ಸಾರಾಂಶ
ಲಕ್ಷ್ಮೇಶ್ವರ: ಸಮೀಪದ ಯಲ್ಲಾಪುರ ತಾಂಡದ ಗ್ರಾಮಸ್ಥರು ಬಗರ್ಹುಕುಂ ಜಮೀನನ್ನು ಸಾಗುವಳಿ ಮಾಡದಂತೆ ತಡೆದಿರುವುದನ್ನು ಖಂಡಿಸಿ ಬಂಜಾರ ಸಮಾಜದ ನೂರಾರು ರೈತರು ಪಟ್ಟಣದ ತಹಸೀಲ್ದಾರ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ಯಲ್ಲಾಪುರ ಗ್ರಾಮದಲ್ಲಿ ನೂರಾರು ವರ್ಷಗಳಿಂದ ಬಡ ರೈತರು ಉಳುಮೆ ಮಾಡುತ್ತಿದ್ದಾರೆ. ಕೆಲವು ಕಿಡಿಗೇಡಿಗಳು ರೈತರಿಗೆ ಪದೇ ಪದೇ ತೊಂದರೆ ಮಾಡುತ್ತಿದ್ದಾರೆ. ಈ ಕುರಿತು ಇಲಾಖೆಯ ಗಮನಕ್ಕೆ ತರಲಾಗಿದೆ. ಆದರೂ ಯಾವುದೇ ರೀತಿಯಲ್ಲಿ ಕ್ರಮಕೈಗೊಂಡಿಲ್ಲ. ಲಕ್ಷ್ಮೇಶ್ವರ ತಹಸೀಲ್ದಾರ್ ರೈತರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಬಗರ್ ಹುಕುಂ ಜಮೀನು ಸಾಗುವಳಿ ಮಾಡದಂತೆ ರೈತರಿಗೆ ತೊಂದರೆ ಕೊಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.
ಈ ವೇಳೆ ದೀಪಕ ಲಮಾಣಿ, ವೈ.ಎಸ್. ಪೂಜಾರ, ಪುಂಡಲೀಕ ಲಮಾಣಿ, ಓಂಕಾರಪ್ಪ ಲಮಾಣಿ, ಡಾಕಪ್ಪ ಲಮಾಣಿ, ಲಿಂಬಣ್ಣ ಲಮಾಣಿ, ಲಕ್ಷ್ಮಣ ಲಮಾಣಿ, ರಾಮಚಂದ್ರಪ್ಪ ಲಮಾಣಿ, ಚಂದ್ರಪ್ಪ ಲಮಾಣಿ, ನಾಗಪ್ಪ ಲಮಾಣಿ, ಮಲ್ಲೇಶ ಲಮಾಣಿ, ಗಂಗವ್ವ ಲಮಾಣಿ, ಶಾಂತವ್ವ ಲಮಾಣಿ, ದ್ಯಾಮಕ್ಕ ಲಮಾಣಿ, ಶೀಲವ್ವ ಲಮಾಣಿ, ಶಿವಕ್ಕ ಲಮಾಣಿ, ಸುನೀಲ ಲಮಾಣಿ, ಮಾಹಾದೇವಪ್ಪ ಲಮಾಣಿ, ಕಿರಣ ಲಮಾಣಿ, ಸೋಮಣ್ಣ ಲಮಾಣಿ, ಮಹಾಂತೇಶ ಇಟಗಿ ಹಾಜರಿದ್ದರು.ತಪ್ಪುಕಲ್ಪನೆಯಾಗಿದೆ: ಬಗರ್ಹುಕುಂ ವಿವಾದ ಕೋರ್ಟ್ನಲ್ಲಿದೆ. ಹೀಗಾಗಿ ನಾವು ಯಾವುದೇ ಆದೇಶ ಹೊರಡಿಸಲು ಬರುವುದಿಲ್ಲ. ಗೋಮಾಳ ಜಮೀನಿನಲ್ಲಿ ನೂತನವಾಗಿ ಒತ್ತುವರಿ ಮಾಡಿ ಕೃಷಿ ಚಟುವಟಿಕೆ ಮಾಡುತ್ತಿರುವುವರಿಗೆ ಸರ್ಕಾರ ಅವಕಾಶ ನೀಡಿಲ್ಲ. ನಾವು ಯಾವುದೇ ರೈತರಿಗೆ ನೋಟಿಸ್ ನೀಡಿಲ್ಲ. ತಪ್ಪುಕಲ್ಪನೆಯಿಂದ ಈ ಘಟನೆ ನಡೆದಿದೆ ಎಂದು ಲಕ್ಷ್ಮೇಶ್ವರ ತಹಸೀಲ್ದಾರ್ ವಾಸುದೇವ ಸ್ವಾಮಿ ಹೇಳಿದರು.