ಹಾವೇರಿ: ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ವಿನಾಯಕ ನಗರದಲ್ಲಿರುವ ಸಾಹಿತಿ ದಿ.ಗಂಗಾಧರ ನಂದಿ ಸಾಹಿತ್ಯ ಭವನದಲ್ಲಿ ಕನ್ನಡದ ಮೊದಲ ರಾಜ ಮನೆತನ ಕದಂಬರ ರಾಜ, ಮಯೂರವರ್ಮನ 1681ನೇ ಜಯಂತಿಯ ಅಂಗವಾಗಿ ಕನ್ನಡ ಸಾಮ್ರಾಜ್ಯೋತ್ಸವವನ್ನು ಆಚರಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷ ವೈ.ಬಿ. ಆಲದಕಟ್ಟಿ ಮಾತನಾಡಿ, ಕನ್ನಡವನ್ನು ತನ್ನ ಆಡಳಿತ ಭಾಷೆಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ ಕನ್ನಡದ ಮೊದಲ ಮನೆತನ ಕದಂಬ ಹಾಗೂ ಮೊದಲ ರಾಜ ಮಯೂರ ವರ್ಮನಾಗಿದ್ದು, ಕನ್ನಡ ಆಸ್ಮಿತೆ ಬೀಜವನ್ನು ಬಿತ್ತಿದ ಹೆಗ್ಗಳಿಕೆ ಇವನಿಗೆ ಸಲ್ಲುತ್ತದೆ ಎಂದು ಹೇಳಿದರು. ಉನ್ನತ ವ್ಯಾಸಂಗಕ್ಕಾಗಿ ಮಯೂರನು ಕಂಚಿಗೆ ತೆರಳಿದಾಗ ಪಲ್ಲವರಿಂದ ಅವಮಾನಿತನಾಗುತ್ತಾನೆ. ತನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದ ಪಲ್ಲವರ ವಿರುದ್ಧ ಖಡ್ಗ ಹಿಡಿದು, ಅವರ ಸೊಲ್ಲಡಗಿಸಿ, ಸ್ವಾಭಿಮಾನದ ಸಂಕೇತವಾಗಿ ಕದಂಬ ಸಾಮ್ರಾಜ್ಯ ನಿರ್ಮಾಣ ಮಾಡುತ್ತಾನೆ. ಅಪಾರ ಜಾಣ್ಮೆ ಹೊಂದಿದ್ದ ಮಯೂರನ ನೆತ್ತರಲ್ಲಿ ಕನ್ನಡತವಿತ್ತು. ಮೈಮನವೆಲ್ಲಾ ಕನ್ನಡ ನಾಡಿಗಾಗಿ ಹಂಬಲಿಸುತ್ತಿತ್ತು. ತಾಳಗುಂದ ಶಾಸನವು ಹಲ್ಮಿಡಿ ಶಾಸನಗಿಂತ ಹಳೆಯದಾಗಿದ್ದು, ಅದು ಮಯೂರನ ಸಾಧನೆಗೆ ಸಾಕ್ಷಿಯಾಗಿದೆ. ಸರ್ಕಾರವು ಕದಂಬೋತ್ಸವವನ್ನು ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸಬೇಕೆಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಎಚ್.ಬಿ. ಲಿಂಗಯ್ಯ ವಹಿಸಿದ್ದರು. ಹಿರಿಯ ಸಾಹಿತಿ ಡಾ.ಸತೀಶ ಕುಲಕರ್ಣಿ, ಹನುಮಂತಗೌಡ ಗೊಲ್ಲರ, ಶಂಕರ ಸುತಾರ, ಎನ್.ಬಿ. ಕಾಳೆ, ಎಸ್.ಎಂ. ಬಡಿಗೇರ, ರೇಣುಕಾ ಗುಡಿಮನಿ, ಶಿವಬಸವ ಮರಳಿಹಳ್ಳಿ, ರಾಜೇಂದ್ರ ಹೆಗಡೆ, ಎಸ್.ಆರ್. ಹಿರೇಮಠ, ಪರಶುರಾಮ ಕರ್ಜಗಿ ಮತ್ತಿತರರು ಉಪಸ್ಥಿತರಿದ್ದರು.