ಜೆಡಿಎಸ್ ಮುಖಂಡ ಅಸ್ಗರ್‌ ಮೇಲೆ ತಲ್ವಾರ್‌ನಿಂದ ಮಾರಕ ದಾಳಿ

| Published : Nov 12 2025, 02:15 AM IST

ಸಾರಾಂಶ

ಟಿಪ್ಪು ಜಯಂತಿಯಲ್ಲಿ ಭಾಗವಹಿಸಿದ್ದ ಜೆಡಿಎಸ್ ಮುಖಂಡ, ಸಾಮಾಜಿಕ ಹೋರಾಟಗಾರನ ಮೇಲೆ ಸೋಮವಾರ ಮೂವರು ಮುಸುಕುಧಾರಿಗಳು ರಾತ್ರೋರಾತ್ರಿ ತಲ್ವಾರ್, ಪಂಚ್‌, ಮಚ್ಚುಗಳಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಗರದ ಬಾಷಾ ನಗರದಲ್ಲಿ ನಡೆದಿದೆ.

- ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದ ವೇಳೆ ಮೂವರು ಮುಸುಕುಧಾರಿಗಳಿಂದ ಹಲ್ಲೆ । ರಾಜಿ ಪಂಚಾಯಿತಿ ವಿಚಾರ ಕಾರಣವೇ? - ಮೂವರು ದುಷ್ಕರ್ಮಿಗಳು ತಲ್ವಾರ್, ಪಂಚ್‌ಗಳು, ಮಚ್ಚಿನಿಂದ ಮಾರಣಾಂತಿಕ ದಾಳಿ । ತೀವ್ರ ಆತಂಕದಲ್ಲಿ ಅಸ್ಗರ್-ಕುಟುಂಬ

- - -

- ಗಂಭೀರ ಗಾಯಗೊಂಡಿದ್ದ ಗಾಯಾಳು ಜಿಲ್ಲಾ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲು

- ಅಸ್ಗರ್‌ಗೂ ಖಾಲಿದ್ ಪೈಲ್ವಾನ್ ಬೆದರಿಕೆ ಬಗ್ಗೆ ದೂರು ನೀಡಿದ್ದರೂ ಪೊಲೀಸರಿಂದ ಕ್ರಮವಿಲ್ಲ: ಕುಟುಂಬಸ್ಥರ ಆರೋಪ

- ಸಾಮಾಜಿಕ ಹೋರಾಟಗಾರ ಅಸ್ಗರ್ ಮೇಲೆ ದಾಳಿ ಮಾಡಿರುವ ದುಷ್ಕರ್ಮಿಗಳಿಗಾಗಿ ಪೊಲೀಸರು ತೀವ್ರ ಶೋಧ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಟಿಪ್ಪು ಜಯಂತಿಯಲ್ಲಿ ಭಾಗವಹಿಸಿದ್ದ ಜೆಡಿಎಸ್ ಮುಖಂಡ, ಸಾಮಾಜಿಕ ಹೋರಾಟಗಾರನ ಮೇಲೆ ಸೋಮವಾರ ಮೂವರು ಮುಸುಕುಧಾರಿಗಳು ರಾತ್ರೋರಾತ್ರಿ ತಲ್ವಾರ್, ಪಂಚ್‌, ಮಚ್ಚುಗಳಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಗರದ ಬಾಷಾ ನಗರದಲ್ಲಿ ನಡೆದಿದೆ.

ಬಾಷಾ ನಗರ ವಾಸಿ, ಜೆಡಿಎಸ್ ಮುಖಂಡ ಟಿ.ಅಸ್ಗರ್ ಮಾರಣಾಂತಿಕ ದಾಳಿಗೊಳಗಾದ ವ್ಯಕ್ತಿ. ಅದೇ ಬಾಷಾ ನಗರದ 2ನೇ ಮುಖ್ಯರಸ್ತೆ, 5ನೇ ಕ್ರಾಸ್‌ನಲ್ಲಿ ಸೋಮವಾರ ರಾತ್ರಿ ಟಿಪ್ಪು ಜಯಂತಿಯಲ್ಲಿ ಅಸ್ಗರ್ ಭಾಗವಹಿಸಿದ್ದರು. ಈ ವೇಳೆ ಮೂವರು ದುಷ್ಕರ್ಮಿಗಳು ಹೊಂಚು ಹಾಕಿ, ಸಂಚು ಮಾಡಿ, ದಾಳಿ ಮಾಡಿದ್ದಾರೆ ಎನ್ನಲಾಗಿದೆ.

ರಾಜಿ ಪಂಚಾಯಿತಿ ವಿಚಾರವಾಗಿ ಅಸ್ಗರ್ ಮೇಲೆ ಮೂವರು ದುಷ್ಕರ್ಮಿಗಳ ತಂಡ ದಾಳಿ ನಡೆಸಿದೆ ಎನ್ನಲಾಗಿದೆ. ಇದೇ ವಿಚಾರವಾಗಿ ಅಸ್ಗರ್ ಹಾಗೂ ಖಾಲಿದ್ ಪೈಲ್ವಾನ್ ಎಂಬ ವ್ಯಕ್ತಿ ಮಧ್ಯೆ ಗಲಾಟೆಯೂ ಆಗಿತ್ತು. ಸಾಮಾಜಿಕ ಜಾಲತಾಣದಲ್ಲೂ ಅಸ್ಗರ್‌ಗೆ ಖಾಲಿದ್ ಪೈಲ್ವಾನ್ ಬೆದರಿಕೆ ಹಾಕಿದ್ದು, ಈ ಬಗ್ಗೆ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸ್ಗರ್ ಕುಟುಂಬಸ್ಥರು ದೂರಿದ್ದಾರೆ.

ಬಾಷಾ ನಗರದಲ್ಲಿ ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದ ಅಸ್ಗರ್‌ಗೆ ತನ್ನ ಮೇಲೆ ದಾಳಿ ನಡೆಯುವ ಯಾವುದೇ ಮುನ್ಸೂಚನೆ ಸಹ ಇರಲಿಲ್ಲ. ಆದರೆ, ಮೂವರು ದುಷ್ಕರ್ಮಿಗಳು ಕೈಯಲ್ಲಿ ತಲ್ವಾರ್, ಪಂಚ್‌ಗಳು, ಮಚ್ಚನ್ನು ಹಿಡಿದು ಮಾರಣಾಂತಿಕ ದಾಳಿ ಮಾಡಿದ್ದು, ದಿಢೀರ್ ಘಟನೆಯಿಂದಾಗಿ ಅಸ್ಗರ್ ಭಯಭೀತರಾಗಿದ್ದಾರೆ. ಸ್ಥಳದಲ್ಲಿದ್ದವರು ಅಸ್ಗರ್ ರಕ್ಷಣೆಗೆ ಬರುವಷ್ಟರಲ್ಲೇ ಮೂವರೂ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ತೀವ್ರ ಗಾಯಗೊಂಡಿದ್ದ ಅಸ್ಗರ್‌ ಅವರನ್ನು ತಕ್ಷಣವೇ ವಾಹನವೊಂದರಲ್ಲಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಅಸ್ಗರ್ ಕಿವಿ ಕಿತ್ತು ಬರುವಂತೆ ಮಾರಕಾಸ್ತ್ರದಿಂದ ದಾಳಿ ನಡೆಸಲಾಗಿದೆ. ಅಸ್ಗರ್‌ ತೀವ್ರ ಭಯಭೀತರಾಗಿದ್ದು, ಕುಟುಂಬಸ್ಥರು, ಸ್ನೇಹಿತರು, ಬಂಧುಗಳು ಧೈರ್ಯದ ಮಾತು ಹೇಳುತ್ತಿದ್ದುದು ಕಂಡುಬಂದಿತು. ಜಿಲ್ಲಾಸ್ಪತ್ರೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅಸ್ಗರ್‌ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆ ಬಗ್ಗೆ ಆಜಾದ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಅಜ್ಗರ್ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೆಡಿಎಸ್ ಮುಖಂಡ ಅಸ್ಗರ್ ಮೇಲೆ ದಾಳಿ ಮಾಡಿರುವ ದುಷ್ಕರ್ಮಿಗಳಿಗಾಗಿ ಪೊಲೀಸರು ತೀವ್ರ ಶೋಧ ಕೈಗೊಂಡಿದ್ದಾರೆ.

- - -

-10ಕೆಡಿವಿಜಿ11, 12, 13, 14, 15.ಜೆಪಿಜಿ:

ದಾಳಿಗೊಳಗಾದ ಜೆಡಿಎಸ್ ಮುಖಂಡ ಟಿ.ಅಸ್ಗರ್.