ಕೊಪ್ಪಳ: ಈ ಹಿಂದೆ ಮಹಿಳಾ ಮೀಸಲಾತಿಗೆ ಅನುಮೋದನೆ ದೊರೆತಿದ್ದರೂ ಜಾರಿ ಮಾಡದೆ ಈಗ ಮಹಿಳೆಯರ ಭಾವನೆಯೊಂದಿಗೆ ಚೆಲ್ಲಾಟವಾಡುವುದು ಎಷ್ಟು ಸರಿ. ಚುನಾವಣೆ ಮುಂದಿಟ್ಟುಕೊಂಡು ಜಾರಿ ಮಾಡುವ ಯತ್ನ ಮಾಡಿ ಅನುಕಂಪ ಗಿಟ್ಟಿಸಿಕೊಳ್ಳುವ ಯತ್ನ ಫಲಿಸದು ಎಂದು ಕಾಂಗ್ರೆಸ್ ವಕ್ತಾರೆ ಶೈಲಜಾ ಹಿರೇಮಠ ಕಿಡಿಕಾರಿದ್ದಾರೆ.
ಕೊಪ್ಪಳ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಕಾಂಗ್ರೆಸ್ ಯಾವತ್ತಿಗೂ ಮಹಿಳೆಯರ ಪರವಾಗಿಯೇ ಇದೆ.ಚುನಾವಣೆ ಇರುವ ವೇಳೆಯಲ್ಲಿ ವಿಶೇಷ ಅಧಿವೇಶನ ಕರೆದು,ಮಹಿಳಾ ಮೀಸಲಾತಿ ಮಂಡನೆ ಮಾಡಿ, ಅದಕ್ಕೆ ಸೋಲಾಗಿದ್ದನ್ನೇ ಚುನಾವಣೆಯಲ್ಲಿ ಪ್ರಚಾರ ಮಾಡುವುದು ಎಷ್ಟರಮಟ್ಟಿಗೆ ಸರಿ.ಸೋಲಾಗಿದ್ದಕ್ಕೆ ನೋವು ಇರಬೇಕಾಗಿತ್ತು. ಆದರೆ, ಅದನ್ನು ರಾಜಕೀಯ ದಾಳ ಮಾಡಿಕೊಂಡು ಮಹಿಳೆಯರ ಮತ ಪಡೆಯಲು ಯತ್ನಿಸಲಾಗುತ್ತಿದೆ. ಅಷ್ಟಕ್ಕೂ 2023ರಲ್ಲಿಯೇ ಮಹಿಳಾ ಮಹಿಳಾ ಮೀಸಲಾತಿಗೆ ಅನುಮೋದನೆ ಪಡೆಯಲಾಗಿದೆ. ಇರುವ 543 ಸ್ಥಾನಗಳಿಗೆ ಮೀಸಲಾತಿ ಜಾರಿ ಮಾಡಬಹುದಿತ್ತು. ಆದರೆ, 2030ರ ವೇಳೆಗೆ ಜಾರಿ ಮಾಡುವ ಮಾತಗಳನ್ನಾಡಿದ್ದಾರೆ. ಹೀಗೆ, ಜನರ ಧಿಕ್ಕು ತಪ್ಪಿಸುವ ಪ್ರಧಾನಿ ನರೇಂದ್ರ ಮೋದಿ ಈಗ ನಾರಿ ವಂದನ್ ಎನ್ನುವ ಮಸೂದೆ ತಂದು,ಅದಕ್ಕೆ ಸೋಲಾಗಿದ್ದು, ಕಾಂಗ್ರೆಸ್ ಮಹಿಳಾ ವಿರೋಧಿ ನೀತಿ ಎಂದೆಲ್ಲ ರಾಜಕೀಯ ಭಾಷಣ ಮಾಡುತ್ತಿದ್ದಾರೆಯೇ ಹೊರತು, ಅವರಿಗೆ ನಿಜವಾಗಿಯೂ ಮಹಿಳಾ ಮೀಸಲಾತಿಯ ಬಗ್ಗೆ ಕಾಳಜಿ ಇಲ್ಲ ಎಂದರು.
ಕೇವಲ ಮಹಿಳಾ ಮೀಸಲಾತಿ ಜಾರಿ ಮಾಡುವುದಕ್ಕೆ ಅವಕಾಶ ಇದ್ದರೂ ಮಾಡದೆ ಕ್ಷೇತ್ರ ಮರು ವಿಂಗಡನೆ ಅದರೊಟ್ಟಿಗೆ ಸೇರಿಸಿದ್ದಾರೆ. ಈ ಮೂಲಕ ದಕ್ಷಿಣ ರಾಜ್ಯಗಳನ್ನು ಹತ್ತಿಕ್ಕುವ ಷಡ್ಯಂತ್ರ ರೂಪಿಸಿದ್ದಾರೆ. ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ವಿಂಗಡಣೆ ಮಾಡಿ,ಉತ್ತರ ಭಾರತದವರೇ ಹೆಚ್ಚು ಸಂಸದರಾಗುವಂತೆ ಮಾಡುವುದನ್ನು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಮಾಡುವುದನ್ನು ಬಿಟ್ಟು,ಮೊದಲು ಮಹಿಳೆಯರಿಗೆ ಗೌರವ ನೀಡುವ,ಅವರ ಪರವಾಗಿ ಕಾನೂನು ಜಾರಿ ಮಾಡುವ ನಿಜವಾದ ಕಾಳಜಿ ತೋರಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಗೊಂಡಬಾಳ,ರಾಜ್ಯ ಉಪಾಧ್ಯಕ್ಷೆ ಕಿಶೋರಿ ಬೂದನೂರು, ಪಕ್ಷದ ಗಂಗಮ್ಮ,ಯಶೋಧಾ ಮುರಡಿ, ಪದ್ಮಾ ಕಂಬಳಿ, ಶಿಲ್ಪಾ ಗಾಳಿ ಇದ್ದರು.