ಜೈನ ಸಮಾಜಕ್ಕೆ ನಿಗಮ ಮಂಡಳಿ ಸ್ಥಾನ ನೀಡದೇ ಅನ್ಯಾಯ

| Published : Mar 07 2025, 11:45 PM IST

ಸಾರಾಂಶ

ದಿಗಂಬರ ಜೈನ ಸಮಾಜದಲ್ಲಿ ಈಗಲೂ ಕೂಡ ಶೇ.40 ರಷ್ಟು ಜನ ಅತ್ಯಂತ ಕಡು ಬಡವರಿದ್ದು ಕೃಷಿ, ಕೂಲಿ ಮಾಡುತ್ತಾರೆ. ಆದರೂ ಕೂಡ ನಮ್ಮ ಸಮಾಜಕ್ಕೆ ನಿಗಮ ಮಂಡಳಿ ಮಾಡದೇ ಅನ್ಯಾಯವೆಸಗಿದ್ದಾರೆ.

ಕನ್ನಡಪ್ರಭ ವಾರ್ತೆ ಕಾಗವಾಡ

ಮುಂಬರುವ ರಾಜ್ಯ ಬಜಟ್‌ನಲ್ಲಿ ಜೈನ ಸಮಾಜಕ್ಕೆ ಜೈನ ಅಭಿವೃದ್ಧಿ ನಿಗಮ ಮಾಡುವುಗಾಗಿ ಹೇಳಿ, ಈಗ ಅಭಿವೃದ್ಧಿ ನಿಗಮ ಘೋಷಣೆ ಮಾಡದೇ ಸಿಎಂ ಸಿದ್ದರಾಮಯ್ಯನವರು ನುಡಿದಂತೆ ನಡೆದುಕೊಳ್ಳದೇ ಜೈನ ಸಮಾಜಕ್ಕೆ ಅನ್ಯಾಯವೆಸಗಿದ್ದಾರೆ ಎಂದು ಭಾರತೀಯ ಜೈನ ಸಂಘಟನೆಯ ರಾಜ್ಯ ಸಂಚಾಲಕ ಅರುಣಕುಮಾರ ಯಲಗುದ್ರಿ ಕಿಡಿಕಾರಿದರು.

ಶುಕ್ರವಾರ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.94 ರಷ್ಟು ಸುಶಿಕ್ಷಿತ ಜೈನ ಸಮುದಾಯದ ಜನ ಇದ್ದು, ಕಳೆದ ಹಲವಾರು ವರ್ಷಗಳಿಂದ ಜೈನ ಅಭಿವೃದ್ಧಿ ನಿಗಮ ಮಾಡುವುದಾಗಿ ಹೇಳುತ್ತ ಬಂದಿದ್ದರು. ಆದರೆ, ಇಂದಿನ ಬಜೆಟ್‌ನಲ್ಲಿ ನಮ್ಮ ಸಮಾಜಕ್ಕೆ ಅಭಿವೃದ್ಧಿ ನಿಗಮ ಘೋಷಣೆ ಮಾಡದೇ ಅನ್ಯಾಯವೆಸಗಿದ್ದಾರೆ ಎಂದು ತಮ್ಮ ಅಸಮಧಾನವನ್ನು ಹೊರಹಾಕಿದರು.

ಕಳೆದ ಡಿಸೆಂಬರ್‌-2024 ರಲ್ಲಿ ಬೆಳಗಾವಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಜೈನ ಸಮಾಜದವರು ಸೇರಿರುವ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ ಅವರು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಜೈನ ಸಮಾಜಕ್ಕೆ ಬರುವ ಬಜೆಟ್‌ನಲ್ಲಿ ಅಭಿವೃದ್ಧಿ ನಿಗಮ ಘೋಷಣೆ ಮಾಡುವುದಾಗಿ ಹೇಳಿದ್ದರು. ಅಲ್ಲದೇ ಸಿಎಂ ಸಿದ್ದರಾಮಯ್ಯನವರು ಕೂಡ ಆಶ್ವಾಸನೆ ಕೊಟ್ಟಿದ್ದರು. ಆದರೆ, ನುಡಿದಂತೆ ನಡೆಯದೆ ಜೈನ ಸಮಾಜವನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.

ದಿಗಂಬರ ಜೈನ ಸಮಾಜದಲ್ಲಿ ಈಗಲೂ ಕೂಡ ಶೇ.40 ರಷ್ಟು ಜನ ಅತ್ಯಂತ ಕಡು ಬಡವರಿದ್ದು ಕೃಷಿ, ಕೂಲಿ ಮಾಡುತ್ತಾರೆ. ಆದರೂ ಕೂಡ ನಮ್ಮ ಸಮಾಜಕ್ಕೆ ನಿಗಮ ಮಂಡಳಿ ಮಾಡದೇ ಅನ್ಯಾಯವೆಸಗಿದ್ದಾರೆ. ಈಗಾಗಲೇ ಹತ್ತಕ್ಕೂ ಹೆಚ್ಚು ಸಮುದಾಯಗಳಿಗೆ ನಿಗಮ ಮಂಡಳಿ ಮಾಡಿದ್ದಾರೆ. ಆದರೆ, ಜೈನ ಸಮಾಜವನ್ನು ನಿರ್ಲಕ್ಷಿಸಿದ್ದಾರೆ. ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು.

ಅರುಣಕುಮಾರ ಯಲಗುದ್ರಿ, ಭಾರತೀಯ ಜೈನ ಸಂಘಟನೆಯ ರಾಜ್ಯ ಸಂಚಾಲಕರು.