ಸಾರಾಂಶ
ಪ್ರತಿಯೊಬ್ಬ ಶಿಕ್ಷಕನು ತಾನು ಮಾಡುವ ಕೆಲಸವನ್ನು ಪ್ರೀತಿಸಬೇಕು. ತಾನು ಬೋಧಿಸುವ ವಿಷಯವನ್ನು ಪ್ರೀತಿಸಬೇಕು
ಕನ್ನಡಪ್ರಭ ವಾರ್ತೆ ಮೈಸೂರು
ಶಿಕ್ಷಕ ವೃತ್ತಿಯೇ ಶ್ರೇಷ್ಠವಾದ ವೃತ್ತಿ ಎಂದು ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಕೆ. ಮಂಟೆಲಿಂಗು ತಿಳಿಸಿದರು.ನಗರದ ಶ್ರೀ ಛಾಯಾದೇವಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶೈಕ್ಷಣಿಕ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತೆ ವಸ್ತುಗಳನ್ನು ತಯಾರಿಸಿ ಪ್ರದರ್ಶಿಸುವ ಒಂದು ಸೃಜನಾತ್ಮಕ ಕ್ರಿಯೆ. ಇದು ಬೋಧನಾ ಪ್ರಕ್ರಿಯೆಯನ್ನು ಅರ್ಥಪೂರ್ಣವಾಗಿಸಲು ಸಹಾಯಕವಾಗುತ್ತದೆ. ಮತ್ತು ಕಲಿಕಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತದೆ ಎಂದರು.
ಪ್ರತಿಯೊಬ್ಬ ಶಿಕ್ಷಕನು ತಾನು ಮಾಡುವ ಕೆಲಸವನ್ನು ಪ್ರೀತಿಸಬೇಕು. ತಾನು ಬೋಧಿಸುವ ವಿಷಯವನ್ನು ಪ್ರೀತಿಸಬೇಕು. ಹಾಗೂ ತಮ್ಮ ವಿದ್ಯಾರ್ಥಿಗಳನ್ನು ಪ್ರೀತಿಸಬೇಕು. ಆಗ ವಿದ್ಯಾರ್ಥಿಗಳಲ್ಲಿ ಕಲಿಕೆ ಎಂಬುದು ಉಂಟಾಗುತ್ತದೆ ಮತ್ತು ಬೋಧನಾ ಪ್ರಕ್ರಿಯೆಯು ಅರ್ಥಪೂರ್ಣವಾಗಿ ನಡೆಯುತ್ತದೆ ಎಂದು ಅವರು ಹೇಳಿದರು.ಇಂದಿನ ಯುವ ಪೀಳಿಗೆಯ ತಮ್ಮ ಸಾಕಷ್ಟು ಸಮಯವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯರ್ಥ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳು ಅಗತ್ಯವಾಗಿದೆ. ಆದರೆ ಅದನ್ನು ಮಿತವಾಗಿ ಹಿತವಾಗಿ ಬಳಸಿದಾಗ ಅದರ ಸದ್ಬಳಕೆ ಎಂಬುದು ಉಂಟಾಗುತ್ತದೆ ಎಂದು ಅವರು ಕಿವಿಮಾತು ಹೇಳಿದರು.
ಇದೇ ವೇಳೆ ಕಾಲೇಜಿನಲ್ಲಿ ಛಾಯಾ ಇ ನ್ಯೂಸ್ ಲೆಟರ್ ಎಂಬ ಶೈಕ್ಷಣಿಕ ಚಟುವಟಿಕೆಗಳ ವರದಿಯನ್ನು ಬಿಡುಗಡೆ ಮಾಡಲಾಯಿತು.ವಿದ್ಯಾ ವಿಕಾಸ್ ಕಾಲೇಜಿನ ಪ್ರಾಂಶುಪಾಲ ಡಾ. ರಾಜಗೋಪಾಲ್, ಕಾಲೇಜಿನ ಪ್ರಾಂಶುಪಾಲ ಅಂತೋನಿ ಪೌಲ್ ರಾಜ್ ಮೊದಲಾದವರು ಇದ್ದರು.