ಉಡುಪಿ/ಮಂಗಳೂರು/ಸುಬ್ರಹ್ಮಣ್ಯ: ಶನಿವಾರ ಇಹಲೋಕ ತ್ಯಜಿಸಿದ ದಕ್ಷಿಣ ಭಾರತದ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ತಿಂಗಳ ಹಿಂದಷ್ಟೇ ಉಡುಪಿ ಜಿಲ್ಲೆಗೆ ಆಗಮಿಸಿದ್ದರು. ತಮ್ಮ ಕುಟುಂಬ ಸಮೇತರಾಗಿ ಕಳೆದ ಜೂ.30ರಂದು ಉಡುಪಿ ಜಿಲ್ಲೆಯ ಪವಿತ್ರ ಕ್ಷೇತ್ರ ಕಮಲಶಿಲೆಗೆ ಭೇಟಿ ನೀಡಿ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಅಮ್ಮನವರ ದರ್ಶನ ಪಡೆದಿದ್ದರು.
ದೇವಳದ ಅನುವಂಶೀಯ ಆಡಳಿತ ಮೊಕ್ತೇಸರರಾದ ಎಸ್. ಸಚ್ಚಿದಾನಂದ ಚಾತ್ರ ಅವರು ಎಸ್. ಜಾನಕಿ ಹಾಗೂ ಅವರ ಕುಟುಂಬದವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದರು. ದೇವಳದ ಪರವಾಗಿ ಪ್ರಸಾದ, ಶಾಲು ಹಾಗೂ ಮಂಗಳ ದ್ರವ್ಯಗಳನ್ನು ನೀಡಿ ಗೌರವಿಸಲಾಗಿತ್ತು.ಇದಕ್ಕೂ ಮುನ್ನ ಎಸ್.ಜಾನಕಿ ಅವರು ಕರಾವಳಿಯಲ್ಲಿ ದೇವಸ್ಥಾನಗಳ ಭೇಟಿ ಆಗಮಿಸಿದ ವೇಳೆ ಜೂ.25 ರಂದು ಮಂಗಳೂರಿನ ಇತಿಹಾಸ ಪ್ರಸಿದ್ಧ ಮಂಗಳಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.ಸಂಜೆ ವೇಳೆಗೆ ಸ್ನೇಹಿತೆಯೊಬ್ಬರ ಜೊತೆ ಮಂಗಳಾದೇವಿ ದೇವಸ್ಥಾನಕ್ಕೆ ಆಗಮಿಸಿದ ಎಸ್. ಜಾನಕಿ ಅವರನ್ನು ದೇವಸ್ಥಾನ ಆಡಳಿತ ಮಂಡಳಿಯವರು ಬರಮಾಡಿಕೊಂಡರು. ಬಳಿಕ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಹೂವಿನ ಪೂಜೆ ಸೇವೆ ಮಾಡಿದ್ದರು. ಈ ವೇಳೆ ದೇವಸ್ಥಾನದ ವತಿಯಿಂದ ಸೀರೆ ಪ್ರಸಾದ ನೀಡಿ ಗೌರವಿಸಲಾಯಿತು.ದೇವಳದ ಆಡಳಿತ ಮಂಡಳಿ ಜೊತೆ ಮಾತನಾಡಿದ್ದ ಎಸ್. ಜಾನಕಿ, ‘ನಾನು ಮಂಗಳಾದೇವಿ ದೇವಸ್ಥಾನ ಬಗ್ಗೆ ಯೂಟ್ಯೂಬ್ ಹಾಗೂ ಜಾಲ ತಾಣಗಳಲ್ಲಿ ನೋಡಿ ತಿಳಿದುಕೊಂಡಿದ್ದೆ. ಅನೇಕ ಸಮಯದಿಂದ ನನಗೆ ದೇವಸ್ಥಾನಕ್ಕೆ ಬರಬೇಕು ಎಂಬ ಆಶೆ ಆಗಿತ್ತು. ಅದು ಇಂದು ಕೈಗೂಡಿತು. ಮಂಗಳಾದೇವಿ ಇಂದಾಗಿ ಇಲ್ಲಿಗೆ ‘ಮಂಗಳೂರು’ ಎಂಬ ಹೆಸರು ಬಂತು ಎಂದು ನಾನು ಕೇಳಿ ತಿಳಿದಿದ್ದೇನೆ’ ಎಂದು ಹೇಳಿದ್ದರು. ಬಳಿಕ ದೇವಸ್ಥಾನದ ಆಡಳಿತ ಸಮಿತಿ, ಸಿಬ್ಬಂದಿ ಜೊತೆ ಫೋಟೋ ತೆಗೆಸಿಕೊಂಡಿದ್ದರು ಎನ್ನುತ್ತಾರೆ ಮೆನೇಜರ್ ರಂಜಿತ್.
ವರ್ಷದ ಹಿಂದೆ ಕುಕ್ಕೆ ಭೇಟಿ: ವರ್ಷದ ಹಿಂದೆ 2025 ಫೆ.19ರಂದು ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಭಕ್ತರಾದ ಅವರು ಶ್ರೀ ದೇವರ ದರುಶನ ಪಡೆದು ಸೇವೆ ನೆರವೇರಿಸಿ ಮಹಾಪ್ರಸಾದ ಸ್ವೀಕರಿಸಿದ್ದರು. ಬಳಿಕ ಭೋಜನ ಪ್ರಸಾದ ಸ್ವೀಕರಿಸಿದ್ದರು.