ಭಟ್ಕಳ: ಪಟ್ಟಣದ ವಡೇರ ಮಠದಲ್ಲಿ ಅಧಿಕ ಜ್ಯೇಷ್ಠ ಮಾಸದಲ್ಲಿ ಶನಿವಾರ ಶ್ರೀಮಠದ ಸ್ಥಾಪನೆಯ ೫೫೦ನೇ ವರ್ಷದ ಸ್ಮರಣಾರ್ಥ ಗೋಕರ್ಣ ಪರ್ತಗಾಳಿ ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರಿಂದ ಶ್ರೀ ರುಕ್ಮಿಣಿ ಸತ್ಯಭಾಮಾ ಸಹಿತ ಶ್ರೀ ಗೋಪಾಲಕೃಷ್ಣ ದೇವರಿಗೆ ಶತಕಲಶಾಭಿಷೇಕ ನೆರವೇರಿತು.

ಈ ಸಂದರ್ಭದಲ್ಲಿ ಶ್ರೀಗಳ ಸಾನ್ನಿಧ್ಯದಲ್ಲಿ ವೆ.ಮೂ. ಕಿಶೋರ ಭಟ್ ನೇತೃತ್ವದಲ್ಲಿ ಶನಿವಾರ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ವಿಧಿ-ವಿಧಾನ ನೆರವೇರಿದರು. ಮುರಳಿ ಭಟ್ ಸಹಕರಿಸಿದರು. ಆದಿಗುರು ಶ್ರೀಮದ್ ನಾರಾಯಣ ತೀರ್ಥ ಸ್ವಾಮೀಜಿ ಅವರಿಂದ ಸ್ಥಾಪನೆಗೊಂಡ ಶ್ರೀಮಠದ ೫೫೦ನೇ ವರ್ಷದ ಸವಿನೆನಪಿನ ಅಂಗವಾಗಿ ಆಯೋಜಿಸಲಾದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಅಧಿಕ ಮಾಸದ ವಿಶೇಷ ವಾಸ್ತವ್ಯದ ಹಿನ್ನೆಲೆಯಲ್ಲಿ ಊರು ಹಾಗೂ ಪರ ಊರಿನ ಸಮಾಜ ಬಾಂಧವರು ಶ್ರೀಗಳ ಭೇಟಿ ಮಾಡಿ ಆಶೀರ್ವಾದ ಪಡೆದರು. ಇದೇ ವೇಳೆ ಶ್ರೀಮಠದ ಅನೇಕ ಭಕ್ತರು ಭಿಕ್ಷಾ ಸೇವೆ ನಡೆಸಿದರು. ಅಳ್ವೆಕೋಡಿ ದುರ್ಗಾ ಪರಮೇಶ್ವರಿ ದೇವಸ್ಥಾನ, ಶಿರಾಲಿ, ಕುಮಟಾ ಹಾಗೂ ನಾಡಿನ ವಿವಿಧೆಡೆಯಿಂದ ದೇವಸ್ಥಾನಗಳ ಆಡಳಿತ ಮಂಡಳಿ ಪಧಾಧಿಕಾರಿಗಳು ಶ್ರೀಗಳ ಭೇಟಿಯಾಗಿ ಅನುಗ್ರಹ ಮಂತ್ರಾಕ್ಷತೆ ಪಡೆದರು. ಜೂ. ೨ರಿಂದ ಆರಂಭಗೊಂಡ ವೇ.ಮೂ. ರಾಮಕೃಷ್ಣ ಭಟ್ ಅವರಿಂದ ನಡೆಯುತ್ತಿರುವ ಭಾಗವತ ಪ್ರವಚನ ಭಕ್ತರ ಮನಸೂರೆಗೊಳ್ಳುತ್ತಿದ್ದು, ಪ್ರದೀಪ ಜಿ. ಪೈ ಅವರಿಂದ ನಡೆಯುತ್ತಿರುವ ಭಾಗವತ ಸೇವೆಯೂ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ಆಡಳಿತ ಮಂಡಳಿ ಅಧ್ಯಕ್ಷ ನರೇಂದ್ರ ನಾಯಕ, ಜಿಎಸ್‌ಬಿ ಸಮಾಜದ ಅಧ್ಯಕ್ಷ ನಾಗೇಶ ಕಾಮತ, ಜಿಎಸ್‌ಎಸ್ ಅಧ್ಯಕ್ಷ ಗಿರಿಧರ ನಾಯಕ, ಮಹಿಳಾ ಮಂಡಳಿ ಅಧ್ಯಕ್ಷೆ ಸುನೀತಾ ಪೈ ಹಾಗೂ ಸಮಾಜದ ಮುಖಂಡರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.