ಸ್ಥಿತಿವಂತರು ಸರ್ಕಾರಿ ಯೋಜನೆಗೆ ಕೈಯೊಡ್ಡುವುದು ಸರಿಯಲ್ಲ: ಆರ್.ವಿ. ದೇಶಪಾಂಡೆ

| Published : Oct 14 2025, 01:02 AM IST

ಸ್ಥಿತಿವಂತರು ಸರ್ಕಾರಿ ಯೋಜನೆಗೆ ಕೈಯೊಡ್ಡುವುದು ಸರಿಯಲ್ಲ: ಆರ್.ವಿ. ದೇಶಪಾಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಜಾರಿಗೊಳಿಸಿರುವ ಕಲ್ಯಾಣಕಾರಿ ಯೋಜನೆಗಳ ಲಾಭ ಪಡೆಯಲು ಯಾವತ್ತೂ ಆರ್ಥಿಕವಾಗಿ ಸಂಪನ್ನರಾದವರೂ ಮುಂದಾಗಬಾರದು.

ಹಳಿಯಾಳದಲ್ಲಿ ಇ-ಪೌವತಿ- ಪಿಂಚಣಿ ಆದಾಲತ್‌ನಲ್ಲಿ ಶಾಸಕ

ಕನ್ನಡಪ್ರಭ ವಾರ್ತೆ ಹಳಿಯಾಳ

ಬಡವರು, ಶೋಷಿತರು, ನಿರ್ಗತಿಕರು, ಅಂಗವಿಕಲರ ಹಿತರಕ್ಷಣೆಯ ದೃಷ್ಟಿಯಿಂದ ಸರ್ಕಾರ ಜಾರಿಗೊಳಿಸಿರುವ ಕಲ್ಯಾಣಕಾರಿ ಯೋಜನೆಗಳ ಲಾಭ ಪಡೆಯಲು ಯಾವತ್ತೂ ಆರ್ಥಿಕವಾಗಿ ಸಂಪನ್ನರಾದವರೂ ಮುಂದಾಗಬಾರದು ಎಂದು ಶಾಸಕ ಆರ್.ವಿ. ದೇಶಪಾಂಡೆ ಮನವಿ ಮಾಡಿದ್ದಾರೆ.

ಸೋಮವಾರ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಕಂದಾಯ ಇಲಾಖೆಯಿಂದ ಆಯೋಜಿಸಿದ ಇ-ಪೌವತಿ ಆಂದೋಲನ ಮತ್ತು ಪಿಂಚಣಿ ಆದಾಲತ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸ್ಥಿತಿವಂತರು ಕೈಯೊಡ್ಡಬಾರದು:

ಸಂಧ್ಯಾ ಸುರಕ್ಷಾ, ಇಂದಿರಾಗಾಂಧಿ ವೃದ್ಧಾಪ್ಯ ವೇತನ, ನಿರ್ಗತಿಕ ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ ಮೊದಲಾದ ಯೋಜನಗಳನ್ನು ದುರ್ಬಲರಿಗೆ ಆಸರೆಯಾಗುವ ದಿಸೆಯಲ್ಲಿ ಸರ್ಕಾರ ಜಾರಿಗೊಳಿಸಿದೆ. ಹೀಗಿರುವಾಗ ಇಂತಹ ಯೋಜನೆಗಳಿಗೆ ಸ್ಥಿತಿವಂತರು ಕೈಯೊಡ್ಡುವುದು ಸರಿಯಲ್ಲ, ನಿಮಗೆ ಕೈಮುಗಿದು ಮನವಿ ಮಾಡುತ್ತೇನೆ ಎಂದರು.ಜನಪ್ರತಿನಿಧಿಗಳ ಜವಾಬ್ದಾರಿಯಿದು:

ಇಂದು ಸರ್ಕಾರದ ಪಿಂಚಣಿ ಯೋಜನೆಗಳ ಅನುಷ್ಠಾನ ಹೆಚ್ಚಾಗಿ ಶಾನುಭೋಗರು- ಸರ್ಕಲ್‌ಗಳು ಮತ್ತು ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಅವಲಂಬಿತವಾಗಿದೆ. ಅದಕ್ಕಾಗಿ ಸಾಮಾಜಿಕ ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳು ತಾವು ವಾಸಿಸುವ ಕ್ಷೇತ್ರದ ವ್ಯಾಪ್ತಿಯಲ್ಲಿನ ದುರ್ಬಲರನ್ನು ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರ್ಕಾರ ಯೋಜನೆಗಳ ಲಾಭ ಪಡೆಯುವಂತೆ ಸಹಕರಿಸಬೇಕು ಎಂದರು.

ಜನಪ್ರತಿನಿಧಿಗಳು ಕಾರ್ಯಕರ್ತರು ಚುನಾವಣಾ ಸಮಯದಲ್ಲಿ ಮತಯಾಚನೆ ಮಾಡುವಾಗ ತೋರುವಂತಹ ಕಾಳಜಿ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೂ ತಲುಪಿಸಲು ತೋರಬೇಕು ಎಂದರು.

ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಇ-ಪೌವತಿ ಆಂದೋಲನ ಹಾಗೂ ಪಿಂಚಣಿ ಆದಾಲತ್ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಯೋಜನೆಗಳಲ್ಲಿ ಆಯ್ಕೆಯಾದ ಅರ್ಹ ಪಿಂಚಣಿ ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನು ಶಾಸಕರು ವಿತರಿಸಿ, ಇ-ಕೈವೆಸಿ ಮತ್ತು ವಿವಿಧ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡ ಪಿಂಚಣಿದಾರರಿಂದ ಅರ್ಜಿ ಸ್ವೀಕರಿಸಿದರು.

ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಗ್ರೇಡ-2 ತಹಸೀಲ್ದಾರ ರವೀಂದ್ರ ನೇಸರಗಿ, ಶಿರಸ್ತೆದಾರ ಲಕ್ಷ್ಮೀ ಡೋಂಕಣ್ಣನವರ, ಅಶೋಕ ಚನ್ನಬಸವಣ್ಣನವರ, ಸೆಂಡ್ರಾ ಡಾಯಸ್ ಹಾಗೂ ಸಿಬ್ಬಂದಿ ಇದ್ದರು. ರಮೇಶ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.