸರ್ಕಾರಿ ಸರ್ವೆಯರ್‌ಗಳಿದ್ದಾರೆ, ಉಳಿದಂತೆ ಲೈಸೆನ್ಸ್ಡ್ ಸರ್ವೆಯರ್‌ಗಳಿದ್ದಾರೆ. ಅವರ ವೇತನ ಹೆಚ್ಚಳ ಬೇಡಿಕೆಯನ್ನು ಕಂದಾಯ ಸಚಿವರ ಗಮನಕ್ಕೆ ತಂದು ಪರಿಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುತ್ತದೆ. ಹೆಚ್ಚುವರಿ ಲೈಸೆನ್ಸ್ಡ್ ಸರ್ವೆಯರ್‌ಗಳನ್ನು ನೇಮಕಾತಿ ಮಾಡುವ ಮೂಲಕ ಪುತ್ತೂರು ವಿಧಾನಸಭಾ ಕ್ಷೇತ್ರದ ಕಂದಾಯ ಕಡತಗಳ ವಿಲೇವಾರಿ ಮಾಡಿಸಲಾಗುತ್ತದೆ. ಹೆಚ್ಚುವರಿ ಸರ್ವೆಯರ್‌ಗಳ ನೇಮಕಾತಿ ಮಾಡುವಂತೆಯೂ ಸರ್ಕಾರದ ಮೇಲೆ ಒತ್ತಡವನ್ನು ಹೇರುವುದಾಗಿ ಶಾಸಕರು ತಿಳಿಸಿದರು.ಅವರು ಸೋಮವಾರ ಶಾಸಕರ ಕಚೇರಿಯಲ್ಲಿ ಕಂದಾಯ ಸರ್ವೇಯರ್‌ಗಳ ಸಭೆ ನಡೆಸಿ ಕಡತ ವಿಲೇವಾರಿ ಬಗ್ಗೆ ಶೀಘ್ರಗೊಳಿಸುವಂತೆ ಸೂಚಿಸಿದರು. ಫ್ಲಾಟಿಂಗ್ ಅರ್ಜಿ ನೀಡಿದ್ದಲ್ಲಿ ಕಡತಗಳು ಆಟೋಮ್ಯಾಟಿಕ್ ಆಗಿ ವಿಲೇವಾರಿಯಾಗಲಿದೆ. ಈಗಾಗಲೇ ಶೇ. 80 ಕಡತಗಳು ತಹಸೀಲ್ದಾರ್ ಲಾಗಿನ್‌ನಿಂದ ಸರ್ವೆ ಇಲಾಖೆಗೆ ವರ್ಗಾವಣೆಯಾಗಿದ್ದು ಒಂದೊಂದಾಗಿ ಕಡತಗಳ ವಿಲೇವಾರಿ ಮಾಡುವಂತೆ ಸೂಚನೆ ನೀಡಿದ್ದೇನೆ. ಹಲವು ಮಂದಿ ಫ್ಲಾಟಿಂಗ್‌ಗೆ ಅರ್ಜಿ ಕೊಟ್ಟು ಅನೇಕ ವರ್ಷಗಳೇ ಕಳೆದಿದೆ ಯಾರೂ ಆತಂಕ ಪಡಬೇಕಿಲ್ಲ ಎಲ್ಲವೂ ಸುಗಮವಾಗಿ ವಿಲೇವಾರಿಯಾಗಲಿದೆ ಎಂದು ಶಾಸಕರು ತಿಳಿಸಿದರು.ಸಭೆಯಲ್ಲಿ ಡಿಡಿಎಲ್‌ಆರ್ ಪುಷ್ಪರಾಜ್, ಎಡಿಎಲ್‌ಆರ್, ಸರ್ವೆಯರ್‌ಗಳು, ಲೈಸೆನ್ಸ್‌ಡ್‌ ಸರ್ವೆಯರ್‌ಗಳು ಇದ್ದರು.