ಕನ್ನಡ, ತಮಿಳು ಸಹೋದರ ಭಾಷೆಗಳು: ಕಸಾಪ ಜಿಲ್ಲಾಧ್ಯಕ್ಷ ಪ್ರೊ.ಮಲ್ಲೇಶ್ ಗೌಡ

| Published : Jun 02 2025, 01:24 AM IST

ಕನ್ನಡ, ತಮಿಳು ಸಹೋದರ ಭಾಷೆಗಳು: ಕಸಾಪ ಜಿಲ್ಲಾಧ್ಯಕ್ಷ ಪ್ರೊ.ಮಲ್ಲೇಶ್ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ನಮ್ಮ ಟ್ರಸ್ಟ್‌ನಿಂದ ಸ್ಕಾಲರ್‌ಶಿಪ್ ನೀಡಲಿದ್ದೇವೆ, ಈ ಯೋಜನೆಯನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಕನ್ನಡ ಹಾಗೂ ತಮಿಳು ಸಹೋದರ ಭಾಷೆಗಳೇ ಹೊರತು ತಾಯಿ, ಮಕ್ಕಳ ಸಂಬಂಧಿ ಭಾಷೆಗಳಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ. ಮಲ್ಲೇಶ್‌ಗೌಡ ಹೇಳಿದರು.

ಶನಿವಾರ ತಾಲೂಕಿನ ಹೆತ್ತೂರು ಗ್ರಾಮದಲ್ಲಿ ಹೆತ್ತೂರು ಹೋಬಳಿ ಕಸಾಪ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಎರಡು ಸಾವಿರ ವರ್ಷಗಳ ಹಿಂದೆ ದ್ರಾವಿಡ ಭಾಷೆಗಳಿಂದ ಬೇರ್ಪಟ್ಟ ತಮಿಳು ಹಾಗೂ ಕನ್ನಡ ಎರಡು ಭಾಷೆಗಳು, ತಮ್ಮ ಗಟ್ಟಿತನದಿಂದಲೇ ಇಂದಿಗೂ ಉಳಿದಿವೆ. ಸತ್ವವಿಲ್ಲದ ಸಾಕಷ್ಟು ಭಾಷೆಗಳು ಈ ಅವಧಿಯಲ್ಲಿ ನಾಶವಾಗಿವೆ. ಹೆಚ್ಚು ಕನ್ನಡ ಮಾತನಾಡುವುದರಿಂದ ಕನ್ನಡ ಉಳಿದಿದೆ. ಭಾಷೆ ಹೆಚ್ಚೆಚ್ಚು ಪದಗಳ ಜೋಡಣೆಯಾದಾಗ ಸಮೃದ್ಧಿಗೊಳ್ಳಲಿದೆ. ಕನ್ನಡದ ಒಂದು ಭಾಷೆಗೆ ಹತ್ತಾರು ಪರ್ಯಾಯ ಪದಗಳಿರುವುದು ಕನ್ನಡದ ಭಾಷೆಯ ಸತ್ವ ಗಟ್ಟಿಯಾಗಿರಲು ಸಾಧ್ಯವಾಗಿದೆ ಎಂದು ತಿಳಿಸಿದರು. ಇಂದು ಕನ್ನಡ ಪ್ರಾದೇಶಿಕ ಭಾಷೆಯಾಗಿ ಉಳಿಯದೆ ಜಾಗತಿಕ ಭಾಷೆಯಾಗಿಯೂ ಬೆಳೆಯುತ್ತಿದೆ. ವಿದ್ಯಾರ್ಥಿಗಳು ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು, ಹಾಗೆಯೇ ವ್ಯಾವಹಾರಿಕ ಭಾಷೆಯಾಗಿ ಇತರೆ ಭಾಷೆಗಳನ್ನು ಕಲಿಯುವುದು ಅತ್ಯಗತ್ಯ. ಇಂದು ಯಾವುದೇ ಭಾಷೆಯ ಅಗತ್ಯವಿಲ್ಲ ಎಂದು ಹೇಳುವುದು ಸಾಧ್ಯವೇ ಇಲ್ಲ. ಕನ್ನಡವನ್ನು ಮೊದಲು ಪ್ರೀತಿಸಿ, ಅನ್ಯ ಭಾಷೆಯನ್ನು ಕಲಿಯಿರಿ ಎಂದರು. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಹೆಚ್ಚಿನ ಒತ್ತು ನೀಡಿದರೆ ಭವಿಷ್ಯ ಉತ್ತಮವಾಗಿರಲಿದೆ. ಕಲಿಯುವ ಸಮಯದಲ್ಲಿ ಅನ್ಯ ವಿಷಯಗಳಿಗೆ ಗಮನ ನೀಡಿದರೆ ಭವಿಷ್ಯ ಕಷ್ಟಕರವಾಗಿರಲಿದೆ. ಆದ್ದರಿಂದ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ವ್ಯಾಸಂಗದೆಡೆಗೆ ಹೆಚ್ಚಿನ ಒತ್ತು ನೀಡಿ ಎಂದು ಸಲಹೆ ನೀಡಿದರು.

ಚಿಂತಕ ಯಡೇಹಳ್ಳಿ ಮಂಜುನಾಥ್ ಮಾತನಾಡಿ, ವಿದ್ಯಾಭ್ಯಾಸದೊಂದಿಗೆ ಮಕ್ಕಳಲ್ಲಿ ಸಂಸ್ಕಾರ ತುಂಬುವುದು ಅಗತ್ಯ. ಉತ್ತಮ ಸಂಸ್ಕಾರ ಕಲಿತ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಲಿದ್ದಾರೆ. ಸಂಸ್ಕಾರ ಹೀನರು ದುರ್ಜನರಾಗಿ ಕುಟುಂಬಕ್ಕೆ, ಸಮಾಜಕ್ಕೆ ಮಾರಕವಾಗಲಿದ್ದಾರೆ ಎಂದರು.

ಮಲಬಾರ್ ಗೋಲ್ಡ್ ವ್ಯವಸ್ಥಾಪಕ ದಯಾನಂದ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ನಮ್ಮ ಟ್ರಸ್ಟ್‌ನಿಂದ ಸ್ಕಾಲರ್‌ಶಿಪ್ ನೀಡಲಿದ್ದೇವೆ, ಈ ಯೋಜನೆಯನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.

ಚಿಂತಕ ಪ್ರಸನ್ನಕುಮಾರ್, ನಿವೃತ್ತ ಪ್ರಾಧ್ಯಾಪಕಿ ಮೀನಾಕ್ಷಿ ಮಾತನಾಡಿದರು.

ವೇದಿಕೆಯಲ್ಲಿ ಹೆತ್ತೂರು ಹೋಬಳಿ ಘಟಕದ ಅಧ್ಯಕ್ಷ ರವಿಕುಮಾರ್, ಹೆತ್ತೂರು ಗ್ರಾಪಂ ಅಧ್ಯಕ್ಷ ನಾಗರಾಜ್, ನಾಗಭೂಷಣ್,ಸುಜೀತ್ ಮುಂತಾದವರಿದ್ದರು.