ಕೊಪ್ಪಳ: ದುಡಿಯುವ ಕೈಗಳಿಗೆ ಕೆಲಸ ನೀಡುವ ಉದ್ಯೋಗ ಖಾತ್ರಿ ಯೋಜನೆ ಜಿಲ್ಲೆಯಲ್ಲಿ ಪ್ರಾರಂಭಿಸುವ ಮೂಲಕ ಕಾರ್ಮಿಕರಿಗೆ ಕೆಲಸ ನೀಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ್ ಗುಳಗಣ್ಣವರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೇಸಿಗೆ ಸಂದರ್ಭದಲ್ಲಿ ಜಿಲ್ಲೆಯ್ಲಲಿ ಪ್ರಾರಂಭವಾಗಬೇಕಿದ್ದ ಉದ್ಯೋಗ ಖಾತ್ರಿ ಯೋಜನೆ ಈವರೆಗೂ ಪ್ರಾರಂಭವಾಗದಿರುವುದು ಖೇದಕರ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಜಿ. ರಾಮ್ ಜಿ ಯೋಜನೆ ಅನುಷ್ಠಾನಗೊಳ್ಳುವವರೆಗೂ ಯಥಾಸ್ಥಿತಿ ಮನರೇಗಾ ಯೋಜನೆ ಜಾರಿಯಲ್ಲಿಡುವಂತೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಆದರೂ ಸಹ ಕೊಪ್ಪಳ ಜಿಲ್ಲೆಯಲ್ಲಿ ಜನರು ಗುಳೆ ಹೋಗುವದು ಪ್ರಾರಂಭವಾದರೂ ಇನ್ನು ಕೂಡ ಜಿಪಂದಿಂದ ಮನರೇಗಾ ಯೋಜನೆಗೆ ಚಾಲನೆ ದೊರಕಿಲ್ಲ. ಉದ್ಯೋಗ ಬೇಡಿ ಪಂಚಾಯತಿಗಳಿಗೆ ಜನ ಫಾರಂ 6 ಸಲ್ಲಿಸಲು ಹೋದರೆ ಗ್ರಾಪಂಗಳಿಂದ ಏನು ಸ್ಪಂದನೆ ಇಲ್ಲ. ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯು ವೇತನ ಪಾವತಿಗೆ ರಾಜ್ಯಕ್ಕೆ ₹17744 ಕೋಟಿ ಬಿಡುಗಡೆ ಮಾಡಿ ಯಾವುದೇ ಕಾರಣಕ್ಕೂ ಯೋಜನೆ ನಿಲ್ಲಬಾರದೆಂದು ಸೂಚಿಸಿದ್ದರೂ ರಾಜ್ಯ ಸರ್ಕಾರ ಇದರ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎಂದು ಗುಳಗಣ್ಣವರ ಆರೋಪಿಸಿದ್ದಾರೆ.ಜಿಲ್ಲೆಯಲ್ಲಿ ಈ ತಿಂಗಳು 10 ಲಕ್ಷ ಮಾನವ ದಿನಗಳ ಟಾರ್ಗೆಟ್ ಇದ್ದರೂ ಕೂಡ ಇಲ್ಲಿಯವರೆಗೂ 1 ಲಕ್ಷ ಮಾನವ ದಿನಗಳು ಆಗಿಲ್ಲ. ಇದೆ ಪರಿಸ್ಥಿತಿ ಜಿಲ್ಲೆಯಲ್ಲಿ ಮುಂದುವರೆದರೆ ಜನ ಗುಳೆ ಹೋಗುತ್ತಾರೆ. ಹೀಗಾಗಿ ಎಚ್ಚೆತ್ತುಕೊಂಡು ಜಿಲ್ಲಾಡಳಿತ ಆದಷ್ಟು ಬೇಗನೇ ಮನರೇಗಾ ಯೋಜನೆ ಪ್ರಾರಂಭಿಸಬೇಕು. ಇಲ್ಲವಾದಲ್ಲಿ ಕೂಲಿ ಕಾರ್ಮಿಕರೊಡಗೂಡಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.