ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಇಸ್ರೇಲ್ ಮಾದರಿ ಕೃಷಿ ಮಾಡಲು ಒತ್ತು : ಪ್ರದೀಪ್ ಈಶ್ವರ್

| Published : Dec 24 2024, 12:48 AM IST / Updated: Dec 24 2024, 12:35 PM IST

ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಇಸ್ರೇಲ್ ಮಾದರಿ ಕೃಷಿ ಮಾಡಲು ಒತ್ತು : ಪ್ರದೀಪ್ ಈಶ್ವರ್
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಇಸ್ರೇಲ್ ಮಾದರಿ ಕೃಷಿ ಮಾಡಲು ಒತ್ತು ನೀಡಲು ನಿರ್ಧರಿಸಿದ್ದು, ಆ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

 ಚಿಕ್ಕಬಳ್ಳಾಪುರ:   ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಇಸ್ರೇಲ್ ಮಾದರಿ ಕೃಷಿ ಮಾಡಲು ಒತ್ತು ನೀಡಲು ನಿರ್ಧರಿಸಿದ್ದು, ಆ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಶಾಂಪುರ ಪಂಚಾಯತಿಯ ಗುಯ್ಯಲಹಳ್ಳಿಯಲ್ಲಿ ನಮ್ಮೂರಿಗೆ ನಮ್ಮಶಾಸಕ ಕಾರ್ಯಕ್ರಮದಲ್ಲಿ ಜನತೆಯ ಅಹವಾಲು ಸ್ವೀಕರಿಸಿದ ನಂತರ ರೈತ ದಿನಾಚರಣೆ ಪ್ರಯುಕ್ತ ರೈತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ರೈತ ಕೃಷಿಯಿಂದ ವಿಮುಖನಾದರೆ ನಮಗೆ ತಿನ್ನಲು ಎನೂ ಸಿಗುವುದಿಲ್ಲ ಎಂದರು.

ಬ್ಯಾಂಕ್‌ನವರು ಆತ್ಮಹತ್ಯೆ ಮಾಡಿಕೊಳ್ಳಲಿ

ಪ್ರತಿಯೊಬ್ಬರೂ ಊಟ ಮಾಡುವ ಮುನ್ನ ಅನ್ನದಾತರನ್ನು ಸ್ಮರಿಸಿ ಊಟ ಮಾಡಬೇಕು. ಅನ್ನದಾತರು ಎಂತಹುದೇ ಸಂಕಷ್ಟ ಬಂದರೂ ಧೃತಿಗೆಡ ಬೇಡಿ, ಸಾಲ ತೀರಿಸಲಾಗಲಿಲ್ಲ ಎಂದು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗದಿರಿ. ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿರುವುದು ಸಾಲ ಪಡೆದ ರೈತನಲ್ಲ, ಸಾಲ ನೀಡಿದ ಬ್ಯಾಂಕ್ ನವರು ಎಂದು ಅವರು ಹೇಳಿದರು.

ನಿಮ್ಮೊಂದಿಗೆ ನಾನಿದ್ದೇನೆ:

ನಾನು ಸಹಾ ರೈತನ ಮಗನೆ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ನಿಮ್ಮೋಂದಿಗೆ ನಾನಿದ್ದೇನೆ. ದೇಶದ ಬೆನ್ನುಲುಬು ರೈತ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಭಾರತ ಕೃಷಿ ಪ್ರಧಾನ ದೇಶವಾಗಿರುವುದರಿಂದ ಇಲ್ಲಿ ರೈತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ನಾವು ತಿನ್ನುವ ದವಸ ಧಾನ್ಯಗಳು, ಹಣ್ಣು, ತರಕಾರಿ, ಹೈನುಗಾರಿಕಾ ಉತ್ಪನ್ನಗಳನ್ನೆಲ್ಲ ಉತ್ಪಾದಿಸುವುದು ಈ ರೈತರೆ. ಅನಾದಿ ಕಾಲದಿಂದಲೂ ನಮ್ಮ ದೇಶವನ್ನು ಮುನ್ನಡೆಸಿದ್ದು ಈ ರೈತರೇ ಎಂಬುದು ತುಂಬಾ ಹೆಗ್ಗಳಿಕೆಯ ವಿಷಯ ಎಂದರು.

ನಮ್ಮಲ್ಲಿ ನಡೆದ ರೈತ ಚಳವಳಿಗಳೂ ಇತಿಹಾಸದ ಪುಟಗಳಲ್ಲಿ ಸೇರಿಕೊಂಡಿವೆ. ಈ ಶ್ರಮಜೀವಿಗಳಾದ ರೈತರು ಎಂದಿಗೂ ಗೌರವಿಸಲ್ಪಡುವ ವ್ಯಕ್ತಿತ್ವಗಳೇ ಆಗಿರುತ್ತಾರೆ. ಇದಕ್ಕಾಗಿಯೇ ನಮ್ಮ ದೇಶದಲ್ಲಿ ಇವರಿಗಾಗಿ ಒಂದು ದಿನವನ್ನು ಮೀಸಲಾಗಿಡಲಾಗಿದೆ. ಅದುವೇ ಡಿಸೆಂಬರ್‌ 23. ಈ ದಿನವನ್ನು ದೇಶದೆಲ್ಲೆಡೆ ರೈತರ ದಿನ ಅಥವಾ ಕಿಸಾನ್‌ ದಿವಸ್‌ ಎಂದು ಆಚರಿಸಲಾಗುತ್ತದೆ ಎಂದರು.

ರೈತರ ದಿನಾಚರಣೆ:

ಈ ದಿನ ಭಾರತದ ಜನಪ್ರಿಯ ರೈತ ಮುಖಂಡ ಹಾಗೂ ದೇಶದ ಐದನೇ ಪ್ರಧಾನ ಮಂತ್ರಿ ದಿವಂಗತ ಚೌಧರಿ ಚರಣ್‌ ಸಿಂಗ್‌ ಅವರು ಹುಟ್ಟಿದ ದಿನವೂ ಹೌದು. ಅವರ ಸ್ಮರಣಾರ್ಥವಾಗಿಯೂ ಈ ದಿನವನ್ನು ರೈತರ ದಿನವನ್ನಾಗಿ ಆಚರಿಸಲಾಗುತ್ತದೆ. ಮುಖ್ಯವಾಗಿ ರೈತರು ಸಮಾಜಕ್ಕೆ ನೀಡುವ ಕೊಡುಗೆಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದೇ ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಸಾಮಾನ್ಯವಾಗಿ ಭಾರತೀಯ ರೈತರದ್ದು ಬಲು ಕಷ್ಟದ ಜೀವನ. ಹೆಚ್ಚು ವಿದ್ಯಾಭ್ಯಾಸವನ್ನು ಪಡೆಯದ ಅವರ ಸಾಮಾನ್ಯ ಬದುಕು ದುಸ್ತರವಾಗಿದೆ. ಅವರನ್ನು ಮೇಲ್ದರ್ಜೆಗೆ ಏರಿಸಲು ಸರ್ಕಾರ ಸತತ ಪ್ರಯತ್ನ ಮಾಡುತ್ತಿದೆ. ಕೃಷಿಗೆ ಅಗತ್ಯವಾದ ಆಧುನಿಕ ಸೌಲಭ್ಯಗಳನ್ನು ಪೂರೈಸುತ್ತಿದೆ. ರೈತರ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ ಎಂದರು.ಸಾವಯವ ಕೃಷಿಗೆ ಒತ್ತು ನೀಡಿ

ಮನುಷ್ಯ ಸತ್ತರೆ ಮಣ್ಣಿನಲ್ಲಿ ಹೂತು ಹಾಕಿದರೆ ಜೀವನ ಕೊನೆಯಾಗುತ್ತಿದೆ. ಆದರೆ ಮಣ್ಣು ಸತ್ತರೆ ಮನುಕುಲವೇ ಕೊನೆಯಾಗಲಿದೆ. ಎಕೆಂದರೆ ಇಂದು ನಾವು ಹೆಚ್ಚಿನ ರಸಗೋಬ್ಬರದ ಅವೈಜ್ಞಾನಿಕ ಬಳಕೆಯಿಂದ ಭೂಮಿಯ ಸಾರವನ್ನು ಕಳೆದು ಕೊಳ್ಳುವಂತೆ ಮಾಡಿದ್ದೇವೆ. ಭೂಮಿ ಸಾರಯುಕ್ತ ಮತ್ತು ಫಲವತ್ತೆ ಪಡೆದುಕೊಳ್ಳಲು ಆದಷ್ಟು ರೈತರು ಸಾವಯವ ಕೃಷಿಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.