ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಸಭಾಂಗಣದಲ್ಲಿ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ 80ನೇ ಜಯಂತ್ಯುತ್ಸವ ಹಾಗೂ 12ನೇ ವರ್ಷದ ಸಂಸ್ಮರಣಾ ಮಹೋತ್ಸವದ ಪ್ರಯುಕ್ತ ಶುಕ್ರವಾರ ಚುಂಚಾದ್ರಿ ಮಾತೃ ಸಂಗಮ ಕಾರ್ಯಕ್ರಮ ನಡೆಯಿತು.ಸಮಾರಂಭದ ಸಾನಿಧ್ಯ ವಹಿಸಿದ್ದ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಆಶೀರ್ವಚನ ನೀಡಿದರು.
ಶ್ರೀಗಳ ಜೊತೆಗೂಡಿ ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆರತಿ ಕೃಷ್ಣ, ಮಾಜಿ ಶಾಸಕಿ ಹಾಗೂ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಡಿಕೆಎಸ್ ಹೆಗ್ಡೆ ಮಾತನಾಡಿದರು.ಇದೇ ವೇಳೆ ಸಮಾಜ ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಂಡ್ಯದ ಡಾ.ಮೀರಾಶಿವಲಿಂಗಯ್ಯ, ಬೆಂಗಳೂರಿನ ಮಹಾದೇವಮ್ಮ ಕೃಷ್ಣಯ್ಯ, ವೈದ್ಯಕೀಯ ಕ್ಷೇತ್ರದ ಸಾಧಕಿ ತುಮಕೂರಿನ ಡಾ.ಹನುಮಕ್ಕ, ರಾಜಕೀಯ ಕ್ಷೇತ್ರದ ಸಾಧಕಿ ಶಿವಮೊಗ್ಗದ ಶಾರದಾ ಅಪ್ಪಾಜಿಗೌಡ, ಉದ್ಯಮ ಕ್ಷೇತ್ರದ ಸಾಧಕಿ ತುಮಕೂರಿನ ಲೀಲಾ ರಾಜೇಶಗೌಡ, ಕ್ರೀಡಾ ಕ್ಷೇತ್ರದ ಸಾಧಕಿ ರಾಮನಗರ ಜಿಲ್ಲೆಯ ಎನ್.ಶ್ವೇತ, ಬೆಂಗಳೂರಿನ ಡಾ. ಸುಚಿ ಪುಟ್ಟರಾಜು, ಸಾಹಿತ್ಯ ಕ್ಷೇತ್ರದ ಸಾಧಕಿ ಕೊಗಡು ಜಿಲ್ಲೆಯ ಜಲಕಾಳಪ್ಪ, ವ್ಯವಸಾಯ ಕ್ಷೇತ್ರದ ಸಾಧಕಿ ಕೋಲಾರ ಜಿಲ್ಲೆಯ ಎ.ವಿ.ರತ್ನಮ್ಮ, ಸಾಂಸ್ಕೃತಿಕ ಕ್ಷೇತ್ರದ ಸಾಧಕಿ ಚಿಕ್ಕಮಗಳೂರಿನ ಜ್ಯೋತಿ ಪ್ರಕಾಶ್, ಶೈಕ್ಷಣಿಕ ಕ್ಷೇತ್ರದ ಸಾಧಕಿ ಚಿತ್ರದುರ್ಗ ಜಿಲ್ಲೆಯ ಲಿಂಗಮ್ಮ, ಮಂಗಳಮುಖಿ ಸಮಾಜ ಸೇವಾ ಕ್ಷೇತ್ರದಿಂದ ಟಿ.ಕೆ. ಸುಹಾಸಿನಿ, ಮಾಧ್ಯಮ ಕ್ಷೇತ್ರದಿಂದ ಹಾಸನ ಜಿಲ್ಲೆಯ ಭಾನುಮತಿ ದೇವರಾಜ್ ಹಾಗೂ ಸಾಹಿತ್ಯ ಕ್ಷೇತ್ರದ ಸಾಧಕಿ ಚಿಕ್ಕಬಳ್ಳಾಪುರ ಜಿಲ್ಲೆಯ ಡಾ.ಕೆ.ಪ್ರಭಾ ನಾರಾಯಣಗೌಡ ಅವರಿಗೆ ಭೈರವಿ ಪ್ರಶಸ್ತಿ ನೀಡಿ ಶ್ರೀಗಳು ಗೌರವಿಸಿದರು.
ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಶ್ರೀಮಠದ ಚೈತನ್ಯನಾಥಸ್ವಾಮೀಜಿ, ತುಮಕೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕಿ ಭಾರತಿ ಶ್ರೀನಿವಾಸ್, ವಾಣಿಜ್ಯ ಮತ್ತು ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತೆ ಕೆ.ಆರ್. ನಂದಿನಿ, ಸಾಮಾಜಿಕ ಹೋರಾಟಗಾರ್ತಿ ಭವ್ಯ ನರಸಿಂಹ ಸೇರಿದಂತೆ ಸಹಸ್ರಾರು ಮಂದಿ ಮಹಿಳೆಯರು ಇದ್ದರು.