ಈ ಬೃಹತ್ ಉದ್ಯೋಗ ಮೇಳದಲ್ಲಿ 25ಕ್ಕೂ ಅಧಿಕ ಕಂಪನಿ, ಸಂಸ್ಥೆಗಳು ಭಾಗಿಯಾಗುತ್ತಿದ್ದು, ಆರು ಸಾವಿರ ಹುದ್ದೆ ಭರ್ತಿ ಭರವಸೆ ಇದೆ
ಕುಕನೂರು: ತಾಲೂಕಿನ ತಳಕಲ್ಲದಲ್ಲಿ 22.67 ಎಕರೆಯಲ್ಲಿ ಮೊದಲ ಹಂತದಲ್ಲಿ ₹ 107ಕೋಟಿ, ಎರಡನೇ ಹಂತದಲ್ಲಿ ₹ 15ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ಜ. 25ರಂದು ಪ್ರಥಮ ಬಾರಿಗೆ ಬೃಹತ್ ಉದ್ಯೋಗ ಮೇಳ ಜರುಗಲಿದೆ.
ಈ ಬೃಹತ್ ಉದ್ಯೋಗ ಮೇಳದಲ್ಲಿ 25ಕ್ಕೂ ಅಧಿಕ ಕಂಪನಿ, ಸಂಸ್ಥೆಗಳು ಭಾಗಿಯಾಗುತ್ತಿದ್ದು, ಆರು ಸಾವಿರ ಹುದ್ದೆ ಭರ್ತಿ ಭರವಸೆ ಇದೆ. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಪುತ್ರಿ ಮಮತಾ ರಾಯರಡ್ಡಿ ರಾಷ್ಟ್ರೀಯ ಮಟ್ಟದಲ್ಲಿ ನಾನಾ ಸಂಸ್ಥೆಯವರ ಸಹಭಾಗಿತ್ವದಲ್ಲಿ 1ಎಂ1ಬಿ ಗ್ರೀನ್ ಸ್ಕೀಲ್ ಫೌಂಡೇಶನ್ ಹಾಗೂ ವಿಟಿಯು ಸ್ನಾತಕೋತ್ತರ ಹಾಗೂ ಕೌಶಲ್ಯ ಅಭಿವೃದ್ಧಿ ಕೇಂದ್ರ ಸಹಭಾಗಿತ್ವದಲ್ಲಿ ಉದ್ಯೋಗ ಮೇಳ ಸಂಯೋಜನೆ ಮಾಡಿದ್ದಾರೆ. ಇದರಿಂದ 6 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ.ರಾಯರಡ್ಡಿ ಕಳಕಳಿ: ೨೦೧೭ ಆಗಸ್ಟನಲ್ಲಿ ಆಗಿನ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರಡ್ಡಿ ತಾಲೂಕಿನ ತಳಕಲ್ಲಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಕೇಂದ್ರ ಮತ್ತು ವೃತ್ತಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಮಂಜೂರು ಮಾಡಿಸಿದರು. ರಾಜ್ಯದಲ್ಲಿ ಸರ್ಕಾರದ ಕೇವಲ ಮೂರು ಕೌಶಲ್ಯ ತರಬೇತಿ ಕೇಂದ್ರಗಳಿದ್ದು, ತಳಕಲ್ಲಿನಲ್ಲಿ ನಿರ್ಮಾಣವಾಗಿರುವ ಕೌಶಲ್ಯ ಅಭಿವೃದ್ಧಿ ಕೇಂದ್ರ ರಾಜ್ಯದ ಬಹುದೊಡ್ಡ ಕೌಶಲ್ಯ ತರಬೇತಿ ಕೇಂದ್ರ ಆಗಿದೆ. ರಾಜ್ಯದ ಮೈಸೂರು, ದಾಂಡೇಲಿ ಬಿಟ್ಟರೆ ತಳಕಲ್ಲಿನಲ್ಲಿ ಕೌಶಲ್ಯ ಕೇಂದ್ರವಿದೆ. ವರ್ಷಕ್ಕೆ ೬ ಸಾವಿರ ಅಭ್ಯರ್ಥಿಗಳಿಗೆ ವಸತಿ ಸಹಿತ ಕೌಶಲ್ಯ ನೀಡುವ ಸಾಮರ್ಥ್ಯ ಹೊಂದಿದೆ. ಸದ್ಯ ಹತ್ತಕ್ಕೂ ಹೆಚ್ಚು ವಿವಿಧ ಟ್ರೇಡ್ಗಳಿಗೆ ಕೌಶಲ್ಯ ತರಗತಿ ಆರಂಭವಾಗಿವೆ.
2023ರಲ್ಲಿ ಪಿಜಿ ಪ್ರಾರಂಭ: ಕೌಶಲ್ಯ ಕೇಂದ್ರ ಜತೆಗೆ ಸರ್ಕಾರಿ ಎಂ.ಟೆಕ್ (ಮಾಸ್ಟರ್ ಇನ್ ಟೆಕ್ನಾಲಜಿ ಇಂಜಿನಿಯರಿಂಗ್) ಹಾಗೂ ಎಂಬಿಎ ಸ್ನಾತಕೋತ್ತರ ತರಗತಿಗಳ ಸಹ ಆರಂಭವಾದವು.ಈಗಾಗಲೇ ಕೌಶಲ್ಯ ಅಭಿವೃದ್ಧಿ ಕೇಂದ್ರದ ಜತೆಗೂಡಿ ಮೇದಿನ ಟೆಕ್ನಾಲಜಿ, ಏಕಸ್ ಕಂಪನಿ, ರಾಜ್ಯ, ರಾಷ್ಟ್ರದ ಮಟ್ಟದ ಕೌಶಲ್ಯಾಧಾರಿತ ಯೋಜನೆಗಳ ತರಬೇತಿಗಳು, ಉಪನ್ಯಾಸಕರಿಗೆ ಫೇಕಲ್ಟಿ ಡೆವಲಪಮೆಂಟ್ ತರಬೇತಿ, ಪಿಎಂ ವಿಶ್ವಕರ್ಮ, ಸ್ವಾತಂತ್ರ್ಯ ಅಮೃತಮಹೋತ್ಸವ, ಅಲ್ಪಸಂಖ್ಯಾತರ ಯೋಜನೆಗಳ ತರಬೇತಿಗಳು,
1ಎಂ1ಬಿ ಗ್ರೀನ್ ಸ್ಕೀಲ್ ಸಹಭಾಗಿತ್ವ: ತಳಕಲ್ಲ ಕೌಶಲ್ಯ ಕೇಂದ್ರದಲ್ಲಿ ಈಗಾಗಲೇ 1ಎಂ1ಬಿ ಗ್ರೀನ್ ಸ್ಕೀಲ್ ಫೌಂಡೇಶನ್ ಸಹಭಾಗಿತ್ವದಲ್ಲಿ ಯಲಬುರ್ಗಾ ಕ್ಷೇತ್ರದ ಎಲ್ಲ ಪಿಯುಸಿ ವಿದ್ಯಾರ್ಥಿಗಳಿಗೆ ಗ್ರೀನ್ ವೆಹಿಕಲ್ ಆಧಾರಿತ ಸೋಲಾರ್, ಎಲೆಕ್ಟ್ರೀಕ್ ವೆಹಿಕಲ್ ಬಗ್ಗೆ ತರಬೇತಿ ಸಹ ಜರುಗಿವೆ. ಅಲ್ಲದೆ ಎಐ ತಂತ್ರಜ್ಞಾನ ಆಧಾರಿತ ತರಬೇತಿ ಸಹ ಜರುಗುತ್ತಿದೆ.ನನ್ನ ಮಗಳು ಮಮತಾ ರಾಷ್ಟ್ರೀಯ ಮಟ್ಟದಲ್ಲಿ ಗ್ರೀನ್ ಸ್ಕಿಲ್ ಫೌಂಡೇಶನ್ ಸಹಭಾಗಿತ್ವದಲ್ಲಿ ಸ್ಥಳೀಯ ಜನರಿಗೆ ಅನುಕೂಲ ಆಗಲಿ ಎಂದು ತಳಕಲ್ಲಿನ ಕೌಶಲ್ಯ ಕೇಂದ್ರದಲ್ಲಿ ಉದ್ಯೋಗ ಮೇಳ ಸಂಯೋಜನೆ ಮಾಡಿದ್ದಾಳೆ. ತಳಕಲ್ಲ ಕೌಶಲ್ಯ ಕೇಂದ್ರದಿಂದ ವರ್ಷಕ್ಕೆ ಆರು ಸಾವಿರ ವಿದ್ಯಾರ್ಥಿಗಳು ಕೌಶಲ್ಯ ಪಡೆದು ಉದ್ಯೋಗದ ಭರವಸೆ ಪಡೆಯಬಹುದಾಗಿದೆ. ಅಲ್ಲದೆ ಕ್ಷೇತ್ರಕ್ಕೆ ಇನ್ನೊಂದು ಭಾನಾಪೂರ ಬಳಿ ₹127 ಕೋಟಿ ವೆಚ್ಚದ ಕೌಶಲ್ಯ ಕೇಂದ್ರ ಮಂಜೂರು ಮಾಡಿಸಿದ್ದೇನೆ. ಅದು ಸಹ ಕ್ಯಾಬಿನೆಟ್ ಅಪ್ರೋವಲ್ ಪಡೆದಿದೆ. ಕೌಶಲ್ಯ ಕೇಂದ್ರಗಳಿಂದ ಜನರಿಗೆ ವೃತ್ತಿ ಬದುಕಿಗೆ ಕೌಶಲ್ಯದಿಂದ ಅನುಕೂಲ ಆಗಲಿವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.
ತಳಕಲ್ಲ ಕೌಶಲ್ಯ ಕೇಂದ್ರದಿಂದ ಸಾವಿರಾರು ವಿದ್ಯಾರ್ಥಿಗಳಿಗೆ ವಸತಿ ಸಹಿತ ಉದ್ಯೋಗಾಧಾರಿತ ತರಬೇತಿ ಸಿಗುತ್ತಿದೆ. ಜ.25ರಂದು ಜರುಗುವ ಉದ್ಯೋಗ ಮೇಳ ಕೌಶಲ್ಯ ಕೇಂದ್ರದಲ್ಲಿ ಪ್ರಥಮ ಉದ್ಯೋಗ ಮೇಳ ಆಗಿದ್ದು, ಈ ಭಾಗದ ಜನರ ಉದ್ಯೋಗಕ್ಕೆ ಅನುಕೂಲ ಆಗಲಿದೆ. ಅದಕ್ಕೆ ಪೂರಕವಾದ ಕೌಶಲ್ಯ ಸಹ ನಮ್ಮ ಕೌಶಲ್ಯ ಕೇಂದ್ರ ನೀಡುತ್ತಿದೆ ಎಂದು ಉಪನಿರ್ದೇಶಕರು, ವಿಟಿಯೂ ಸ್ನಾತಕೋತ್ತರ ಅಧ್ಯಯನ ಹಾಗೂ ಕೌಶಲ್ಯಾಭಿವೃದ್ಧಿ ಕೇಂದ್ರ ತಳಕಲ್ಲ ಬಸವರಾಜಪ್ಪ ವೈ.ಎಚ್ ತಿಳಿಸಿದ್ದಾರೆ.